ಚುನಾಯಿತ ಪ್ರತಿನಿಧಿಗಳ ಸಂಬಳ ಹೆಚ್ಚಿಸಿಕೊಂಡಂತೆ ಧ್ವನಿ ಇಲ್ಲದವರ ಪಿಂಚಣಿ ಹೆಚ್ಚಿಸಿ

1 year ago

ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರ್ಸಿನ ಅನ್ವಯ ಸಂಬಳಗಳು ಹೆಚ್ಚಾಗುತ್ತವೆ. ಇನ್ನು ನಮ್ಮ ಚುನಾಯಿತ ಪ್ರತಿನಿಧಿಗಳು ತಮಗೆ ಬೇಕಾದಗಲ್ಲೆಲ್ಲ ತಮ್ಮ ಸಂಬಳ ಮತ್ತು ಇತರೆ ಭತ್ಯೆಗಳನ್ನ ಯಾವುದೇ ಚರ್ಚೆ ಇಲ್ಲದೆ ಪಾಸು ಮಾಡಿಕೊಳ್ಳುತ್ತಾರೆ. ಆದರೆ ಇವರಿಗೆ ಐದು ವರ್ಷಕ್ಕೊಮ್ಮೆ ವಿಧವಾ ಪಿಂಚಣಿ, ಹಿರಿಯ ನಾಗರಿಕರ ಪಿಂಚಣಿ, ಅಂಗವಿಕಲರ ಪಿಂಚಣಿ ಇವುಗಳನ್ನ ಹೆಚ್ಚಿಸಬೇಕೆಂದು ಅನಿಸುವುದಿಲ್ಲ‌. ಕಾರಣ ಇವರ ಪ್ರತಿನಿಧಿಗಳು ಯಾರು ಸದನದಲ್ಲಿ ಇರುವುದಿಲ್ಲ. ಮತ್ತು ಇವರ ಧ್ವನಿಯನ್ನು ಅಲ್ಲಿ ಕೇಳುವವರೇ ಇರುವುದಿಲ್ಲ.

ಚುನಾಯಿತ ಪ್ರತಿನಿಧಿಗಳು ದೇಶದ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಗಳು ಚೆನ್ನಾಗಿಲ್ಲವೆಂದು ಗೊತ್ತಿದ್ದರೂ ಸಹ ಬರಗಾಲ ಬರಲಿ, ಪ್ರವಾಹ ಬರಲಿ, ತಮ್ಮ ಸೌಕರ್ಯ ಸೌಲಭ್ಯಗಳನ್ನು ಮಾತ್ರ ಸಾಸವೆಕಾಳಿನಷ್ಟು ಕಡಿತಗೊಳಿಸಿಕೊಳ್ಳುವುದಿಲ್ಲ. ಜೊತೆಗೆ ಇವರು ಯಾರು ಸಹ ಬಾಡಿಗೆ ಮನೆಯಲ್ಲಿ ವಾಸಿಸುವವರು ಅಲ್ಲ. ಕಡುಬಡತನದಲ್ಲಿ ಇರುವವರು ಅಲ್ಲ, ಸಂಬಳ ಸಿಗದಿದ್ದರೆ ಹಸಿದ ಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಯಾರಿಗೂ ಇಲ್ಲ.

ಚುನಾಯಿತ ಪ್ರತಿನಿಧಿಗಳ ಈ ರೀತಿಯ ತಮ್ಮ ಸೌಕರ್ಯಗಳ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಒಮ್ಮತವಾಗಿ ಆಸಕ್ತಿಯನ್ನ ತೋರಿಸಿ ಶ್ರದ್ಧೆಯಿಂದ ಅದನ್ನು ಅನುಮೋದಿಸಿಕೊಳ್ಳುವ ಇವರು ಧ್ವನಿ ಇಲ್ಲದ, ಯಾವುದೇ ಸದನದಲ್ಲಿ ಪ್ರಾತಿನಿಧ್ಯ ಹೊಂದಿರದ ಅಸಂಘಟಿತ ವಲಯದ ಸೌಕರ್ಯ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲೂ ಕ್ರಮಗಳನ್ನು ಕೈಗೊಂಡರೆ ರಾಜಕಾರಣಿಗಳ ಮೇಲಿನ ಅಸಹನೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲು ಸಾಧ್ಯವಾದೀತು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply