ಅಮಿತ್ ಶಾ ವಿರುದ್ಧ ದಲಿತ ಸಂಘಟನೆಗಳ ಹುಮನಾಬಾದ್ ಬಂದ್ ಗೆ ಎಸ್‌ಡಿಪಿಐ ಬೆಂಬಲ

1 year ago

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವ್ಯಂಗ್ಯವಾಡಿದ ಗೃಹ ಸಚಿವ

ಬೀದರ್: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೀದರ್ ಜಿಲ್ಲಾ ಸಮಿತಿ ಸಭೆಯು ಪಕ್ಷದ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಮಕ್ಸೂದ್ ರವರ ಅಧ್ಯಕ್ಷತೆಯಲ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್ ಉಪಸ್ಥಿತಿಯಲ್ಲಿ ಜರುಗಿತು.

ಸಭೆಯಲ್ಲಿ ಬೀದರ್ ಜಿಲ್ಲೆಯ ವಿವಿಧ ಮುಖ್ಯವಾದ ವಿಷಯಗಳು ಚರ್ಚಿಸಲ್ಪಟ್ಟವು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆ ಖಂಡಿಸಿ, ಅಂಬೇಡ್ಕರ್ ಮೇಲಿನ ಇವರ ಅಸಹನೆ ಇಂದು ನಿನ್ನೆಯದಲ್ಲ. ಇವರ ಗುರು, ಮಾರ್ಗದರ್ಶಕರಲ್ಲಿ ಒಬ್ಬರಾದ ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದು ಜೀವ ಉಳಿಸಿಕೊಂಡ ಸಾವರ್ಕರ್ ಇವರಿಗೆ ಈ ದೇಶದ ಸಂವಿಧಾನವನ್ನು ಎಂದಿಗೂ ಒಪ್ಪಬೇಡಿ ಎಂದು ಬರೆದಿಟ್ಟು ಹೋಗಿದ್ದಾರೆ ಎಂದರು.

ಮನುಸ್ಮೃತಿ ಆರಾಧಕರು ಹೇಗಾದರೂ ಮಾಡಿ ಬಾಬಾ ಸಾಹೇಬರು ಬರೆದಿರುವ ಸಂವಿಧಾನವನ್ನು ಇಲ್ಲದಂತೆ ಮಾಡಲು ಅಂದಿನಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಅವರ ಈ ಅಸಹನೆ ಆಗಾಗ ಹೊರಬರುತ್ತದೆ. ಅದರ ಒಂದು ಉದಾಹರಣೆಯೇ ರಾಜ್ಯ ಸಭೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆ. ಇದರ ವಿರುದ್ಧ ಪಕ್ಷವು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಅವರು ಅದೇ ಸದನದಲ್ಲಿ ದೇಶದ ಜನರಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಹೆಸರನ್ನು ಹೆಚ್ಚಿನ ಬಾರಿ ಉಲ್ಲೇಖಿಸುತ್ತಿರುವ ಬಗ್ಗೆ ವ್ಯಂಗ್ಯವಾಡಿದ ಶಾ ಅವರ ಹೇಳಿಕೆಯನ್ನು ಖಂಡಿಸಿ ದಲಿತ ಸಂಘಟನೆಗಳು ನೀಡಿರುವ ನಾಳಿನ ಹುಮನಾಬಾದ್ ಬಂದ್ ಗೆ ಪಕ್ಷದ ಬೆಂಬಲ ಸೂಚಿಸಿದರು.

ಸಭೆಯ ಪ್ರಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿ ಬೀದರ್ ಜಿಲ್ಲೆಯ ಉಸ್ತುವಾರಿಯಾಗಿ ನೇಮಕವಾಗಿರುವ ಅಪ್ಸರ್ ಕೊಡ್ಲಿಪೇಟೆ ರವರಿಗೆ ಜಿಲ್ಲಾ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಿಸಿನ್ , ಹಾಫಿಜ್ ಇಬ್ರಾಹಿಂ ಹಾಗೂ ಇತರ ಜಿಲ್ಲಾ ಸಮಿತಿಯ ಸದಸ್ಯರು ಹಾಜರಿದ್ದರು.

Leave a Reply