ಅಮಿತ್ ಶಾ ವಜಾಕ್ಕೆ ಡಿಎಸ್ಎಸ್ ಒತ್ತಾಯ

1 year ago

ಯಾದಗಿರಿ: ಸಂವಿಧಾನ ಶಿಲ್ಪಿ  ಮಾನವ ಹಕ್ಕುಗಳ ಹಕ್ಕುಗಳ ಹೋರಾಟಗಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ  ಹೇಳಿಕೆ ನೀಡಿ, ಕೋಟ್ಯಂತರ ಭಕ್ತರುಅಭಿಮಾನಿಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ದಲಿತ ಮುಖಂಡ ಆರ್.ಎಸ್ ಮಾಲಗತ್ತಿ ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿ 75 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅದರ ಬಗ್ಗೆ ಕೂಲಂಕುಷ ಚರ್ಚೆ ಮಾಡುವುದು ಬಿಟ್ಟು ಅದರ ಕರ್ತೃವಿನ ಬಗ್ಗೆಯೇ ಮಾತನಾಡಿರುವುದು ಅವರ ಮನಸ್ಥಿತಿ ತೋರಿಸುತ್ತಿದೆ ಎಂದು ದೂರಿದರು.

ಗೃಹ ಸಚಿವ ಎನ್ನುವುದು ದೇಶದ ಪ್ರತಿಷ್ಠಿತ ಪದವಿ. ಜವಾಬ್ದಾರಿಯುತ ಸ್ಥಾನ. ಇಂತಹ ಸ್ಥಾನದಲ್ಲಿರುವ ವ್ಯಕ್ತಿ ದೇಶದ ದೇಗುಲವಾದ ಸಂಸತ್ ನಲ್ಲಿ‌ ನಿಂತು ಉದ್ದಟತನದ ಮಾತನಾಡಿದ್ದಾರೆ. ಈ ದೇಶಕ್ಕೆ ಆತ್ಮದಂತಿರುವ ಸಂವಿಧಾನ ಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ , ಕುರಿತು ಅವರಲ್ಲಿರುವ ಅಸಹನೆ, ಅಸಹಿಷ್ಣುತೆ, ಯಾವ ಮಟ್ಟಿನದು ಎಂಬುದು ಅರ್ಥವಾಗುತ್ತದೆ. ಈ ಮೂಲಕ ಇವರ ಸಂವಿಧಾನದ ಬಗೆಗಿನ ಮಮಕಾರ ಪ್ರೀತಿ ಬಟಾಬಯಲಾಗಿದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ವ್ಯಕ್ತಿಯಲ್ಲ, ದಮನಿತರ ಶಕ್ತಿ ತುಳಿತಕ್ಕೊಳಗಾದವರ ಆಶಾಕಿರಣ. ಇಡೀ ಜಗತ್ತು ಅವರ ಜ್ಞಾನವನ್ನು ಜಪಿಸಿದರೆ, ಸಂಘಪರಿವಾರ ಮತ್ತು ಅಮಿತ್ ಶಾ ನಂತಹ ಕುತ್ಸಿತ ಮನಸ್ಸಿನ ಮಂತ್ರಿ ಅವರ ಜಾತಿಯನ್ನು ಜರಿಯುತ್ತಿದೆ. ಅವರ ವಿದ್ವತ್ತಿಗೆ ಕರುಬುತ್ತದೆ. ಅವರ ಸಮಾಜಮುಖಿ ಚಿಂತನೆಯನ್ನು ಅರಗಿಸಿಕೊಳ್ಳಲಾಗದೆ ಅಲಬುತ್ತದೆ ಎಂಬುದು ಇವರ ಹೇಳಿಕೆಯಲ್ಲಿಯೇ ವೇದ್ಯವಾಗುತ್ತದೆ ಎಂದರು.

ಕೋಟ್ಯಂತರ ಜನರ ಆರಾಧ್ಯದೈವವಾಗಿರುವ ಡಾ. ಅಂಬೇಡ್ಕರ್ ರ ಬಗ್ಗೆ ಅವಹೇಳನಕಾರಿ‌ಯಾಗಿ ಮಾತನಾಡಿರುವ ಅಮಿತ್ ಶಾ ಅವರು ದೇಶದ  ಕ್ಷಮೆ ಕೋರಬೇಕು ಮತ್ತು ನೈತಿಕತೆ ಇದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಉಪತಹಶೀಲ್ದಾರರ ಮೂಲಕ ಸಲ್ಲಿಸಲಾಯಿತು.

ಸಂಗಣ್ಣ ಚಿಂಚೋಳಿ, ಬಸವರಾಜ ಕಟ್ಟಿಮನಿ, ಲಾಲಪ್ಪ ಹೊಸ್ಮನಿ,  ಮರೆಪ್ಪ ಮಾಳಹಳ್ಳಿ, ಬಸವಣ್ಣೆಪ್ಪ ಮಾಳಳ್ಳಿಕರ್, ರಾಯಪ್ಪ ಯತ್ನಾಳ, ದೇವರಾಜ ದೊರೆ, ಮರೆಪ್ಪ ಕಟ್ಟಿಮನಿ, ಖಂಡಪ್ಪ ಯಾಳಗಿ, ಮಹೇಶ ಸಿ ಕಟ್ಟಿಮನಿ, ಪರಮಣ್ಣ ಎಸ್. ಬಡಿಗೆರ, ಚಂದ್ರು ಯಾಳಗಿ, ಮಲ್ಲು ಕಟ್ಟಿಮನಿ, ರವಿ ಯಾಳಗಿ, ನಿಂಗಪ್ಪ ನಗನೂರ,ಶರಣು‌ ಮಾಳಳ್ಳಿಕರ್ ಸೇರಿದಂತೆ ಹಲವರು ಇದ್ದರು.

Leave a Reply