ಕರ್ಪೂರಿ ಅವರು ಮೂಲತಃ ಹಿಂದುಳಿದ ವರ್ಗಕ್ಕೆ ಸೇರಿದವರು. ಕ್ಷೌರಿಕ ಸಮುದಾಯದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬುದ್ಧಿವಂತ ಹಾಗೂ ಅತ್ಯುತ್ತಮ ಮಾತುಗಾರರಾಗಿದ್ದ ಅವರ ಪ್ರತಿಭೆಯನ್ನು ನೋಡಿ ಹಿರಿಯೊಬ್ಬರು ಅವರಿಗೆ ಠಾಕೂರ್ ಎಂಬ ಬಿರುದನ್ನು ನೀಡಿದರು. ಅದು ಅವರ ಹೆಸರಿನ ಜೊತೆಗೆ ಶಾಶ್ವತವಾಗಿ ಅಂಟಿಕೊಂಡಿತು.
ಭಾರತದಲ್ಲಿ ಜಮೀನ್ದಾರರ ದಬ್ಬಾಳಿಕೆಯಲ್ಲಿ ಅಪಾರವಾಗಿ ನಲುಗಿದ ರಾಜ್ಯಗಳಲ್ಲಿ ಆಂಧ್ರ ಮತ್ತು ಬಿಹಾರ ಪ್ರಮುಖವಾದವು. ಕರ್ಪೂರಿ ಠಾಕೂರ್ ತಾವು ಪಿ.ಯು.ಸಿ. ಮುಗಿಸಿ ಡಿಗ್ರಿ ಓದುವ ದಿನಗಳಲ್ಲಿಯೂ ಸಹ ತಮ್ಮ ಹಳ್ಳಿಯಲ್ಲಿ ಸೈಕಲ್ ಪ್ರಯಾಣ ಮಾಡುವಂತಿರಲಿಲ್ಲ. ಅಂತಹ ಜಾತೀಯತೆಯ ಅಸಮಾನತೆಯನ್ನು ಅನುಭವಿಸಿದವರು.
ಆಶ್ಚರ್ಯಕರ ಸಂಗತಿ ಎಂದರೆ, ಠಾಕೂರ್ ಎಂಬ ಮೇಲ್ವರ್ಗದ ಹೆಸರು ಅವರಿಗೆ ಬಂದಿತು. ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಅವರ ತಂದೆಯವರು ತನ್ನ ಹಳ್ಳಿಯಲ್ಲಿ ಕ್ಷೌರಿಕ ವೃತ್ತಿಯನ್ನು ಮುಂದುವರಿಸಿದ್ದಂತೆ.
ಆಂಧ್ರಪ್ರದೇಶದಲ್ಲಿ ಕೂಡಾ ದಲಿತರು ತಮ್ಮ ಹೆಸರಿನ ಜೊತೆಗೆ ರಾವ್ ಎಂಬ ಶಬ್ದವನ್ನು ಸೇರಿಸಿಕೊಂಡ ಕಾರಣ ಅಲ್ಲಿಯೂ ಸಹ ಬ್ರಾಹ್ಮಣ ಮತ್ತು ದಲಿತ ನಾಯಕರನ್ನು ಹೊರಗಿನವರು ಗುರುತಿಸುವುದು ಕಷ್ಟಕರವಾಗಿದೆ.
ನಿತೀಶ್ ಕುಮಾರ್ ಕರ್ಪೂರಿ ಠಾಕೂರ್ ಅವರ ಶಿಷ್ಯರು ಎಂದು ಹೇಳಬಹುದು. ಆದರೆ, ಇದೇ ಮಾತನ್ನ ಲಾಲು ಪ್ರಸಾದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಗೆ ಹೇಳಲು ನನಗೆ ಕಷ್ಟವಾಗುತ್ತದೆ.
ಕೊನೆಯ ಮಾತು- ಕರ್ಪೂರಿ ಠಾಕೂರ್ ಬಗ್ಗೆ ನನ್ನ ಮಿತ್ರ ಹಸನ್ ನಯಿಂ ಸುರಕೋಡ್ ಹದಿನೈದು ವರ್ಷಗಳ ಹಿಂದೆಯೇ ಕೃತಿ ರಚಿಸಿದ್ದು, ಇದೀಗ ಲೋಹಿಯಾ ಪ್ರಕಾಶನದಿಂದ ಎರಡನೇ ಮುದ್ರಣ ಕಂಡಿದೆ.
ರಾತ್ರಿ ಚೆನ್ನಬಸವಣ್ಣ ಅವರಿಗೆ ಪೋನ್ ಮಾಡಿದ್ದೆ. ಅವರು ಪಾಟ್ನಾ ನಗರದಲ್ಲಿದ್ದು ಇಂದಿನ ಕರ್ಪೂರಿ ಠಾಕೂರ್ ಅವರ ನೂರನೇ ಜನ್ಮದಿನದ ಕಾರ್ಯಕ್ರಮದಲ್ಲಿದ್ದಾರೆ. ಮೊನ್ನೆ 21 ರಂದು ಮುಂಬೈನಲ್ಲಿ ದಂಡವತೆ ಅವರ ನೂರನೇ ವರ್ಷದ ಕಾರ್ಯಕ್ರಮ ಮುಗಿಸಿ ಈಗ ಪಾಟ್ನಾ ನಗರದಲ್ಲಿ ಇದ್ದಾರೆ. ಸದ್ಯ ಕರ್ನಾಟಕದಲ್ಲಿ ಜೀವಂತ ಇರುವ ಶುದ್ಧ ಸಮಾಜವಾದಿ ಚಿಂತಕರಲ್ಲಿ ಚೆನ್ನಬಸವಣ್ಣ ಮುಖ್ಯರು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




