ಭದ್ರಾವತಿ ನಗರದಲ್ಲಿ ಬಿಗುವಿನ ವಾತಾವರಣ

8 months ago

ಶಿವಮೊಗ್ಗ / ಬೆಂಗಳೂರು: ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಭದ್ರಾವತಿಯ ಅಂಬೇಡ್ಕರ್ ವೃತ್ತದಲ್ಲಿ ಮೆರವಣಿಗೆ ಸಾಗುವಾಗ ಕೆಲವು ಕಿಡಿಗೇಡಿಗಳು ಪಾಕ್ ಪರ ದೇಶವಿರೋಧಿ ಘೋಷಣೆ ಕೂಗಿರುವುದರಿಂದ ಭದ್ರಾವತಿ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಕೇಳಿಬರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಿಡಿಯೊ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಅದು ಎಲ್ಲಿ ಹಾಗೂ ಯಾವಾಗ ಚಿತ್ರೀಕರಣಗೊಂಡಿದೆ. ನೈಜತೆ ದೃಢಪಟ್ಟರೆ ಘೋಷಣೆ ಕೂಗಿದವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದೇವೆ ಎಂದರು.

ಪಾಕ್ ಪರ ಘೋಷಣೆ ಮೊಳಗಿಸಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಮತ್ತು ಹಿಂದುತ್ವಪರ ಸಂಘಟನೆಗಳ ಕಾರ್ಯಕರ್ತರು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದ ಮಾಧವಾಚಾರ್ಯ ವೃತ್ತದ ಬಳಿ ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಮಾತನಾಡಿ, ಇರೋದು ಭಾರತದಲ್ಲಿ, ತಿನ್ನುವುದು ಈ ದೇಶದ ಅನ್ನ. ಪಾಕಿಸ್ತಾನದಲ್ಲಿ ತಿನ್ನೋಕೆ ಕೂಳಿಲ್ಲ. ಆದ್ರೂ ಈ ರೀತಿ ಯಾಕೆ ಹೇಳ್ತಾರೆ ಅಂದ್ರೆ ವಿಧಾನ ಸೌಧದಲ್ಲೇ ಅಂದವರ ಮೇಲೆಯೇ ಕ್ರಮ ಆಗಿಲ್ಲ. ಹೀಗಾಗಿ ಮತಾಂಧ ಇಸ್ಲಾಮಿಕ್ ಶಕ್ತಿಗಳು ಈ ರೀತಿ ಹೇಳಿದ್ದಾರೆ ಎಂದರು.

ಸಂಸದ ಸುಧಾಕರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಭಾರತಕ್ಕೆ ಜಿಂದಾಬಾದ್ ಹೇಳ್ತಾರಾ? ಇಲ್ಲ. ಇದು ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ. ವಿಧಾನಸೌಧದಲ್ಲಿಯೇ ಹೇಳಿದ್ದಾರೆ ಇನ್ನು ಈದ್ ಮಿಲಾದ್ ಮೆರವಣಿಗೆಯಲ್ಲಿ ಈ ಘೋಷಣೆ ಕೂಗಿರೋದು ವಿಶೇಷ ಅನಿಸುತ್ತಿಲ್ಲ ಎಂದರು.

Leave a Reply