ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುವುದು ಯಾವಾಗ?

2 years ago

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಏಪ್ರಿಲ್ 30ರಂದೇ ಎಸ್ಐಟಿ ನೋಟಿಸ್ ನೀಡಿದೆ. ಆದರೆ ಮೇ 1ರಂದು ತಮ್ಮ ವಕೀಲ ಅರುಣ್ ಜಿ. ಮೂಲಕ ಪ್ರಜ್ವಲ್ 7 ದಿನ ಕಾಲಾವಕಾಶ ಕೇಳಿದ್ದರು. “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ ಸಿಐಡಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದರು.

ಅದರಂತೆ ಪ್ರಜ್ವಲ್ ಪರ ವಕೀಲ ಅರುಣ್, ಎಸ್ಐಟಿ ಬಳಿ ಏಳು ದಿನ ಕಾಲಾವಕಾಶ ಕೇಳಿದ್ದರು. ಏಳು ದಿನ ಕಾಲಾವಕಾಶ ನೀಡಲು ನಿರಾಕರಿಸಿದ್ದ ಎಸ್ಐಟಿ ಅಧಿಕಾರಿಗಳು, ಕೂಡಲೇ ಹಾಜರಾಗುವಂತೆ ಹೇಳಿದ್ದರು. ಆದರೆ ಪ್ರಜ್ವಲ್ ಬಂದಿಲ್ಲ. ಇದೀಗ ಪ್ರಜ್ವಲ್ ತಾವೇ ಕೇಳಿಕೊಂಡಿದ್ದ ಹಾಗೆ ವಿಚಾರಣೆಗೆ ಹಾಜರಾಗಲು ಕೇಳಿದ್ದ ಕಾಲಾವಕಾಶ ಕೂಡ ಮುಗಿದಿದೆ.

ಈಗಾಗಲೇ ಇಂಟರ್ಪೋಲ್ ಮೂಲಕ 196 ದೇಶಗಳಿಗೆ ಆರೋಪಿ ಬಗ್ಗೆ ವಿವರವಾದ ಮಾಹಿತಿಯನ್ನು ಗೃಹ ಸಚಿವಾಲಯ ನೀಡಿದೆ. ವಿಚಾರಣೆಗೆ ಹಾಜರಾಗದಿದ್ದರೆ ಪ್ರಜ್ವಲ್ಗೆ ಮತ್ತಷ್ಟು ಸಂಕಷ್ಟ ಒದಗಲಿದೆ. ಹೀಗಾಗಿ, ಮೇ 15ರ ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗಿದ್ದು,ಈ ಬಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

ಮೇ 15ನೇ ತಾರೀಖು ಎಲ್ ಹೆಚ್ 764 ವಿಮಾನದಲ್ಲಿ ಪ್ರಜ್ವಲ್ ಬರುವ ಮಾಹಿತಿಯಿದೆ. ಜರ್ಮನಿಯ ಮ್ಯುನಿಚ್ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಆಗಿದೆ ಎಂದು ಇಮಿಗ್ರೇಶನ್ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ದೊರೆತಿದೆ.

ಪ್ರಜ್ವಲ್ ರೇವಣ್ಣ ಎರಡು ಬಾರಿ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು. ಮೇ 15ರಂದು ಎಲ್ ಹೆಚ್ 764 ಮೂನಿಚ್ ನಿಂದ ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸಲಿದ್ದು, ಟರ್ಮಿನಲ್ 2ಗೆ ರಾತ್ರಿ 12:30ಕ್ಕೆ ವಿಮಾನ ತಲುಪಲಿದೆ. ಈ ವಿಮಾನದಲ್ಲಿ ಪ್ರಜ್ವಲ್ ಬರುತ್ತಾರಾ ಅಥವಾ ಇನ್ನಷ್ಟು ಕಾಲ ಎಸ್ಐಟಿ ಅಧಿಕಾರಿಗಳನ್ನು ಆಟವಾಡಿಸಲಿದ್ದಾರಾ? ಎಂಬುದು ಅನಿಶ್ಚಿತವಾಗಿದೆ.

Leave a Reply