ಉಡುಪಿ: ಮೂರು ತಿಂಗಳಲ್ಲಿ ಮೂರನೇ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಗೆ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಭಾಷೆ, ಜಾತಿ ಧರ್ಮದವರಿಗೆ ಈ ಯೋಜನೆ ದಕ್ಕಬೇಕು. ಅಂಬೇಡ್ಕರ್, ಗಾಂಧಿ, ಶಿವಾಜಿ, ಅಕ್ಕಮಹಾದೇವಿ ಅವರಂಥ ಮಹಾಪುರುಷರ ಹಾದಿಯಲ್ಲಿ ಸಾಗಬೇಕು. ಸರಕಾರ ಬಂದು ಕೇವಲ 3 ತಿಂಗಳೊಳಗೆ ಈ ಗ್ಯಾರಂಟಿಗಳು ಜಾರಿಯಾಗುತ್ತಿವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮೊದಲಿಂದಲೂ ನುಡಿದಂತೆ ನಡೆಯುವ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತೋ ಆಗೆಲ್ಲ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುತ್ತ ಬಂದಿದೆ. ಈಗಾಗಲೇ ಶಕ್ತಿ, ಅನ್ನಭಾಗ್ಯ ಜಾರಿಯಾಗಿದೆ. ಈಗ ಗೃಹ ಜ್ಯೋತಿ ಆರಂಭವಾಗಿದೆ. ಆಗಸ್ಟ್ 18 ಅಥವಾ 20 ರಂದು ಗೃಹ ಲಕ್ಷ್ಮೀ ಜಾರಿಯಾಗಲಿದೆ ಎಂದರು.
ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಜನರಿಗೆ ಭರವಸೆ ತುಂಬುವುದಕ್ಕಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಎಷ್ಟೇ ಕಷ್ಟವಾದರೂ, ವಿರೋಧಿಗಳು ಏನೇ ಹೇಳಿದರೂ ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ, ನುಡಿದಂತೆ ನಡೆದೇ ನಡೆಯುತ್ತೇವೆ ಎಂದರು.
ಉಡುಪಿ ಜಿಲ್ಲೆಯಲ್ಲಿ 3,15,692 ಗ್ರಾಹಕರಿದ್ದು, ಈ ಪೈಕಿ 2,69,949 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.




