ಚಾಮರಾಜನಗರ: ಪ್ರಾಣಿಪ್ರಿಯರ ಅಕ್ಕಿರಾಜ ಇನ್ನು ಕೇವಲ ನೆನಪು ಮಾತ್ರ. ಹಿರಿ-ಕಿರಿಯರ ಮನಗೆದ್ದಿದ್ದ ಸೌಮ್ಯ ಸ್ವಭಾವದ ಅಕ್ಕಿರಾಜ ಎಂದೇ ಖ್ಯಾತಿ ಗಳಿಸಿದ್ದ ವಿನಾಯಗನ್ ಎಂಬ ಹೆಸರಿನ ಆನೆ ಹಠಾತ್ ಮೃತ ಪಟ್ಟಿದೆ.
ಬಂಡೀಪುರದ ಆನೆ ಶಿಬಿರದಲ್ಲಿದ್ದ ಅಕ್ಕಿರಾಜ ಕುಸಿದು ಬಿದ್ದು ಹಠಾತ್ ಸಾವಿಗೀಡಾಗಿದ್ದಾನೆ. ಈತನ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಂಡೀಪುರದ ರಾಮಾಪುರ ಆನೆ ಶಿಬಿರ ಪ್ರದೇಶದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿದ್ದ ಆನೆ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದ ಪಶುವೈದ್ಯರು ಮತ್ತು ಇತರ ಅರಣ್ಯ ಸಿಬ್ಬಂದಿ ಆನೆಯನ್ನು ತುರ್ತು ಚಿಕಿತ್ಸೆ ನೀಡಿ ಅದನ್ನು ಎಚ್ಚರಿಸುವ ಕೆಲಸ ಮಾಡಿದರೂ ಅದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಸಾವಿಗೆ ನಿಖರವಾದ ಕಾರಣವು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಲಿದೆ ಎಂದು ಬಿಟಿಆರ್ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಯಾಗಲು ವಿನಾಯಗನ್ ಆನೆಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದರು.




