ತಮಿಳುನಾಡಿನಲ್ಲಿ ಸುಧಾರಣೆಯ ಹೊಸ ಅಧ್ಯಾಯ ಬರೆದ ಟಿ.ಎಂ.ಕೃಷ್ಣ ಮತ್ತು ಪೆರುಮಾಳ್ ಮುರುಗನ್

2 years ago

ಪ್ರಿಯರೇ, ಮೊನ್ನೆ ಪ್ರಜಾವಾಣಿ ಗೆ ಟಿ.ಎಂ.ಕೃಷ್ಣ ಕುರಿತು ಲೇಖನ ಬರೆಯುವಾಗ ನನಗೆ ಕೇವಲ ಐನೂರು ಶಬ್ದಗಳಲ್ಲಿ ಲೇಖನ ಬರೆಯಬೇಕಾಗಿತ್ತು. ಹಾಗಾಗಿ ಈ ವಿಷಯ ಬರೆಯಲಾಗಲಿಲ್ಲ.

ಕೃಷ್ಣ ಮತ್ತು ಪೆರುಮಾಳ್ ಮುರುಗನ್ ಇಬ್ಬರೂ ಜೊತೆಗೂಡಿ ಸಂಗಂ ಯುಗದ ತಮಿಳು ಪ್ರಾಚೀನ ಕಾವ್ಯವನ್ನು ಸಂಗೀತಕ್ಕೆ ಅಳವಡಿಸುತ್ತಿದ್ದಾರೆ. ಮುರುಗನ್ ಕಾವ್ಯವನ್ನು ಆಯ್ಕೆ ಮಾಡಿದರೆ, ಟಿ.ಎಂ. ಕೃಷ್ಣ ಅವರು ಅವುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾರೆ.

ಇಷ್ಟು ಮಾತ್ರವಲ್ಲದೆ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತಾಗಿ ಕಾವ್ಯ ರಚಿಸಿ, ರಾಗ ಸಂಯೋಜನೆಯೊಂದಿಗೆ ಹಾಡಿರುವ ಒಂದು ಹಾಡು ಈಗ ತಮಿಳುನಾಡಿನ ತಳವರ್ಗದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ.

ವಿಕೃತ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಂದ ನಾಯಕ ವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ಅನನ್ಯ ರತ್ನ ಎಂಬ ಅರ್ಥಗರ್ಭಿತ ಸಾಲುಗಳ ಈ ಕಾವ್ಯವನ್ನು ಪೆರುಮಾಳ್ ಮುರುಗನ್ ರಚಿಸಿದ್ದರೆ, ಟಿ.ಎಂ. ಕೃಷ್ಣ ಅದೇ ತಲ್ಲೀನತೆ ಹಾಗೂ ಶ್ರದ್ಧೆಯಿಂದ ಭಾವಪೂರ್ಣವಾಗಿ ಹಾಡಿದ್ದಾರೆ.

ಸಾಹಿತ್ಯ ಮತ್ತು ಸಂಗೀತ ಅಥವಾ ಸಾಂಸ್ಕೃತಿಕ ಲೋಕದ ಎರಡು ಪ್ರತಿಭೆಗಳು ಒಟ್ಟುಗೂಡಿದರೆ, ಏನೆಲ್ಲಾ ಮಾಡಬಹುದು ಎಂಬುದನ್ನು ಈ ಎರಡು ಪ್ರತಿಭೆಗಳು ಮಾಡಿತೋರಿಸಿದ್ದಾರೆ. ಸಂಗೀತವನ್ನು ದಲಿತರ ಮತ್ತು ತಳವರ್ಗದ ಕೇರಿಗೆ ಕೊಂಡೊಯ್ಯುತ್ತಿದ್ದಾರೆ. ಇದು ತಮಿಳುನಾಡಿನಲ್ಲಿ ಬ್ರಾಹಣ್ಯವನ್ನು ಆರಾಧಿಸುವವರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. ಯಾರೊಬ್ಬರೂ ಈವರೆಗೆ ಟಿ.ಎಂ. ಕೃಷ್ಣ ಅವರ ಸಂಗೀತ ಕುರಿತಾಗಿ ತುಟಿಬಿಚ್ಚಿ ಮಾತನಾಡಲು ಸಾಧ್ಯವಾಗಿಲ್ಲ. ಇದು ಅವರ ಪ್ರಖರ ಪ್ರತಿಭೆಗೆ ಸಾಕ್ಷಿಯಾಗಿದೆ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply