ಸಲ್ಮಾನ್ ಖಾನ್ ಗೆ ಬೆದರಿಕೆ ಪ್ರಕರಣ: ರಾಯಚೂರಿನಲ್ಲಿ ಬಂಧನ

2 years ago

ಬೆಂಗಳೂರು: ಬ್ಯಾಡ್ ಬಾಯ್ ಖ್ಯಾತಿಯ ಬಾಲಿವುಡ್  ನಟ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದು ರಾಯಚೂರಿನ ಸೊಹೆಲ್ ಪಾಷಾ ಎನ್ನುವುದು ಬೆಳಕಿಗೆ ಬಂದಿದೆ. ನಟ ಸಲ್ಮಾನ್ ಖಾನ್ ಮತ್ತು ಅವರ ಸಿನಿಮಾದ ಗೀತೆ ರಚನೆಕಾರನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಹಾಕಲಾಗಿತ್ತು.

ನವೆಂಬರ್ 7ರಂದು ಮುಂಬೈ ನಗರದ ಪೊಲೀಸರ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿ,ನನಗೆ 5 ಕೋಟಿ ನೀಡದಿದ್ದರೆ, ಸಲ್ಮಾನ್ ಖಾನ್ ಮತ್ತು ‘ಮೈ ಸಿಕಂದರ್ ಹೂಂ’ ಗೀತೆಯ ರಚನೆಕಾರನನ್ನು ಕೊಲ್ಲುವೆ ಎಂದು ಬೆದರಿಕೆ ಹಾಕಲಾಗಿತ್ತು. ಬಾಬಾ ಸಿದ್ದಿಕಿ ಹತ್ಯೆ ನಂತರ ನಮ್ಮ ಈ ಬೆದರಿಕೆ ಸಂದೇಶ ಸಾಕಷ್ಟು ಸಂಚಲನ ಮೂಡಿಸಿತ್ತು. ಬಾಲಿವುಡ್ ಅಂಗಳದಲ್ಲಿ ಆತಂಕಕ್ಕೂ ಕೂಡ ಕಾರಣವಾಗಿತ್ತು.

ಇದನ್ನು ಸವಾಲಾಗಿ ಸ್ವೀಕರಿಸಿದ ಮುಂಬೈ ನಗರದ ಅಪರಾಧ ವಿಭಾಗದ ಪೊಲೀಸರು ಸಂದೇಶ ಬಂದ ಫೋನ್ ಸಂಖ್ಯೆ ಮಾಹಿತಿಯೊಂದಿಗೆ ತನಿಖೆ ಚುರುಕುಗೊಳಿಸಿದ್ದರು. ಆಗ ಸಿಮ್ ಕಾರ್ಡ್ ಮೂಲ ರಾಯಚೂರು ಜಿಲ್ಲೆಯ ಮಾನ್ವಿ ಎಂಬುದು ಪತ್ತೆಯಾಗಿದೆ.

ಅದರಂತೆ ಮುಂಬೈ ಪೊಲೀಸರು ಮಾನ್ವಿಗೆ ಆಗಮಿಸಿ ಒಂದು ವಾರ ಕಾಲ ಸ್ಥಳೀಯ ವಸತಿ ಗೃಹವೊಂದರಲ್ಲಿ ಮೊಕ್ಕಾಂ ಹೂಡಿ ಆರೋಪಿ ಪತ್ತೆಗೆ ಜಾಲ ಬೀಸಿದ್ದರು. ಬೆದರಿಕೆ ಕರೆಗೆ ಬಳಸಿದ ಫೋನ್ ನಂಬರ್ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ವೆಂಕಟೇಶ ನಾರಾಯಣ ಎಂಬುವವರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿದ್ದರು. ನಂತರ ಅಲ್ಲಿಗೆ ತೆರಳಿ ವೆಂಕಟೇಶ ನಾರಾಯಣ ಅವರನ್ನು ವಿಚಾರಣೆಗೊಳಪಡಿಸಿದಾಗ ಅವರ ಫೋನ್ ಗೆ ಇಂಟರ್ನೆಟ್  ಬಳಕೆಯಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಆದರೆ ವೆಂಕಟೇಶ ನಾರಾಯಣ್ ಅವರ ಫೋನ್ಗೆ ವಾಟ್ಸಪ್ ಇನ್ಸ್ಟಾಲ್ ಮಾಡಲು ಒನ್-ಟೈಮ್ ಪಾಸ್ವರ್ಡ್ ಬಂದಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಅವರನ್ನು ವಿಚಾರಿಸಿದಾಗ, ನವೆಂಬರ್ 3ರಂದು ಮಾನ್ವಿ ಉದ್ಯಾನದ ಹತ್ತಿರ ಅಪರಿಚಿತರು ನನ್ನ ಬಳಿಗೆ ಬಂದು ಕರೆ ಮಾಡಲು ಫೋನ್ ಇದೆಯೇ ಎಂದು ಕೇಳಿ, ಪೋನ್ ಪಡೆದಿದ್ದರು ಎಂದು ತಿಳಿಸಿದರು. ಅವರಿಂದ ಖಚಿತ ಮಾಹಿತಿ ಪಡೆದ ಪೊಲೀಸರು ನಂತರ ಮಾನ್ವಿ ಠಾಣೆ ಪೊಲೀಸರ ನೆರವಿನೊಂದಿಗೆ ಸೊಹೆಲ್ ಪಾಷಾನನ್ನು ವಶಕ್ಕೆ ತೆಗೆದುಕೊಂಡು ಮಾನ್ವಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇದಾದ ನಂತರ ಆತನನ್ನು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.

Leave a Reply