ಆರ್ ಬಿ ಐ ‌ಸ್ಥಾಪನೆ ಹಿಂದಿದೆ ಅಂಬೇಡ್ಕರ್ ಅಧ್ಯಯನದ ದೂರದೃಷ್ಟಿ: ಡಾ.ಎಚ್.ಸಿ.ಮಹದೇವಪ್ಪ

1 year ago

ಏಪ್ರಿಲ್ 1 ನೇ ದಿನಾಂಕವನ್ನು ಕೆಲವರು ಅತ್ಯಂತ ಸುಲಭವಾಗಿ “ಮೂರ್ಖರ ದಿನ” ಎಂದು ಕರೆಯುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ದಿನವು ಭಾರತದ ಆರ್ಥಿಕತೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ತರ ದಿನವಾಗಿರುವ ವಿಷಯವನ್ನು ನಾವ್ಯಾರೂ ಮರೆಯುವ ಹಾಗಿಲ್ಲ.

1917 ರಲ್ಲಿ ಬರೋಡಾ ಸ್ಕಾಲರ್ ಶಿಪ್ ಕೊನೆಯಾದ ಬಳಿಕ ಬಾಬಾ ಸಾಹೇಬರು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗುವಂತಹ ಪ್ರಸಂಗ ಬಂದಿತು. ಆದರೆ ಅದಾದ ನಂತರದಲ್ಲಿ ಅವರು ಕೈಗೆತ್ತಿಕೊಂಡಿದ್ದ ಡಾಕ್ಟರೇಟ್ ಅನ್ನು ಮುಂದಿನ 4 ವರ್ಷಗಳಲ್ಲಿ ಮುಗಿಸಬೇಕೆಂಬ ಸೂಚನೆಯೊಂದಿಗೆ ಅವರಿಗೆ ಮತ್ತೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪ್ರವೇಶ ದೊರೆಯಿತು. ಈ ಅವಧಿಯಲ್ಲಿ ಅತ್ಯಂತ ಗಂಭೀರ ಪ್ರಮಾಣದ ಅಧ್ಯಯನ ಮೂಲಕ “ಭಾರತದ ರೂಪಾಯಿಯ ಸಮಸ್ಯೆಗಳು” ಎಂಬ ವಿಷಯದ ಮೇಲೆ ಡಾಕ್ಟರೇಟ್ ಪ್ರಬಂಧವನ್ನು ಮಂಡಿಸಿ ಭಾರತದ ಆರ್ಥಿಕತೆಯೆಡೆಗೆ ಹೊಸ ದಿಕ್ಕು ತೋರಿದರು.

ಬಾಬಾ ಸಾಹೇಬರ ಈ ಮಹತ್ವದ ಕೃತಿಯನ್ನು ಆಧರಿಸಿ ಈ ದಿನ ಅಂದರೆ 1935 ರ ಏಪ್ರಿಲ್ 1 ನೇ ತಾರೀಕಿನಂದು ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿ ಭಾರತದ ರೂಪಾಯಿ ಮೌಲ್ಯಾಧಾರಿತವಾಗಿ ಹಲವಾರು ರೂಪುರೇಷೆಗಳು ರೂಪುಗೊಂಡವು. ಹೀಗಾಗಿ ನನ್ನ ಪ್ರಕಾರ ಭಾರತೀಯೇತರರು ಏಪ್ರಿಲ್ ಒಂದನೇ ತಾರೀಕನ್ನು ಮೂರ್ಖರ ದಿನ ಎಂದು ಕರೆದಾಗ ಆಗದ ಬೇಸರವು ಭಾರತೀಯರು ಕರೆದಾಗ ಆಗುತ್ತದೆ.

ಮುಂದುವರೆದು ಹೇಳುವುದಾದರೆ, ಅರ್ಥಶಾಸ್ತ್ರದ ವಿಷಯದಲ್ಲಿ ವಿದೇಶದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರೆಂದರೆ ಅದು ಬಾಬಾ ಸಾಹೇಬರು. ಕೃಷಿ ಮತ್ತು ಕೈಗಾರಿಕೆಗಳು ಭಾರತದ ಆರ್ಥಿಕತೆಯನ್ನು ಮುನ್ನಡೆಸುವ ಮಹತ್ತರ ಸಂಗತಿಗಳು ಎಂದು ನಂಬಿದ್ದ ಬಾಬಾಸಾಹೇಬರು ಕೃಷಿಯೇ ಭಾರತದ ಪ್ರಾಥಮಿಕ ಕೈಗಾರಿಕೆ ಎಂದು ನಂಬಿದ್ದರು. ಅಂಬೇಡ್ಕರ್ ಅವರ ಈ ಆಲೋಚನೆಗಳೇ ಭಾರತದ ಆಹಾರ ಭದ್ರತಾ ಕಾಯ್ದೆಗೆ ಮೂಲವೆಂದು ಶರದ್ ಪವಾರ್ ಹಿಂದೊಮ್ಮೆ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ.

ಹಿಲ್ಟನ್ ಯಂಗ್ ಆಯೋಗಕ್ಕೆ ಬಾಬಾಸಾಹೇಬರು ನೀಡಿದ ಸಲಹೆಗಳು ಮತ್ತು ಜ್ಞಾನದ ಆಧಾರದ ಮೇಲೆಯೇ ಈ ದಿನ ಭಾರತದ ಪಾಲಿಗೆ ವರವಾಗಿರುವ ರಿಸರ್ವ್ ಬ್ಯಾಂಕ್ ಎಂಬುದು ಸರಿಯಾಗಿ 87 ವರ್ಷಗಳ ಹಿಂದೆ ಈ ದಿನ ಅಸ್ತಿತ್ವಕ್ಕೆ ಬಂದಿತು.

ಹೀಗಾಗಿ ನನ್ನ ಪಾಲಿಗೆ ಏಪ್ರಿಲ್ 1 ಎಂಬುದು ಸುಳ್ಳುಗಳನ್ನು ಹಬ್ಬಿಸಿಕೊಂಡು, ಕೋಮುವಾದ ಹರಡುತ್ತಾ ಬದುಕುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪಾಲಿಗೆ ಮೂರ್ಖರ ದಿನವಾಗಿರಬಹುದು. ಆದರೆ ಭಾರತದ ಆರ್ಥಿಕತೆಯ ಅನುಕೂಲಕರ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ಎಲ್ಲಾ ಭಾರತೀಯರ ಪಾಲಿಗೂ ಕೂಡಾ ಇದು ಬುದ್ಧಿವಂತರ ದಿನವಾಗಿದೆ ಎಂದು ಹೇಳಲು ನಾನು ಬಯಸುತ್ತೇನೆ.

– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply