ಅಂಬೇಡ್ಕರ್ ವಾದವನ್ನು ಸಿನಿಮಾ ಕಥನದಲ್ಲಿ ಅಳವಡಿಸಿಕೊಳ್ಳುವ ಚಳುವಳಿ ನಮ್ಮ ಕಾಲದ ವಿಸ್ಮಯ

2 years ago

‘ಪೆರಿಯೋರಂ ಪೆರುಮಾಳ್’ ಸಿನಿಮಾದಲ್ಲಿ ಅಂಬೇಡ್ಕರ್ ವಾದ ತೊದಲುನುಡಿಗಳಲ್ಲಿತ್ತು. ನಮ್ಮನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಇನ್ನೂ ಎಷ್ಟು ಸಮಯ ಬೇಕು ಎಂದು ಪೆರುಮಾಳ್ ಜಾತಿ ಸಮಾಜವನ್ನು ಪ್ರಶ್ನಿಸಿದ್ದ. ಮೇಲ್ಜಾತಿಗಳಿಗೆ ‘ನೇಗಿಲನ್ನು ಹಿಡಿದ ಕೈ ಕತ್ತಿಯನ್ನು ಹಿಡಿಯಬಲ್ಲದು’ ಎಂದು ವಿನಯದಿಂದ ಹೇಳಿದ್ದ.

ಆದರೆ “ಕರ್ಣನ್” ಸಿನಿಮಾದಲ್ಲಿ ಕರ್ಣನ್ ದಮನಿತರ ಹಕ್ಕಿಗಾಗಿ ಕತ್ತಿಯನ್ನು ಹಿಡಿಯುತ್ತಾನೆ. ‘ಕರ್ಣನ್’ ಅಂಬೇಡ್ಕರ್ ವಾದದ ನೇರವಾದ ಸ್ಟೇಟ್ ಮೆಂಟ್. ‘ನಮ್ಮ ಆತ್ಮ ಘನತೆಯನ್ನು ಮರಳಿ ಕೊಡಿ’ ಎಂದು ವಂಚಿತ ಸಮುದಾಯಗಳು ಕರ್ಣನ್ ನೇತೃತ್ವದಲ್ಲಿ ಸಂಘಟಿತರಾಗುತ್ತಾರೆ. ಅಂಬೇಡ್ಕರ್ ಅವರು 1930,40 ದಶಕಗಳಲ್ಲಿ ‘ದಮನಿತ ಸಮುದಾಯದ reclaiming self respect, dignity ನನ್ನ ಅಧ್ಯಯನ, ಸಂಘಟನೆ, ರಾಜಕಾರಣ, ಹೋರಾಟದ ಗುರಿ’ ಎಂದು ವಿವರಿಸಿದರು. ‘ಕರ್ಣನ್’ ಸಿನಿಮಾ ಸಹ reclaiming self respect ಗಾಗಿ ನಡೆಸುವ ಹೋರಾಟ. ಇಲ್ಲಿ ಪೋಡಿಯಾಂಕುಲಂ ಗ್ರಾಮದವರಿಗೆ ಬಸ್ ನಿಲ್ದಾಣ ಒಂದು ಅವಶ್ಯಕತೆ. ಅದರ ಮೂಲಕ ಶತಮಾನಗಳ ದೌರ್ಜನ್ಯದಿಂದ ಹೊರಬಂದು ಸ್ವತಂತ್ರರಾಗುವ ತುಡಿತ. ಇದನ್ನು ಮಾರಿ ಸೆಲ್ವರಾಜ್ ಎದೆಗೆ ಗುಂಡು ಹೊಡೆದಂತೆ  ಸಿನಿಮಾಟಿಕ್ ನ ಎಲ್ಲಾ ಸಾಧ್ಯತೆಗಳೊಂದಿಗೆ ನಿರೂಪಿಸಿದ್ದಾರೆ.

‘ನಾವು ಬಸ್ ಸ್ಟಾಂಡ್ ಗಾಗಿ ಗಲಾಟೆ ಮಾಡುತ್ತಿರುವುದಕ್ಕಾಗಿ ಅವರು ನಮ್ಮನ್ನು ವಿರೋಧಿಸುತ್ತಿಲ್ಲ, ಆದರೆ ನಾವು ಎದ್ದು ನಿಂತಿದ್ದೇವೆ, ಮರಳಿ ಪ್ರಶ್ನಿಸುತ್ತಿದ್ದೇವೆ, ನಾವು ತಲೆ ಮಂಡು ಸುತ್ತಿಕೊಂಡಿರುವುದು, ಮುಖಕ್ಕೆ ಮುಖ ಕೊಟ್ಟು ಮಾತನಾಡುವುದು ಅವರಿಗೆ ಸಹಿಸಲು ಸಾದ್ಯವಾಗುತ್ತಿಲ್ಲ’ ಎಂದು ಪೋಡಿಯಾಂಕುಲಂ ಗ್ರಾಮದವರಿಗೆ ಮನವರಿಕೆಯಾಗಿದೆ. ಈ ಅರಿವು ಮತ್ತು ಪ್ರಜ್ಞೆಯನ್ನು ಮಾರಿ ಸೆಲ್ವರಾಜ್ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿದ್ದಾರೆ, ಬೆಳೆಸಿದ್ದಾರೆ ಮತ್ತು ಜಾತಿ ಸಮಾಜಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಚಾಟಿ ಬೀಸಿದ್ದಾರೆ.

ಕ್ಲೈಮ್ಯಾಕ್ಸ್ ನಲ್ಲಿ ಕರ್ಣನ್  ಇನ್ಸ್ಪೆ ಕ್ಟರ್ಗೆ ಪ್ರಶ್ನಿಸುತ್ತಾನೆ ‘ನಿಮ್ಮ ಅಪ್ಪನ ಹೆಸರು ಕಂದಯ್ಯ, ನೀನು ಕನ್ನಾಬಿರಾನ್ ಎಂದು ಹೆಸರಿಟ್ಟುಕೊಳ್ಳಬಹುದು, ನಾವ್ಯಾಕೆ ಮಾದಸ್ವಾಮಿ ಅವನ ಮಗ ಕರ್ಣನ್ ಅಂತ ಹೆಸರಿಟ್ಟುಕೊಳ್ಳಬಾರದು’.

ಇದು 80ರ ದಶಕದ ದಸಂಸದ ಭಾಷೆ, ದನಿ. ಮಾರಿ ಸೆಲ್ವರಾಜ್ ‘ನಾವು ಸುಮ್ಮನಿಲ್ಲ, ಎಚ್ಚೆತ್ತಿದ್ದೇವೆ’ ಎಂದು ಹೇಳುತ್ತಿದ್ದಾನೆ. ತಮಿಳು ಸಿನಿಮಾಗಳಲ್ಲಿ ಈ ತರಹದ ಕತೆ, ಪ್ರಕಾರಗಳು ಹೊಸದೇನಲ್ಲ. ಆದರೆ ಸ್ಪಷ್ಟವಾದ statement ಕೊಟ್ಟಿದ್ದು ಮಾತ್ರ ರಂಜಿತ್ ಮತ್ತು ಮಾರಿ ಸೆಲ್ವರಾಜ್. They have arrived. They deconstructing the narrative.

ಹಳ್ಳಿ ಹಿನ್ನೆಲೆಯ ಇದುವರೆಗಿನ ತಮಿಳು ಸಿನಿಮಾಗಳ ಶೈಲಿ, ಭಾಷೆ, ಕಥನ, ನಿರೂಪಣೆ ಎಲ್ಲವನ್ನೂ ಸಂಪೂರ್ಣವಾಗಿ ಬದಲಿಸಿರುವ ಮಾರಿ ಸೆಲ್ವರಾಜ್ ‘ನೋಡಿ ಇದು ಸಮಕಾಲೀನ ಸಂದರ್ಭದ ಕಥನ ಕಟ್ಟುವಿಕೆ’ ಎಂದು ಸ್ಪಷ್ಟ ದನಿಯಲ್ಲಿ ಹೇಳುತ್ತಾನೆ ಮತ್ತು ಸೆಲ್ವರಾಜ್ ರ ಕರ್ತಾರನ ಕಮ್ಮಟಕ್ಕೆ ನಾನಿದ್ದೇನೆ ಮುನ್ನುಗ್ಗು ಎಂದು ಅದ್ಬುತವಾಗಿ ಬೆಂಬಲಿಸಿರುವ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಒಬ್ಬ ಜೀನಿಯಸ್. ಮಾರಿ ಸೆಲ್ವರಾಜ್ ಹೇಳಲು ಹೊರಟಿರುವ “reclaimation of dignity” ಎಲ್ಲಾ ಆಶಯಗಳು ಮತ್ತು ಅದರ ಸಂಕೋಲೆಗಳ ಕಳಚುವಿಕೆ ತುರ್ತುನ್ನು ಧನುಷ್ ನಂತಹ ಮಾಗಿದ ನಟ ಸಮರ್ಥವಾಗಿ ಅರಿತಿದ್ದಾನೆ. ಕರ್ಣನ್ ಪಾತ್ರದ ಜೀವಂತಿಕೆಯನ್ನು ಕಾಪಿಟ್ಟಿದ್ದಾನೆ.

‘ಕರ್ಣನ್’ ಸಿನಿಮಾ ದ ಮೂಲಕ ಮಾರಿ ಸೆಲ್ವರಾಜ್  ‘ನೀವು ಸಿನಿಮಾವನ್ನು ಸಿದ್ದ ಮಾದರಿಯಿಂದ delearning and deconstructing ಮಾಡಲೇಬೇಕು, ನಾನಂತೂ ಈ ಹಾದಿಯಲ್ಲಿ ಮುನ್ನುಗ್ಗುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂಬೇಡ್ಕರ್ ವಾದವನ್ನು ಸಿನಿಮಾ ಕಥನದಲ್ಲಿ ಅಳವಡಿಸಿಕೊಳ್ಳುವ ಈ ಚಳುವಳಿ ನಮ್ಮ ಕಾಲದ ವಿಸ್ಮಯ. Yes he has arrived.

-ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply