ಬೆಂಗಳೂರು: ಪ್ರತಿಭೆಗೆ ಬಡತನವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ ಮಲೆನಾಡಿನ ಕೋಗಿಲೆ ಅಕ್ಷತ ಮಲ್ನಾಡ್. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪುಟ್ಟ ಹಳ್ಳಿಯಿಂದ ಬಂದ ಈ ಪ್ರತಿಭೆ, ಇಂದು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ, ಕೇವಲ ಪರಿಶ್ರಮ ಮತ್ತು ನಟನೆಯ ಮೇಲಿನ ಅಪಾರ ಪ್ರೀತಿಯಿಂದ ಅಕ್ಷತ ಇಂದು ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಪ್ರಮುಖ ಪಾತ್ರದವರೆಗೆ ಬಂದು ತಲುಪಿದ್ದಾರೆ.
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
- ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ
ಶಾಲಾ ರಂಗಭೂಮಿಯಿಂದ ಎನ್.ಎಸ್.ಡಿ ವರೆಗಿನ ಪಯಣ: ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ವೇಳೆ ಸಣ್ಣಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಕ್ಷತಾರಲ್ಲಿದ್ದ ನಟನಾ ಚತುರತೆಯನ್ನು ಗುರುತಿಸಿದ್ದು ಅವರ ಶಿಕ್ಷಕಿ ಸವಿತಾ ಮೇಡಂ. ಅವರ ಮಾರ್ಗದರ್ಶನದಂತೆ ‘ಡಿಪ್ಲೋಮಾ ಇನ್ ಥಿಯೇಟರ್ ಆರ್ಟ್ಸ್’ ಮುಗಿಸಿದ ಅಕ್ಷತಾರಿಗೆ ಆರಂಭದಲ್ಲಿ ಮನೆಯವರಿಂದ ಅಷ್ಟೇನು ಬೆಂಬಲ ಸಿಗಲಿಲ್ಲ. ಆದರೂ ಎದೆಗುಂದದೆ ರಂಗ ತರಬೇತಿ ಪಡೆದು, ಮಕ್ಕಳ ನಾಟಕಗಳ ನಿರ್ದೇಶಕಿಯಾಗಿಯೂ ಕೆಲಸ ಮಾಡಿದರು.
ಅಕ್ಷತಾರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ್ದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕ. ಬೆಂಗಳೂರಿನ ಎನ್.ಎಸ್.ಡಿ (NSD) ವತಿಯಿಂದ ನಡೆದ 8 ಗಂಟೆಗಳ ಕಾಲದ ಈ ಮಹಾ ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಅಷ್ಟೇ ಅಲ್ಲದೆ, ‘ಪಾಪು ಬಾಪು’ ನಾಟಕದ ಮೂಲಕ ಸುಮಾರು 2000 ಪ್ರದರ್ಶನಗಳನ್ನು ನೀಡಿ ದಾಖಲೆ ಬರೆದಿದ್ದಾರೆ. ಮೈಸೂರು ರಂಗಾಯಣ, ಶಿವಮೊಗ್ಗ ರಂಗಾಯಣ ಹಾಗೂ ಪ್ರಕಾಶ್ ರೈ ಅವರ ‘ನಿರ್ದಿಗಂತ’ದಲ್ಲಿ ಎರಡು ವರ್ಷಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ನಟನೆಯನ್ನು ಹದಗೊಳಿಸಿಕೊಂಡಿದ್ದಾರೆ.
ಸೌಂದರ್ಯ-ಸುಹಾಸಿನಿ ಸ್ಫೂರ್ತಿ, ಸಿನಿಮಾ ಕನಸು: ಚಿಕ್ಕಂದಿನಿಂದಲೇ ನಟಿ ಸೌಂದರ್ಯ ಮತ್ತು ಸುಹಾಸಿನಿ ಅವರ ನಟನೆಯನ್ನು ಆರಾಧಿಸುತ್ತಿದ್ದ ಅಕ್ಷತಾರಿಗೆ ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲವಿತ್ತು. ಅನೇಕ ಆಡಿಷನ್ ಗಳನ್ನು ನೀಡಿ, ಕಿರುತೆರೆಯ ಸಣ್ಣ ಪಾತ್ರಗಳ ಮೂಲಕ ಮನೆಯವರಿಗೆ ತಮ್ಮ ನಟನೆಯ ದರ್ಶನ ಮಾಡಿಸಿದರು. ಪಿ.ಆರ್.ಕೆ ಪ್ರೊಡಕ್ಷನ್ನ ‘ಘೋಸ್ಟ್’ ಸಿನಿಮಾದಲ್ಲಿಯೂ ಒಂದು ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
”ಪ್ರೇಕ್ಷಕರ ಚಪ್ಪಾಳೆ ಮತ್ತು ಗ್ರೀನ್ ರೂಮ್ ಬಳಿ ಬಂದು ಅವರು ತೋರಿಸುವ ಅಭಿಮಾನವೇ ನನಗೆ ನಟನೆ ಬಿಟ್ಟು ಬೇರೆ ಕೆಲಸದ ಬಗ್ಗೆ ಯೋಚಿಸದಂತೆ ಮಾಡಿದೆ. ಜನರ ಮನಸ್ಸಿನಲ್ಲಿ ಉಳಿಯುವಂತಹ ವಿಭಿನ್ನ ಪಾತ್ರಗಳನ್ನು ಮಾಡುವುದು ನನ್ನ ಆಸೆ,” ಎನ್ನುತ್ತಾರೆ ಅಕ್ಷತ.
’ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಮೂಲಕ ಹೊಸ ಮನ್ವಂತರ: ಗಾಡ್ಫಾದರ್ ಇಲ್ಲದೆ ಬೆಂಗಳೂರಿಗೆ ಬಂದ ಅಕ್ಷತಾರಿಗೆ ದಾರಿದೀಪವಾಗಿದ್ದು ಎಡಿಟರ್ ಶಿವರಾಜ್ ಮೇಹು ಅವರು. ಅವರ ಮೂಲಕ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ನಿರ್ದೇಶಕರ ಪರಿಚಯವಾಯಿತು. ಈ ಚಿತ್ರದಲ್ಲಿ ಅಕ್ಷತಾ ನಿರ್ವಹಿಸುತ್ತಿರುವ ಪಾತ್ರ ನವರಸಗಳಿಂದ ಕೂಡಿದ್ದು, ಸವಾಲಿನಿಂದ ಕೂಡಿದೆಯಂತೆ.
ರಂಗಭೂಮಿಯ ಶಿಸ್ತು ಮತ್ತು ಪರಿಶ್ರಮವನ್ನು ಬೆನ್ನಿಗೆ ಕಟ್ಟಿಕೊಂಡು ಬಂದಿರುವ ಈ ಮಲೆನಾಡಿನ ಪ್ರತಿಭೆಗೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರವು ಚಿತ್ರರಂಗದಲ್ಲಿ ದೊಡ್ಡ ಮುನ್ನುಡಿ ಬರೆಯುವುದರಲ್ಲಿ ಸಂಶಯವಿಲ್ಲ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಕಾಡಲು ಅಕ್ಷತ ಮಲ್ನಾಡ್ ಈಗ ಸಜ್ಜಾಗಿದ್ದಾರೆ.






