ಬಾಂಬ್ ಸ್ಪೋಟಕ ಗ್ಯಾಂಗ್ ಬಳ್ಳಾರಿಯಲ್ಲಿ ಅಡಗಿರುವ ಶಂಕೆ

2 years ago

ಬೆಂಗಳೂರು: ರಿಪಬ್ಲಿಕ್ ಆಫ್ ಬಳ್ಳಾರಿ ಎಲ್ಲರಿಗೂ ಗೊತ್ತು ಗಣಿ ಉದ್ಯಮಿಗಳಿಂದಾದ ಬದಲಾದ ಬಳ್ಳಾರಿಯ ಬಗ್ಗೆ ಈ ರೀತಿ ವ್ಯಾಖ್ಯಾನ ಮಾಡಲಾಗುತ್ತಿತ್ತು. ಇದೀಗ ರಿಪಬ್ಲಿಕ್ ಆಫ್ ಬಳ್ಳಾರಿ ಹೋಗಿ ಟೆರರ್ ಆಫ್ ಬಳ್ಳಾರಿ ನಿರ್ಮಾಣವಾಗಿದೆ.

ಭಯೋತ್ಪಾದನೆ ಚಟುವಟಿಕೆಗಳಿಗೆ ಭಟ್ಕಳ ಗ್ಯಾಂಗ್ ದೇಶದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಕುಖ್ಯಾತಿ ಪಡೆದಿತ್ತು. ಯಾಸಿನ್ ಭಟ್ಕಳ್ ಸೋದರರು ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕರನ್ನು ಜಿಹಾದಿ ಚಟುವಟಿಕೆಗಳಿಗೆ ಪ್ರೇರೇಪಿಸಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗುವಂತೆ ಮಾಡುತ್ತಿದ್ದರು.

ಭಟ್ಕಳ್ ಸೋದರದಿಂದ ಪ್ರೇರೇಪಿತರಾದ ಹಲವಾರು ಮುಸ್ಲಿಂ ಯುವಕರು ದೇಶದ ಅನೇಕ ಕಡೆ ದುಷ್ಕೃತ್ಯ ನಡೆಸುವ ಮೂಲಕ ಸಮಾಜಕ್ಕೆ ಕಂಟಕ ಪ್ರಾಯರಾಗಿದ್ದರು. ಈ ತಂಡದ ಬಹುತೇಕ ಎಲ್ಲಾ ಸದಸ್ಯರನ್ನು ಸೆರೆಹಿಡಿದು ಕತ್ತಲೆ ಕೋಣೆಗೆ ತಳ್ಳುವಲ್ಲಿ ತನಿಖಾ ತಂಡಗಳು ಯಶಸ್ವಿಯಾಗಿವೆ.

ಇದರಿಂದ ಇನ್ನೇನು ಭಟ್ಕಳ ಭಯೋತ್ಪಾದಕ ತಂಡದ ಕಥೆ ಮುಗಿಯಿತು ಎನ್ನುತ್ತಿರುವಾಗಲೇ ಇದೀಗ ಐಎಸ್ ಬಳ್ಳಾರಿ ತಂಡ ಪೊಲೀಸರಿಗೆ ಸವಾಲೆಸೆದಿದೆ. ಗಣಿ ನಾಡು ಬಳ್ಳಾರಿಯಲ್ಲಿ ಇಂತಹದೊಂದು ತಂಡ ಕೆಲಸ ಮಾಡುತ್ತಿದೆ ಎಂದು ಖಚಿತ ಮಾಹಿತಿ ಪಡೆದಿದ್ದ ರಾಷ್ಟ್ರೀಯ ತನಿಖಾದಳ ಈ ಊರಿನ ಮೇಲೆ ಒಂದು ಕಣ್ಣು ನೆಟ್ಟಿತ್ತು.

ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಬೆನ್ನು ಹತ್ತಿದ ರಾಷ್ಟ್ರೀಯ ತನಿಖಾ ದಳ ಮತ್ತು ಬೆಂಗಳೂರಿನ ಸಿಸಿಬಿ ತಂಡಕ್ಕೆ ದೊರತ ಸುಳಿವುಗಳನ್ನು ಆಧರಿಸಿ ಬಾಂಬರ್ ನ  ಹುಡುಕಾಟಕ್ಕೆ ಮುಂದಾಗುತ್ತಿದ್ದಂತೆ ಎಲ್ಲಾ ಸುಳಿವುಗಳು ಬಳ್ಳಾರಿಯತ್ತ ಕೇಂದ್ರೀಕರಿಸಿವೆ.

ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆಸಿದ ನಂತರ ಪಾತಕಿ ಬಳ್ಳಾರಿಯಲ್ಲಿ ಅಡಗಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ಬಳ್ಳಾರಿ ಮೂಲದ ಶಂಕಿತ ಉಗ್ರ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಿನಾಜ್ ಅಲಿಯಾಸ್‌ ಸುಲೈಮಾನ್‌ ಈ ಬಾಂಬ್ ಸ್ಫೋಟದ ರೂವಾರಿ ಇರಬಹುದು ಎಂಬ ಅನುಮಾನ ಇದರಿಂದ ದಟ್ಟವಾಗುತ್ತಿದೆ.

ಕೆಫೆ ಬಾಂಬರ್‌ ಬೆಂಗಳೂರಿನಿಂದ ಬಸ್ಸು ಹತ್ತಿ ಬಳ್ಳಾರಿಗೆ ಹೋಗಿರುವುದು ಸ್ಪಷ್ಟವಾಗಿದೆ.ಇದರ ನಂತರ ಆತ ಅಲ್ಲಿಂದ ಬೇರೆಲ್ಲಿಗೂ ಹೋದ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಅಂದು ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಈತ ಕಾಣಿಸಿಕೊಂಡಿದ್ದ. ಆ ಬಳಿಕ ಎಲ್ಲಿಯೂ ಆರೋಪಿಯ ಚಲನವಲನದ ಬಗ್ಗೆ ಸುಳಿವು ಇಲ್ಲದಿರುವುದರಿಂದ, ಆತ ಬಳ್ಳಾರಿಯಲ್ಲೇ ಅಡಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಘಟನೆಯ ನಂತರ ಐಎಸ್ ಬಳ್ಳಾರಿ ಗ್ಯಾಂಗ್ ಸಕ್ರಿಯವಾಗಿರುವ ಬಗ್ಗೆ ಎನ್ ಐ ಎ ತಂಡಕ್ಕೆ ಖಚಿತ ಮಾಹಿತಿ ಲಭ್ಯವಾಗಿದೆ.

ಹೀಗಾಗಿ, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೈಮಾನ್‌ ನನ್ನು ವಿಚಾರಣೆಗಾಗಿ  ಎನ್‌ಐಎ ತಂಡ ವಶಕ್ಕೆ ಪಡೆದಿದೆ.

ರಾಜ್ಯಾದ್ಯಂತ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಿದ್ದ ಮಿನಾಜ್‌ ಅಲಿಯಾಸ್‌ ಸುಲೈಮಾನ್‌ನನ್ನು ಎನ್‌ಐಎ ತಂಡ ಡಿಸೆಂಬರ್‌ನಲ್ಲಿ ಹೆಡೆಮುರಿ ಕಟ್ಟಿ ಬಂಧಿಸಿ ತಂದಿತ್ತು. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಆದರಿಸಿ ತನಿಖೆ ನಡೆಸಿದ ಎನ್ಐಎ ತಂಡಕ್ಕೆ ಐಎಸ್ ಬಳ್ಳಾರಿ ಗ್ಯಾಂಗ್ ಬಗ್ಗೆ ಮಾಹಿತಿ ಲಭಿಸಿತ್ತು.

ಬಂಧಿತ ಮೀನಾಜ್ ನಿಷೇಧಿತ ಪಿಎಫ್ ಐ ಸಂಘಟನೆಯ ಕಾರ್ಯಕರ್ತ. ಈತ ಬಳ್ಳಾರಿ ಮೂಲದ ಮತ್ತೊಬ್ಬ ಶಂಕಿತ ಉಗ್ರ ಸೈಯದ್ ಸಮೀರ್ ಎಂಬಾತನೊಂದಿಗೆ ಸೇರಿಕೊಂಡು ಐಎಸ್ ಬಳ್ಳಾರಿ ಘಟಕ ಸ್ಥಾಪನೆ ಮಾಡಿದ್ದ. ಇದಕ್ಕೆ ಹಲವಾರು ಮಂದಿ ವಿದ್ಯಾವಂತ ಮುಸ್ಲಿಂ ಯುವಕರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಂಡಿದ್ದ.

ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಆಪ್  ಸಿದ್ದಪಡಿಸಿದ್ದ ಸಮೀರ್ ಮತ್ತು ಮೀನಾಜ್ ಆನ್ ಲೈನ್ ಮೂಲಕ ವಿದ್ಯಾವಂತ ಮುಸ್ಲಿಂ ಯುವಕರನ್ನು ಪರಿಚಯ ಮಾಡಿಕೊಂಡು ಅವರಿಗೆ ದೇಶದಲ್ಲಿ ಮುಸ್ಲಿಂ ಧರ್ಮದ ಮೇಲೆ ದೌರ್ಜನ್ಯವಾಗುತ್ತಿದೆ ಇದನ್ನು ತಡೆಗಟ್ಟಲು ಪ್ರಾಣ ನೀಡಲು ಸಿದ್ದರಾಗಬೇಕು ಎಂದು ಹೇಳಿ ಪ್ರಚೋದನಕಾರಿ ಅಂಶವಿರುವ ಪುಸ್ತಕಗಳು ವಿಡಿಯೋ ಮತ್ತು ಕರಪತ್ರಗಳನ್ನು ರವಾನಿಸುತ್ತಿದ್ದರು.

ಇವರಿಂದ ಪ್ರೇರೇಪಣೆಗೊಂಡ ಅನೇಕರು ಐ ಎಸ್ ಬಳ್ಳಾರಿ ಘಟಕ ಸೇರಿದ್ದರು. ಈ ರೀತಿ ಸೇರಿದ ಹಲವರಿಗೆ ಬಾಂಬ್ ತಯಾರಿ ಹಾಗೂ ಅದನ್ನು ಸ್ಪೋಟಿಸುವ ಬಗ್ಗೆ ತರಬೇತಿ ಮತ್ತು ಮಾಹಿತಿ ನೀಡುತ್ತಿದ್ದರು. ಬಳ್ಳಾರಿಯಲ್ಲೇ ಈ ಕುರಿತಂತೆ ತರಬೇತಿ ಸಹ ನೀಡುತ್ತಿದ್ದರು ಎಂಬ ಮಾಹಿತಿ ಎನ್ಐಎ ತಂಡಕ್ಕೆ ಲಭ್ಯವಾಗಿದೆ.

ಈ ತಂಡದಿಂದ ತರಬೇತಿ ಪಡೆದ ವ್ಯಕ್ತಿ ಒಬ್ಬ ಬೆಂಗಳೂರಿನ ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆಸಿರಬಹುದು ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಳ್ಳಾರಿ ಘಟಕದೊಂದಿಗೆ ಸಂಪರ್ಕ ಹೊಂದಿ ಸ್ಪೋಟಕ ತಯಾರಿ ಬಗ್ಗೆ ತರಬೇತಿ ಪಡೆದವರ ಹುಡುಕಾಟ ಆರಂಭಿಸಿದ್ದಾರೆ.

Leave a Reply