ಗರ್ಭಿಣಿಯರ ನಿರಂತರ ಕಾಳಜಿ ಮೂಲಕ ತಾಯಿ ಮರಣ ತಡೆಗಟ್ಟಲು ಕ್ರಮವಹಿಸಿ

2 years ago

ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು

ಬಳ್ಳಾರಿ: ಗರ್ಭಿಣಿ ಮಹಿಳೆಯರು ಪ್ರತಿ ತಿಂಗಳು ತಪಾಸಣೆಗೆ ಬಂದಾಗ ಸಮಯ ಮೀಸಲಿರಿಸಿ, ಅವರು ಕೈಗೊಳ್ಳಬೇಕಾದ ಕಾಳಜಿ ಕುರಿತು ತಿಳಿಸುವ ಮೂಲಕ ತಾಯಿ ಮರಣ ತಡೆಗಟ್ಟಲು ವೈದ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಕುಟುಂಬದಲ್ಲಿ ಗರ್ಭಿಣಿ ಮಹಿಳೆಯನ್ನು ಹೆರಿಗೆ ಕಾರಣದಿಂದ ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಗರ್ಭಿಣಿ ಮಹಿಳೆಯರ ಕೈಗೊಳ್ಳಬೇಕಾದ ಕಾಳಜಿ ಮತ್ತು ಜೊತೆಗೆ ಕಂಡುಬರಬಹುದಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಗರ್ಭಿಣಿ ಎಂದು ತಿಳಿದ ದಿನದಿಂದ ಹೆರಿಗೆಯಾಗುವವರೆಗೆ ಮತ್ತು ಹೆರಿಗೆ ನಂತರದ 45 ದಿನಗಳ ಕಾಲ ಬಾಣಂತಿಯ ಅವಧಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತಹೀನತೆ ಮುಂತಾದವುಗಳಿAದ ಗಂಭೀರತೆ ಉಂಟಾಗದಂತೆ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.

ಪ್ರತಿ ಗರ್ಭಿಣಿಗೆ ಒದಗಿಸಬೇಕಾದ ಟಿಡಿ ಚುಚ್ಚುಮದ್ದು, ಕಬ್ಬಿಣಾಂಶ ಮಾತ್ರೆಗಳು ಮತ್ತು ಕೈಗೊಳ್ಳಬೇಕಾದ ಎಲ್ಲಾ ಪರೀಕ್ಷೆಗಳನ್ನು ಸಕಾಲದಲ್ಲಿ ಕೈಗೊಂಡು ಅಗತ್ಯ ಇರುವವರಿಗೆ ಹೆಚ್ಚುವರಿ ಸ್ಕ್ಯಾನಿಂಗ್ ಅನ್ನು ತಡ ಮಾಡದೇ ಕೈಗೊಳ್ಳುವುದರ ಜೊತೆಗೆ ಮನೆ ಹೆರಿಗೆಯಾಗದಂತೆ ನಿಗಾವಹಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ, ಜಿಲ್ಲೆಯಾದ್ಯಂತ ತಾಯಿ ಮತ್ತು ಶಿಶು ಮರಣ ತಡೆಗೆ ಮೂರು ಹಂತದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೆರಿಗೆ ಕೊಠಡಿ ವಾರ್ಡ್ ಗಳ ಪರಿಶೀಲನೆ ಹಾಗೂ ಸಾಧ್ಯವಿರಬಹುದಾದ ಸೋಂಕುಗಳನ್ನು ಗುರ್ತಿಸಲು ಜಿಲ್ಲಾ ಆಸ್ಪತ್ರೆ ಹಾಗೂ ವಿಮ್ಸ್ ಪ್ರಸೂತಿ ತಜ್ಞರ ಮೂಲಕ ಸಮಾಲೋಚನಾ ಸಭೆ ನಡೆಸಲಾಗುತ್ತಿದೆ ಮತ್ತು ಎಲ್ಲಾ ತಾಲ್ಲೂಕಗಳಲ್ಲಿ ಕ್ಷೇತ್ರ ಮಟ್ಟದ ಸಿಬ್ಬಂದಿಯವರೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಮಕ್ಕಳ ಬಾಲ್ಯದ ಬೆಳವಣಿಗೆಯ ನ್ಯೂನತೆಗಳನ್ನು ಕಂಡುಹಿಡಿಯಲು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಶಾಲೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ಗುರ್ತಿಸಿ ಜಿಲ್ಲಾ ಡಿಇಐಸಿ ಕೇಂದ್ರಕ್ಕೆ ಕಳುಹಿಸಿಕೊಡಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಎಲ್ಲಾ ಲಸಿಕೆಗಳನ್ನು ಮಕ್ಕಳಿಗೆ ತಪ್ಪದೇ ಹಾಕಿಸಲು ಹಾಗೂ ಎಲ್ಲಾ ಗರ್ಭಿಣಿಯರ ನಾಲ್ಕು ತಪಾಸಣೆಗಳು ಆಗಿರುವ ಬಗ್ಗೆ ನಿರಂತರ ನಿಗಾವಹಿಸಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಕಳುಹಿಸುವಾಗ 108 ಆರೋಗ್ಯ ಕವಚ ಅಥವಾ ಎಬಿಎಸ್ ಆಂಬುಲೆನ್ಸ್ ಸಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಕ್ಷಯಮುಕ್ತ ಗಾಮಪಂಚಾಯತ್ ಆಯ್ಕೆ ಮಾಡಲು ಹೆಚ್ಚಿನ ಪರೀಕ್ಷೆಗಳನ್ನು ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕಗಳ ವಿತರಣೆ, ಕುಷ್ಠರೋಗ, ಡೆಂಗ್ಯೂ ನಿಯಂತ್ರಣಕ್ಕೆ ಗ್ರಾಮೀಣ ಹಾಗೂ ನಗರದ ಕೊಳಚೆ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ ಎಂದರು.

ನಾಯಿಕಡಿತ ಪ್ರಕರಣಗಳ ಸಂದರ್ಭಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಔಷಧಿ ದಾಸ್ತಾನು ಕೊರತೆಯಾಗದಂತೆ ಮತ್ತು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಜೊತೆಗೆ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಹೆಚ್ಚಿನ ಫಲಾನುಭವಿಗಳು ಬರುವಂತೆ ಕ್ರಮವಹಿಸಲಾಗುತ್ತಿದೆ ಎಂದರು.

ಭಿತ್ತಪತ್ರ ಬಿಡುಗಡೆ: ಇದೇ ಸಂದರ್ಭದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಹಾಗೂ ರೇಬೀಸ್ ಕುರಿತ ಭಿತ್ತಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ವಿಮ್ಸ್ ಅಧಿಕ್ಷಕ ಡಾ.ಕೊಟ್ರೇಶ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಮರಿಯಂಬಿ. ಡಾ.ಇಂದ್ರಾಣಿ, ಡಾ.ವೀರೇಂದ್ರ ಕುಮಾರ್, ಡಾ.ಹನುಮಂತಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಭರತ್, ಡಾ.ಅರುಣ್, ಡಾ.ಮಂಜುನಾಥ ಜವಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ವೆಂಕೋಬ್ ನಾಯ್ಕ್, ರುದ್ರಮ್ಮ, ಪ್ರಶಾಂತ್, ಪ್ರಿಯಾ ಶ್ರೀನಿವಾಸ್, ಮಹಾದೇವಿ ಆರ್.ಬಿ.ಎಸ್.ಕೆ ವೈದ್ಯರು, ಸಿಬ್ಬಂದಿ ಹಾಜರಿದ್ದರು.

Leave a Reply