ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ

4 months ago

ಕಲಬುರಗಿ: ಸನ್ಯಾಸಿ ಎಂದರೆ ಸರ್ವಸಂಗ ಪರಿತ್ಯಾಗಿ, ಸಮಾಜದ ಶಾಂತಿ, ಆಧ್ಯಾತ್ಮ ಸಹಬಾಳ್ವೆಯೇ‌ ಇವರ ಧ್ಯೇಯ ಎನ್ನಲಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ಸನ್ಯಾಸಿಗಳು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಘಟನೆಗಳು ನಡೆಯುತ್ತಿವೆ.

ಇದರ ಮುಂದುವರೆದ ಭಾಗವಾಗಿ ಇದೀಗ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಹಿರೇಮಠ ಸಂಸ್ಥಾನದ ಮಠಾಧೀಶರಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಇದರ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಫಜಲ್ಪುರ ಠಾಣೆ ಪೊಲೀಸರು, ಸ್ವಾಮೀಜಿಯವರ ವಿಚಾರಣೆ ನಡೆಸಿದ್ದಾರೆ. ಘಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರುವಂತಹ ಘಟನೆ ನಡೆದಿಲ್ಲ. ತನಿಖೆ ನಡೆಯುತ್ತಿದೆ ಎಂದು ಕಲಬುರ್ಗಿ ಎಸ್ಪಿ ಆಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿರುವುದು ಕಂಡು ಬರುತ್ತಿದೆ. ತಕ್ಷಣ ನಮ್ಮ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ವರದಿ ಅನ್ವಯ ಅಫಜಲ್ಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿಕೊಂಡಿದ್ದೇವೆ. ಪರಿಶೀಲನೆ ನಡೆಸಿದಾಗ ವಿಡಿಯೋದಲ್ಲಿರುವುದು ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಾಂತಲಿಂಗ ಶಿವಾಚಾರ್ಯರು ಎಂದು ತಿಳಿದುಬಂದಿದೆ. ಅವರು ತಮ್ಮಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವುದು ಕಂಡುಬಂದಿದೆ. ಈ ಸಂಬಂಧ ಸ್ವಾಮೀಜಿಯವರ ವಿಚಾರಣೆ ನಡೆಯುತ್ತಿದೆ ಎಂದರು.

ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಆ ಬಂದೂಕಿಗೆ ಪರವಾನಗಿ ಇದೆಯಾ? ಯಾವ ಕಾರಣಕ್ಕಾಗಿ ಫೈರ್ ಮಾಡಿದರು, ಎಲ್ಲಿ ಯಾವ ಜಾಗದಲ್ಲಿ ಯಾವ ದಿನಾಂಕದಂದು ಫೈರ್ ಮಾಡಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದರು.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರುವಂತಹ ಘಟನೆ ನಡೆದಿಲ್ಲ. ಆದರೆ ಕೆಲವರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಅದಾಗಲೇ ನಾವು ಗುಂಡು ಹಾರಿಸಿದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದೆವು ಎಂದು ತಿಳಿಸಿದ್ದಾರೆ.

ಭಕ್ತರಿಂದ ಪ್ರತಿಭಟನೆ: ಉಡಚಣ ಗ್ರಾಮದ ಶಂಕರಲಿಂಗೇಶ್ವರ ಹಿರೇಮಠ ಸಂಸ್ಥಾನದ ಮಠಾಧೀಶ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿರುದ್ದ ಗ್ರಾಮಸ್ಥರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠಾಧೀಶರ ವರ್ತನೆ ವಿರುದ್ಧ ಇಡೀ ಕಾರಿರುವ ಗ್ರಾಮಸ್ಥರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಶಾಂತಲಿಂಗ ಸ್ವಾಮೀಜಿಯವರು ಪೀಠಾಧಿಪತಿ ಸ್ಥಾನದಲ್ಲಿ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮದ್ಯ ಸೇವನೆ, ಕೆಟ್ಟ ಶಬ್ದಗಳ ಬಳಕೆ, ಕೆಟ್ಟ ಕೆಲಸಗಳ ಮೂಲಕ ಭಕ್ತರಿಗೆ ನೋವುಂಟು ಮಾಡುತ್ತಿದ್ದಾರೆ. ಎಂಟು ತಿಂಗಳ ಹಿಂದೆ, ಸ್ವಾಮೀಜಿ ವಿಜಯಪುರ ಜಿಲ್ಲೆಯಲ್ಲಿ ಮದ್ಯ ಸೇವಿಸಿ ಕಾರು ಅಪಘಾತ ಮಾಡಿದ್ದಲ್ಲದೆ, ಕುಡಿದ ಅಮಲಿನಲ್ಲಿ ಊರಿನ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ನಂತರ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಗ್ರಾಮಸ್ಥರು ಸೇರಿ ಮಠದಲ್ಲಿ ನೂತನ ಪೀಠಾಧಿಪತಿ ನಿಯೋಜಿಸಲು ಚರ್ಚೆ ನಡೆಸಿದಾಗ, ಮತ್ತೆ ಸ್ವಾಮೀಜಿ ಮಠಕ್ಕೆ ಮರಳಿ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

Leave a Reply