ಮಧು ಬಂಗಾರಪ್ಪ ವಿರುದ್ಧ ದಿಢೀರ್ ಪ್ರತಿಭಟನೆ

3 years ago

#Sudden #protest #against #MadhuBangarappa #shimoga

ಶಿವಮೊಗ್ಗ: ಸಾವರ್ಕರ್ ಹಾಗೂ ಹೆಡ್ಗೇವಾರ್ ಕುರಿತ ಪಾಠಗಳನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಳೆ ಹಾನಿ ಕುರಿತು ಪರಿಶೀಲನೆ ಸಭೆ ಆಯೋಜಿಸಲಾಗಿತ್ತು. ನಿಗದಿಯಂತೆ ಸಭೆ ಆರಂಭವಾಗುತ್ತಿದ್ದಂತೆಯೇ ದಿಢೀರನೆ ಸಭಾಂಗಣಕ್ಕೆ ನುಗ್ಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು. ಕಪ್ಪುಪಟ್ಟಿ ಪ್ರದರ್ಶಿಸಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

ಸಚಿವರು ಪಠ್ಯ ಹರಿದು ಹಾಕಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ದೇಶದ್ರೋಹಿ ಎಂದು ನಿಂದಿಸಿದರು. ಪೊಲೀಸ್ ಭದ್ರತೆಯ ಕಣ್ಣು ತಪ್ಪಿಸಿ ಸಭೆಗೆ ನುಗ್ಗಿ ಪ್ರತಿಭಟನೆ ನಡೆದಿದ್ದು ಸಭೆಯಲ್ಲಿ ಕೆಲಕಾಲ ಗೊಂದಲ ಮೂಡಿಸಿತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹರಿಕೃಷ್ಣ, ಕಾರ್ಯಕರ್ತರಾದ ಜಗದೀಶ್, ದರ್ಶನ್, ಪ್ರದೀಪ್, ವಿಶ್ವನಾಥ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.

ನಂತರ ಜಿಲ್ಲಾ ಪಂಚಾಯ್ತಿ ಕಚೇರಿ ಮುಖ್ಯಗೇಟ್ ಮುಚ್ಚಲಾಯಿತು. ಜಿಲ್ಲಾ ಪಂಚಾಯ್ತಿ ಕಚೇರಿ ಹಾಗೂ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ಸಭೆಯ ನಂತರ ಮಧು ಬಂಗಾರಪ್ಪ ಜಿಲ್ಲಾ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿದರು.

ಹೋರಾಟಗಾರರಲ್ಲ: ಈ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಅವರು ಮೊದಲು ಪಠ್ಯ ಓದಲಿ. ನಂತರ ಪ್ರತಿಭಟನೆ ಮಾಡಲಿ ಎಂದು ಸಲಹೆ ನೀಡಿದರು.

ಬಿಜೆಪಿಯವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಅವರಿಗೆ ಪ್ರತಿಭಟನೆ ಮಾಡುವುದು ಬೇರೇನು ಕೆಲಸವಿಲ್ಲ. ಅವರಷ್ಟು ದಡ್ಡರನ್ನು ನಾನು ನೋಡಿಯೇ ಇಲ್ಲ. ಮೊದಲು ಅವರು ಪುಸ್ತಕ ಓದಲಿ. ಕಪ್ಪು ಪಟ್ಟಿ ಪ್ರದರ್ಶಿಸುವವರೆಲ್ಲ ಹೋರಾಟಗಾರರಲ್ಲ ಎಂದು ಛೇಡಿಸಿದರು.

Leave a Reply