ಬೆಂಗಳೂರು: ಇಂದು ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮಾವೇಶವನ್ನು ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಭಾರತಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನಾಡಿನ ಹೆಸರಾಂತ ಚಿಂತಕಿ ಹಾಗೂ ವಿಮರ್ಶಕಿ ಡಾ.ಎಂ.ಎಸ್ ಆಶಾದೇವಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ನೆರವೇರಿಸಿದರು. ಸಮಾವೇಶದಲ್ಲಿ ರಾಜ್ಯದ 17 ಜಿಲ್ಲೆಗಳಿಂದ 174 ಮಹಿಳೆಯರು ಸೇರಿ ಒಟ್ಟು 230 ಕ್ಕಿಂತ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ಉದ್ಘಾಟನೆ ಬಳಿಕಾ ಮಂಡಳಿ ಸಿ.ಇ.ಓ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳಾ ಕಾರ್ಮಿಕರು ನಿರ್ಮಾಣ ಸ್ಥಳಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು ಮತ್ತು ಮಂಡಳಿ ವತಿಯಿಂದ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಂಡಳಿ ವತಿಯಿಂದ ವೈದ್ಯಕೀಯ ತಪಸಾಣೆ, ಮುಟ್ಟಿನ ಹಾಗೂ ನಂತರ ದಿನಗಳಲ್ಲಿ ಎದುರಾಗುವ ದೈಹಿಕ ಮಾನಸಿಕ ಸಮಸ್ಯೆಗಳು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಮಹಿಳಾ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಸಂಚಾಲಕಿ ಸಿ.ಕುಮಾರಿ ಸ್ವಾಗತಿಸಿದರು. ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ನಿರೂಪಣೆ ಮಾಡಿದರೆ, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಹರೀಶ್ ವಂದನಾರ್ಪಣೆ ಮಾಡಿದರು.

ವೇದಿಕೆ ಮೇಲೆ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಧ್ಯಾನ್ಹ ಪ್ರತಿನಿಧಿಗಳ ಅಧಿವೇಶನವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಂಚಾಲಕ ಹೆಚ್.ಎಸ್.ಸುನಂದ ಉದ್ಘಾಟಿಸಿದರು. ಶುಭಕೋರಿ ನ್ಯಾಷನಲ್ ಕೌನ್ಸಿಲ್ ಫಾರ್ ಲೇಬರ್ ಸಂಚಾಲಕಿ ಲೀಲಾವತಿ ಮಾತನಾಡಿದರು. ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮಿ ವಹಿಸಿದ್ದರು.

ರಾಜ್ಯ ಸಂಚಾಲಕಿ ಕುಮಾರಿ ಮಂಡಿಸಿದ ಕರಡು ವರದಿ ಮೇಲೆ ವಿವಿಧ ಜಿಲ್ಲೆಗಳ ಪರವಾಗಿ 13 ಜನ ಮಹಿಳೆಯರು ಚರ್ಚೆ ನಡೆಸಿದರು. ಬಳಿಕಾ 29 ಜನರ ರಾಜ್ಯ ಸಂಚಾಲನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಂಚಾಲಕಿಯಾಗಿ ಸಿ.ಕುಮಾರಿ ಆಯ್ಕೆಯಾದರು.









