ಸಂವಿಧಾನದ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದರೆ ಸಮಾಜ ಸುಖಮಯ: ಕೆ.ಪಿ.ಮಂಜುನಾಥ ರೆಡ್ಡಿ

1 year ago

ಬಳ್ಳಾರಿ: ಭಾರತದ ಸಂವಿಧಾನವು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದ್ದು, ಸರ್ವ ಜನಾಂಗವು ಒಂದಾಗಿ ಬಾಳುವ ಸಂದೇಶ ನೀಡಿದ ಶಾಂತಿ ಮಾರ್ಗದ ಮೂಲವಾಗಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಪಿ.ಮಂಜುನಾಥ ರೆಡ್ಡಿ ಹೇಳಿದರು.

ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ(ಎನ್ಎಸ್ಎಸ್) ಇವರ ಸಹಯೋಗದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ  ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದಾಗ ಸಮಾಜ ಸುಖಮಯವಾಗಿರುತ್ತದೆ ಎಂದರು.

ಉಪನ್ಯಾಸಕ ಶ್ಯಾಮಣ್ಣ ಮಾತನಾಡಿ, ಮನುಷ್ಯರನ್ನು  ಮನುಷ್ಯರನ್ನಾಗಿ ಕಾಣುವಂತೆ ಮಾಡಿದ್ದು ಸಂವಿಧಾನ. ನಮ್ಮ ಸಂವಿಧಾನವು ಮಹಿಳೆಯರು, ತಳ ಸಮುದಾಯ, ನಿರ್ಲ್ಯಕ್ಷಿತ ಸಮುದಾಯಗಳ ಉದ್ದಾರದ ಜೊತೆಗೆ ಸರ್ವರೂ ಸಮನಾಗಿ ಬಾಳಬೇಕೆಂಬ ಧ್ಯೇಯದಿಂದ ಕೂಡಿದ್ದು, ಈ ಮೂಲಕ ಸಮರ್ಥ ರಾಷ್ಟ್ರದ ನಿರ್ಮಾಣದಲ್ಲಿ ಸಂವಿಧಾನ ಮಹತ್ತರ ಪಾತ್ರವಹಿಸಲಿದೆ ಎಂದರು.

ರಾಜ್ಯಶಾಸ್ತ್ರದ ಉಪನ್ಯಾಸಕ ಈರೇಶಪ್ಪ ಮಾತನಾಡಿ, ಸಂವಿಧಾನದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೂಲಭೂತ ಹಕ್ಕು ನೀಡಿರುವುದರ ಜೊತೆಗೆ ಕರ್ತವ್ಯಗಳನ್ನೂ ನೀಡಿದೆ. ಸಾರ್ವಜನಿಕರು ಅವುಗಳ ಅರಿಯುವ ಅಗತ್ಯತೆ ಇದೆ ಎಂದರು.

ಸಂವಿಧಾನವು ಭಾರತೀಯರೆಲ್ಲರಿಗೂ ಪವಿತ್ರವಾದ ಗ್ರಂಥವಾಗಿದೆ. ಕೆಳವರ್ಗದ ಕೆಲಜನರಿಗೆ ಕನಸು ಕಾಣುವ ಅವಕಾಶವಿಲ್ಲದ ಕಾಲದಲ್ಲಿ ಸಂವಿಧಾನದ ಮೂಲಕ ವಾಸ್ತವತೆಯನ್ನು ಜನರಿಗೆ ಸಾಕಾರ ಮಾಡಿಕೊಳ್ಳಲು ಅವಕಾಶ ನೀಡಿದೆ ಎಂದರು.

ಇದೇ ವೇಳೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪಾರ್ಚಾನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಹೆಚ್.ಎಂ.ಜ್ಯೋತಿ, ಡಾ.ಯು.ಶ್ರೀನಿವಾಸ ಮೂರ್ತಿ, ಚಾಂದ್ಪಾಷಾ, ರಾಘವೇಂದ್ರ, ನೆಹರು ಯುವ  ಕೇಂದ್ರದ ಅಮರೇಶ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply