ಸಂವಿಧಾನದ ಆಶಯದಂತೆ ನಡೆದಲ್ಲಿ ಸಂತೋಷ, ನೆಮ್ಮದಿ ಸಾಧ್ಯ: ಬಲ್ಕೀಶ್ ಬಾನು

1 year ago

ಶಿವಮೊಗ್ಗ: ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ನಮ್ಮ ನೆಲದ ಸಂವಿಧಾನ ರಚನೆಗಾಗಿ ಡಾ.ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅತ್ಯಂತ ಮುಂದಾಲೋಚನೆ ಹೊಂದಿದ್ದ ಮಾನವತಾವಾದಿ ಡಾ.ಅಂಬೇಡ್ಕರ್ರವರಿಗೆ ಸಂವಿಧಾನ ರಚಿಸುವಂತಹ ಗುರುತರವಾದ ಜವಾಬ್ದಾರಿ ನೀಡಲಾಯಿತು. ಎಲ್ಲರೂ ಒಂದಾಗಿರಬೇಕು, ವಿದ್ಯಾವಂತರಾಗಬೇಕು ಹಾಗೂ ಸಂಘಟಿತರಾಗಿರಬೇಕು ಎಂಬುದು ಅಂಬೇಡ್ಕರ್ರವರ ಮೂಲ ಸಂದೇಶವಾಗಿತ್ತು ಎಂದರು.

ಸಮಾನತೆ, ಶಿಕ್ಷಣ ಮತ್ತು ಸಂಘಟನೆ ಈ ಮೂರು ಅಂಶಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರವರ ಮೂಲ ಧ್ಯೇಯಗಳಾಗಿದ್ದವು. ಅವರು ಮಹಿಳೆಯರ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದಿದ್ದರು. ಸಮಾನತೆ ಮತ್ತು ಶಿಕ್ಷಣದಿಂದ ಮಾತ್ರ ಉನ್ನತವಾಗಿ ಬದಕಲು ಸಾಧ್ಯವೆಂದು ಹೇಳುತ್ತಿದ್ದರು. ಸಂಘಟನೆಯ ಶಕ್ತಿಯನ್ನು ಒತ್ತಿ ಹೇಳಿದ್ದರು. ಐಕ್ಯತೆ, ಶಿಕ್ಷಣ ಮತ್ತು ಸಂಘಟನೆ ಮೂಲಕ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಅತ್ಯಂತ ಅರ್ಥಪೂರ್ಣವಾದ ಪೀಠಿಕೆ ಅಂಬೇಡ್ಕರ್ ಅವರು ನಮಗೆ ನೀಡಿದ ದೊಡ್ಡ ಕೊಡುಗೆ. ಇದು ದೇಶಕ್ಕೆ ದಾರಿದೀಪ. ನಮ್ಮ ಸಂವಿಧಾನ ಜಗತ್ತು ನಮ್ಮೆಡೆ ನೋಡುವಂತೆ ಮಾಡಿದ್ದು, ದೇಶ ವಿಶ್ವಗುರು ಆಗಿ ಹೊರಹೊಮ್ಮುತ್ತಿದೆ. ಸಂವಿಧಾನ ನಮ್ಮ ದೇಶದ ಶಕ್ತಿ. ನಮ್ಮದು ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಸಂವಿಧಾನ ಅಭಿವೃದ್ಧಿಗೆ ಪೂರಕವಾಗಿದೆ. ಇದನ್ನು ಓದಿ, ತಿಳಿದು ಅದರಂತೆ ನಡೆಯಬೇಕು. ದೇಶದ ಏಳ್ಗೆಗೆ ಅವಿರತ ಶ್ರಮಿಸಿದ ಅಂಬೇಡ್ಕರ್ರವರನ್ನು ಸ್ಮರಿಸಿ ಪಂಚತೀರ್ಥ ಯೋಜನೆ ಜಾರಿಗೊಳಿಸಿ ಗೌರವಿಸಲಾಗುತ್ತಿದೆ ಎಂದರು.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಮಾತನಾಡಿ, ಭಾವೈಕ್ಯತೆ, ಭ್ರಾತೃತ್ವ ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ ಅಂಬೇಡ್ಕರ್ರವರು ನಮಗೆ ಅತ್ಯುತ್ತಮವಾದ ಸಂವಿಧಾನ ನೀಡಿದ್ದಾರೆ. ವಿದ್ಯಾರ್ಥಿಗಳು ಈ ನೆಲದ ಸಂವಿಧಾನ ತಿಳಿದರೆ ಮಾತ್ರ ಭವ್ಯ ಸಮಾಜ ಕಟ್ಟಲು ಸಾಧ್ಯ. ನಾವೆಲ್ಲ ಡಾ.ಅಂಬೇಡ್ಕರ್, ಬುದ್ದ, ಬಸವವಣ್ಣವರ ಭಾವಚಿತ್ರಗಳನ್ನು ಮನೆಗಳಲ್ಲಿ ಇಟ್ಟು ಪೂಜಿಸಬೇಕು ಎಂದರು.

ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ಮಾಡಿಕೊಟ್ಟವರು ಅಂಬೇಡ್ಕರ್ರವರು. ಸಂವಿಧಾನ ತಿಳಿದು ಗೌರವಿಸಿ ಬದುಕಬೇಕು ಎಂದು ಕರೆನೀಡಿದರು.

ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಾತ್ಯತೀತವಾಗಿ ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ ಸಂವಿಧಾನ ರಚಿಸಲಾಗಿದೆ. ಆದರೆ ಇಂದಿಗೂ ಜಾತಿ, ದ್ವೇಷದ ವಿಷ ಬೀಜ ಬಿತ್ತಲಾಗುತ್ತಿದೆ. ಇದು ನಿಲ್ಲಬೇಕು. ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನ ಓದಿ, ತಿಳಿದು ಅದರಂತೆ ಸೌಹಾರ್ದದಿಂದ ಬದುಕಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಪೀಠಿಕೆ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.  ಕಸ್ತೂರಬಾ ಪಿಯು ಕಾಲೇಜಿನ ಉಪನ್ಯಾಸಕ ಹೆಚ್ ಎಸ್ ರವಿಕುಮಾರ್ ಸಂವಿಧಾನದ ಅರಿವು ಮತ್ತು ಜಾಗೃತಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗ್ರೇಡ್-1 ಸುರೇಶ್ ಕೆ ಎನ್ ಇವರು ಸಂವಿಧಾನದ ಆಶಯಗಳು ಮತ್ತು ಮೂಲಭೂತ ಹಕ್ಕುಗಳ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply