ಬಿಡಿಎ ಕಚೇರಿಯಲ್ಲಿ ನಿವೇಶನಗಳ ನೋಂದಣಿಗೆ ಏಕಗವಾಕ್ಷಿ ವ್ಯವಸ್ಥೆ ಜಾರಿಯಾಗಲಿ

11 months ago

ಬೆಂಗಳೂರು ನಗರದ ಜನರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನವನ್ನ ಪಡೆದ ನಂತರ, ಆ ನಿವೇಶನವನ್ನು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಸಾಕಷ್ಟು ತಿಂಗಳುಗಳ ಸಮಯ ಮತ್ತು ಹಣ ಖರ್ಚಾಗುತ್ತದೆ.

ನಿವೇಶನದಾರರಿಗೆ ನಿವೇಶನ ಮಂಜೂರಾತಿ ಪತ್ರ ತಲುಪಿದ ನಂತರ ಆರಂಭವಾಗುವ ಆಡಳಿತಾತ್ಮಕವಾದ ಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ನಿವೇಶನದಾರರು ಸಾಕಷ್ಟು ಹೈರಾಣಾಗುರುತ್ತಾರೆ. ಪ್ರತಿಯೊಬ್ಬ ನಿವೇಶನ ಪಡೆದ ಮಾಲೀಕರು ಸೂಕ್ತವಾದ ದಾಖಲೆಗಳನ್ನು ಒದಗಿಸುವ ನಿಯಮಗಳು ಸಾಕಷ್ಟು ಗೊಂದಲದಿಂದ ತುಂಬಿವೆ.

ನಿವೇಶನ ಪಡೆದವರು ತಮ್ಮ ನಿವೇಶನದ ನೋಂಣಿಗಾಗಿ ಪ್ರತಿಯೊಂದು ಕೊಠಡಿಯಲ್ಲಿ ಪ್ರತಿಯೊಬ್ಬ ಕಚೇರಿಯ ಗುಮಾಸ್ತನ ಮುಂದೆ ಹಲವಾರು ಬಾರಿ ಭೇಟಿ ಮಾಡದಿದ್ದರೆ ಅವನ ನಿವೇಶನ ನೋಂದಣಿ ಕನಸು ಕನಸಾಗಿಯೇ ಉಳಿಯುತ್ತದೆ.

ನಿವೇಶನ ಪಡೆದ ನಂತರ ದಾಖಲೆಗಳನ್ನು ನೀಡುವುದು  ಕಡತ ಲೆಕ್ಕಪರಿಶೋಧನಾ ಇಲಾಖೆಗೆ ಹೋಗುವುದು, ಅಲ್ಲಿಂದ ಬಂದ ನಂತರ ಮತ್ತೆ ಕಚೇರಿಯಲ್ಲಿ ಅಲೆದಾಟ, ಈ ರೀತಿಯಲ್ಲಿ ನಿವೇಶನ ಪಡೆದವರು ತಾವು ಸಾಕಷ್ಟು ಬಾರಿ ಅಲೆದಾಡಲು ಸಮಯವಿಲ್ಲದೆ, ಕೆಲವರಿಗೆ ದೇಹದಲ್ಲಿ ಶಕ್ತಿಯು ಇಲ್ಲದೆ, ಅನಿವಾರ್ಯವಾಗಿ ಕಚೇರಿಯ ಸಿಬ್ಬಂದಿಯನ್ನು ಇಲ್ಲವೇ ತಮ್ಮ ನಂಬಿಕಸ್ಥರನ್ನು  ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ.

ಯಾರನ್ನೂ ಸಂಪರ್ಕಿಸದೆ, ಯಾವ ಅಧಿಕಾರಿ ಅಥವಾ ಸಿಬ್ಬಂದಿಗೆ ಯಾವುದೇ ರೀತಿಯ ಕಾಣಿಕೆ ನೀಡದೆ ತಾನೇ ನಿವೇಶನ ನೋಂದಾಯಿಸಿಕೊಳ್ಳುತ್ತೇನೆಂದು ಯಾರಾದರೂ ನಿವೇಶನದಾರರು ಬಿಡಿಎನಲ್ಲಿ ಓಡಾಡಿದರೆ ಅವರು ಹೊಸ ಅನುಭವವನ್ನು ಪಡೆದುಕೊಳ್ಳುತ್ತಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಕೂಡಲೇ ನಿವೇಶನ ನೋಂದಣಿ ವಿಚಾರಕ್ಕೆ ಕರ್ನಾಟಕ ರಾಜ್ಯ ಗೃಹ ಮಂಡಳಿಯ ಮಾದರಿಯನ್ನು ಅನುಸರಿಸಿ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತಂದಲ್ಲಿ ಪ್ರತಿ ಬಾರಿಯೂ ಪ್ರತಿದಿನವೂ ನಾಗರಿಕರು ಅಲೆದಾಡುವುದು ತಪ್ಪುತ್ತದೆ.

ಏಕಗವಾಕ್ಷಿ ವ್ಯವಸ್ಥೆಯ ಅಡಿಯಲ್ಲಿ ಎಲ್ಲಾ ದಾಖಲೆಗಳನ್ನು ಒಂದೇ ಬಾರಿ ಪಡೆದು ನಂತರ ನೋಂದಣಿಯ ದಿನವನ್ನು ತಿಳಿಸಿ, ಇಲ್ಲದಿದ್ದರೆ ನಾಗರೀಕರು ಪ್ರತಿದಿನವೂ ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವುದು ತಪ್ಪುವುದಿಲ್ಲ. ಹಿರಿಯ ನಾಗರಿಕರಂತೂ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇನ್ನು ಮಹಿಳೆಯರು ಕಚೇರಿಯಲ್ಲಿ ಅಲೆದಾಡುತ್ತಲೇ ಇದ್ದಾರೆ.

ಆಧುನಿಕ ತಂತ್ರಜ್ಞಾನಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡರೂ ಸಹ ಸಾರ್ವಜನಿಕರಿಗೆ ಸೂಕ್ತವಾದ ಸಮಯದಲ್ಲಿ ಹೆಚ್ಚಿನ ಕಾಲ ತೆಗೆದುಕೊಳ್ಳದೆ, ಸಕಾಲದಲ್ಲಿ ವ್ಯವಸ್ಥೆಗಳು ಆಗದಿದ್ದರೆ ತಂತ್ರಜ್ಞಾನಗಳ ಬಳಕೆಯಾದರು ಯಾವ ಪುರುಷಾರ್ಥಕ್ಕೆ?

ಒಟ್ಟಾರೆಯಾಗಿ ಬಿಡಿಎ ಕಚೇರಿಯಲ್ಲಿ ನಿವೇಶನ ಪಡೆದವರು ನೋಂದಾಯಿಸಿಕೊಳ್ಳುವುದರ ಒಳಗಾಗಿ ನೊಂದುಕೊಂಡಿರುತ್ತಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply