ಸುರಕ್ಷಿತ ಕೆಲಸದ ವಾತಾವರಣ ಮಹಿಳೆಯರ ಮೂಲಭೂತ ಹಕ್ಕು: ಕೆ.ಜಿ.ಶಾಂತಿ

2 years ago

ಬಳ್ಳಾರಿ: ಮಹಿಳೆಯರು ತಾವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸುರಕ್ಷಿತ ಕೆಲಸದ ವಾತಾವರಣ ಹೊಂದುವುದು ಮಹಿಳೆಯರ ಮೂಲಭೂತ ಹಕ್ಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ಹಿಂಸಾಚಾರ ವಿರೋಧಿ ದಿನಾಚರಣೆ ಅಂಗವಾಗಿ ನಗರದ ಹೊಸ ಜಿಲ್ಲಾ ನ್ಯಾಯಾಲಯದ ವಿಸಿ ಸಭಾಂಗಣದಲ್ಲಿ “ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಅಧಿನಿಯಮ”ದ ಕುರಿತು ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಲಸದ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶವಿದೆ. ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆಯರಿಲ್ಲದ ಕ್ಷೇತ್ರವಿಲ್ಲ. ಹಾಗಾಗಿ ಮಹಿಳೆಯರನ್ನು ಮೌಲ್ಯಯುತ ಸಹೋದ್ಯೋಗಿಗಳಂತೆ ಕಾಣಬೇಕು ಎಂದರು.

ಮಹಿಳೆಯರಿಗೆ ಸುರಕ್ಷಿತ ಕೆಲಸದ ಸ್ಥಳಗಳನ್ನು ರಚಿಸುವ ಉದ್ದೇಶದಿಂದ ರೂಪಿಸಲಾದ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ  2013) ಎಂಬ ವಿಶೇಷ ಶಾಸನ ನೀಡಿದೆ. ಇದರ ಅರಿವು ಮಹಿಳೆಯರು ಹೊಂದಬೇಕಿದೆ ಎಂದರು.

ಲೈಂಗಿಕ ಕಿರುಕುಳ ನೊಂದವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಒಟ್ಟಾರೆ ಯೋಗಕ್ಷೇಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರು ಆತಂಕ, ಖಿನ್ನತೆ, ಒತ್ತಡ ಮತ್ತು ಆಘಾತದಿಂದ ಬಳಲುತ್ತಾರೆ. ಹಾಗಾಗಿ ಮಹಿಳೆಯರು ಮುಖ್ಯವಾಗಿ ಲೈಂಗಿಕ ಕಿರುಕುಳದ ಬಗ್ಗೆ ಅರಿವು ಹೊಂಬೇಕು. ಲೈಂಗಿಕ ಕಿರುಕುಳ ಎಂದರೇನು ಅಥವಾ ಅದನ್ನು ಹೇಗೆ ವರದಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಹೊಂದಬೇಕು ಎಂದರು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಆಂತರಿಕ ದೂರುಗಳ ಸಮಿತಿಗೆ ಇರುತ್ತದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಸಂಸ್ಥೆಗಳಲ್ಲಿ ಸಮಿತಿ ಸ್ಥಾಪಿಸಲು ಕಾನೂನಿನ ಮೂಲಕ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರಾದ ಶಿವಲೀಲ ಮಾತನಾಡಿ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಅಧಿನಿಯಮ”ದ ಕುರಿತು ವಿವರವಾಗಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಪರ್ಣ, ನಸ್ರತ್, ರೂಪ ಚಿನಿವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಮೊದಲಾದವರು ಇದ್ದರು.

Leave a Reply