14 ಕೋಟಿ ರೂ. ಪತ್ತೆ ಪ್ರಕರಣ: ಆರೋಪಿಯ ಬಂಧನ

12 months ago

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರ ಬಡಾವಣೆಯ ಮನೆಯೊಂದರಲ್ಲಿ ಕಂತೆಕಂತೆ ನಕಲಿ ಕರೆನ್ಸಿ ನೋಟುಗಳು ಪತ್ತೆಯಾದ ಪ್ರಕರಣ ಸಂಬಂಧ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋವಾ, ಹೈದರಾಬಾದ್ ಎಂದು ಪೊಲೀಸರನ್ನು ಯಾಮಾರಿಸಿದ್ದ ಆರೋಪಿ ಅರ್ಷದ್ ಅಂಜುಂ ಖಾನ್‌ನನ್ನು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮನೆಯಲ್ಲಿ ನಕಲಿ ನೋಟುಗಳ ಪತ್ತೆಯಾದ 10 ದಿನಗಳ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರಂಭದಲ್ಲಿ, ನಕಲಿ ನೋಟಿನ ಕಂತೆಗಳ ಮೇಲೆ, ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿದ್ದರಿಂದ ಪೊಲೀಸರು ಸುಮ್ಮನಾಗಿದ್ದರು. ಆದರೆ ಆರೋಪಿ ಹೈದರಾಬಾದ್‌ನಲ್ಲಿದ್ದೇನೆ, ಗೋವಾದಲ್ಲಿದ್ದೇನೆ ಎಂದು ಯಾಮಾರಿಸಿದ್ದರಿಂದ ಅನುಮಾನ ಹೆಚ್ಚಾಗಿತ್ತು.
ನಂತರ ಆರೋಪಿಯ ಮೊಬೈಲ್ ಟವರ್ ಲೊಕೇಶನ್ ಹಾಗೂ ತಾಂತ್ರಿಕ ಸಹಾಯದ ಮೂಲಕ ಆತನನ್ನು ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಸದ್ಯ ದಾಂಡೇಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದು, ಇದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯ ವಿಚಾರಣೆ ತೀವ್ರಗೊಳಿಸಲಾಗಿದ್ದು, ನಕಲಿ ನೋಟಿನ ಹಿಂದಿನ ಅಸಲಿ ಕಾರಣ ತಿಳಿಯಬೇಕಿದೆ.

ಏನಿದು ಪ್ರಕರಣ?: ಗಾಂಧಿನಗರದ ನೂರಜಾನ್ ಜುಂಜುವಾಡ್ಕರ ಎಂಬವವರ ಮನೆಯಲ್ಲಿ ಅರ್ಷದ್ ಬಾಡಿಗೆಗೆ ವಾಸವಾಗಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮತ್ತು ಆ ಮನೆಯ ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ದಾಂಡೇಲಿ ನಗರ ಠಾಣೆಯ ಪೊಲೀಸರು ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆಯೇ, 500 ರೂ. ಮುಖ ಬೆಲೆಯ ಕಂತೆಕಂತೆ ನೋಟುಗಳು ಕಾಣಿಸಿದ್ದವು.

ಬರೋಬ್ಬರಿ 14 ಕೋಟಿ ರೂ. ಗೂ ಹೆಚ್ಚು ಮುಖಬೆಲೆಯ ನಕಲಿ ನೋಟುಗಳು ಇದ್ದವು. ಅವುಗಳ ಬಂಡಲ್ ಮೇಲೆ ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿತ್ತು. ನಂತರ ಅರ್ಷದ್ ಗೆ ಕರೆ ಮಾಡಿ ಪೊಲೀಸರು ವಿಚಾರಿಸಿದ್ದರು. ಆಗ ಆತ, ಗೋವಾದಲ್ಲಿ ಇದ್ದು ಬರುವುದಾಗಿ ಮಾಹಿತಿ ನೀಡಿದ್ದ. ಆದರೆ, ಆತ ಯಾಮಾರಿಸುತ್ತಿದ್ದಾನೆ ಎಂಬುದು ಅರಿವಾದ ಕೂಡಲೇ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಆಗ ಆರೋಪಿ ಲಖ್ನೋದಲ್ಲಿರುವುದು ಗೊತ್ತಾಗಿದ್ದು, ಬಂಧಿಸಿದ್ದಾರೆ.

Leave a Reply