ಭಜರಂಗದಳ ಕಾರ್ಯಕರ್ತರಿಂದ ಗಲಾಟೆ: ಏಳು ಜನರ ವಿರುದ್ಧ ದೂರು ದಾಖಲು

2 years ago

ಚಿಕ್ಕಮಗಳೂರು: ಬಾಬಾ ಬುಡನ್ ಗಿರಿ ಇಮಾಂ ದತ್ತಾತ್ರೇಯ ಪೀಠದಲ್ಲಿ ನಡೆಯುವ ದತ್ತ ಜಯಂತಿ ಅಂಗವಾಗಿ ನಡೆಯುತ್ತಿರುವ ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಾಲಾಧಾರಿ ಭಜರಂಗದಳ ಕಾರ್ಯಕರ್ತರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಚಿಕ್ಕಮಗಳೂರಿನ ಆಲ್ದೂರು ಪಟ್ಟಣದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಆರೋಪದಲ್ಲಿ 7 ಭಜರಂಗದಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಏಳು ಜನರ ವಿರುದ್ಧ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ದೂರು ದಾಖಲಾಗಿದೆ.

ಆಲ್ದೂರಿನಲ್ಲಿ ಶೋಭಾಯಾತ್ರೆ ಸಾಗುವ ವೇಳೆ ಕೆಲ ಕಾರ್ಯಕರ್ತರು ಏಕಾಏಕಿ ಮಸೀದಿ ಮುಂಭಾಗದಲ್ಲಿ ಪಟಾಕಿ ಸಿಡಿಸಲು ಮುಂದಾದರು. ಇದಕ್ಕೆ ಅವಕಾಶ ನೀಡದ ಪೊಲೀಸರು, ಪಟಾಕಿ ಹಚ್ಚುವುದನ್ನು ತಡೆಯಲು ಮುಂದಾದರು. ಇದರಿಂದ ಆಕ್ರೋಶಗೊಂಡ ಒಂದು ಗುಂಪು ಪೊಲೀಸರ ಜೊತೆ ವಾಗ್ವಾದಕ್ಕಿಳಿದು ಅವರ ಮೇಲೆ ಹಲ್ಲೆಗೆ ಯತ್ನಿಸಿದೆ ಎಂಬ ಆರೋಪವಿದೆ.

ಪೊಲೀಸರ ಪ್ರತಿರೋಧದ ನಡುವೆ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಹಚ್ಚುವುದನ್ನು ತಡೆಯಲು ಹೋದ ಪರಿಣಾಮ ಕೆಲ ಪೊಲೀಸರು ಗಾಯಗೊಂಡಿದ್ದು, ಅವರನ್ನೆಲ್ಲ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು.

ದತ್ತಜಯಂತಿ ಅಂಗವಾಗಿ ಭಾನುವಾರ ಅನುಸೂಯ ಜಯಂತಿ ಆಚರಿಸಲಾಯಿತು. ಚಿಕ್ಕಮಗಳೂರು ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಿತು. ಇದರಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು. ಈ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ.ಟಿ ರವಿ ಭಾಗವಹಿಸಿದ್ದರು.

ಬೋಳರಾಮೇಶ್ವರ ದೇವಾಲಯದಿಂದ ಯಾತ್ರೆ ಆರಂಭವಾಯಿತು. ಸಂಕೀರ್ತನಾ ಯಾತ್ರೆ ಬಳಿಕ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದಕೆ ದರ್ಶನ ಪಡೆದರು. ಮಹಿಳೆಯರಿಂದ ದತ್ತ ಪಾದುಕೆ ದರ್ಶನ, ಹೋಮ ಪೂಜೆ ನಡೆಯಿತು.

ಡಿಸೆಂಬರ್ 26 ರಂದು ನಡೆಯಲಿರುವ ದತ್ತ ಜಯಂತಿ ಅಂಗವಾಗಿ ಡಿ.17 ರಿಂದ ವಿವಿಧ ಆಚರಣೆಗಳು ನಡೆಯುತ್ತಿವೆ. ಹಿಂದೂ ಪರ ಮುಖಂಡರು, ಸಾಧು ಸಂತರು ಭಾಗಿಯಾಗಿದ್ದಾರೆ. ಈ ಕಾರಣಕ್ಕೆ ಪೊಲೀಸರು ಹೈ ಅಲರ್ಟ್ ಆಗಿದ್ದು ಎಲ್ಲೆಡೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದಾರೆ.

ಮಂಗಳವಾರದವರೆಗೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

Leave a Reply