ಬೆಂಗಳೂರು: ಅಖಿಲ ಕರ್ನಾಟಕ ವಾದ್ಯಗೋಷ್ಠಿ ಮಹಾ ಸಂಘದ ವತಿಯಿಂದ ಆಯೋಜಿಸಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ “ರವಿಕೆ ಪ್ರಸಂಗ” ಚಿತ್ರ ತಂಡ ಪಾಲ್ಗೊಂಡಿತು.

ಇದೇ ವೇಳೆ ರವಿಕೆ ಪ್ರಸಂಗ ಸಿನಿಮಾದ ಟೈಟಲನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿರುವುದನ್ನು ಗೀತಾಭಾರತಿ ಭಟ್ ನೆನಪಿಸಿಕೊಂಡರು.

ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷವಾಗಿ ಸಾವಿರಕ್ಕೂ ಹೆಚ್ಚಿನ ವಾದ್ಯಗೋಷ್ಠಿ ಕಲಾವಿದರೊಂದಿಗೆ ರವಿಕೆಪ್ರಸಂಗ ಚಿತ್ರದ ನಾಯಕಿ ಗೀತಾಭಾರತಿ ಭಟ್, ಕಲಾರತಿ ಮಹಾದೇವ್, ರಕ್ಷಕ್, ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ, ಹಾಗೂ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದ ಪಾವನ ಸಂತೋಷ್ ಮತ್ತು ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ ಶಿವರುದ್ರಯ್ಯ, ಗಿರೀಶ್.ಬಿ, ಸಂಸ್ಥಾಪಕರು, ರಾಧಾಕೃಷ್ಣ ಚಾರಿಟೇಬಲ್ ಟ್ರಸ್ಟ್ ಮತ್ತು ಕಂದಯ್ಯಶೆಟ್ಟಿ , ಹಾಗೂ ರವಿಕೆಪ್ರಸಂಗ ಚಿತ್ರದ ಟೈಟಲ್ ಸಾಂಗಿಗೆ ಅದ್ಭುತವಾಗಿ ಕೋರಿಯೋಗ್ರಫಿ ಮಾಡಿದ್ದ ರಾಜು ಮಾಸ್ಟರ್ ಸೇರಿ ಎಲ್ಲರೂ ಅಪ್ಪುವಿಗೆ ಬೊಂಬೇ ಹೇಳುತೈತೆ ಹಾಡನ್ನು ಹಾಡುವ ಮೂಲಕ ನಮನ ಸಲ್ಲಿಸಿದರು.

ಅನಂತರ ರವಿಕೆ ಪ್ರಸಂಗ ಚಿತ್ರದ ನಾಯಕಿ ಗೀತಾಭಾರತಿ ಭಟ್ ಮಾತನಾಡಿ, ಒಂದು ರವಿಕೆಯ ಕುರಿತು ಮಾಡಿರುವ ವಿಶೇಷವಾದ ಚಿತ್ರ ಇದಾಗಿದ್ದು, ಕೌಟುಂಬಿಕ ಕಥಾಹಂದರ ಹೊಂದಿದ್ದು ಮನೆಮಂದಿಯೆಲ್ಲ ನೋಡಬಹುದಾದ, ಮುಖ್ಯವಾಗಿ ಮಹಿಳೆಯರಲ್ಲರೂ ನೋಡಲೇಬೇಕಾಗಿರುವ ಚಿತ್ರ ಎಂದರು.

ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಮಾತನಾಡಿ, ರವಿಕೆ ಎಂದರೇ ತಾಯಿಯಷ್ಟೇ ಮುಖ್ಯವಾದದ್ದು, ನಾವೂ ಯಾವುದೇ ಹಬ್ಬ ಹರಿದಿನಗಳಲ್ಲಿ ಅರಿಶಿಣ-ಕುಂಕುಮದ ಜೊತೆಗೆ ರವಿಕೆಯನ್ನು ಕೊಡುವ ಸಂಪ್ರದಾಯ ಪಾಲಿಸುತ್ತಾ ಬಂದಿದ್ದೇವೆ. ಹಾಗೇ ರವಿಕೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಅಂಥ ರವಿಕೆಯ ಕಥೆ ನ್ಯಾಷನಲ್ ಇಷ್ಷ್ಯೂ ಆಗುವ ಕಥಾಹಂದರ ಹೊಂದಿರುವ ಈ ಚಿತ್ರ ಮನರಂಜನಾ ಪೂರಕವಾಗಿದೆ ಎಂದರು.

ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಅಧ್ಯಕ್ಷ ಡಾ.ಆರ್ ಶಂಕರ್ ಅವರೊಂದಿಗೆ ಅಲ್ಲಿ ನೆರೆದಿದ್ದ ವಾದ್ಯಗೋಷ್ಠಿಯ ಕಲಾವಿದರೆಲ್ಲಾ ರವಿಕೆಪ್ರಸಂಗ ಚಿತ್ರತಂಡಕ್ಕೆ ಶುಭಕೋರಿ, ತಾವೆಲ್ಲರೂ ಕುಟುಂಬದೊಂದಿಗೆ ಥಿಯೇಟರಿಗೆ ಬಂದು ಸಿನಿಮಾ ನೋಡುವುದಾಗಿ ತಿಳಿಸಿದರು.
ಇದೇ ಫೆಬ್ರವರಿ 16ರಂದು ಶುಕ್ರವಾರ ರಾಜ್ಯಾದ್ಯಂತ ರವಿಕೆಪ್ರಸಂಗ ಚಿತ್ರ ಬಿಡುಗಡೆಯಾಗುತ್ತಿದೆ.




