ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಹೆಚ್ಚಿನ ಸಮಯ ನೆರವು ನೀಡಿ

1 year ago

ಬೆಂಗಳೂರು: ಬಂಜಾರ (ಲಂಬಾಣಿ) ಸಮುದಾಯದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚರಣಾ ಆಯೋಗ ನೇಮಿಸಿದ್ದು, ಆಯೋಗಕ್ಕೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್ ಗೋವಿಂದಸ್ವಾಮಿ ಮತ್ತು ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ ಸಿದ್ದನಾಯಕ್ ಮನವಿಸಲ್ಲಿಸಿದರು. ಈ ಸಂಧರ್ಭದಲ್ಲಿ ಬಂಜಾರ ಮಹಿಳಾ ಸಂಘದ ಅಧ್ಯಕ್ಷೆ ಲಲಿತಮ್ಮ, ಮುಖಂಡರಾದ ಡಾ. ಡಿ. ಪರಮೇಶ್ ನಾಯಕ್, ಧರ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಎಂ ಆರ್ ಗೋವಿಂದ ಸ್ವಾಮಿ, ಬಂಜಾರ ಸಮುದಾಯದ ಹಾಗೂ ಅಲೆಮಾರಿ ಬುಡಕಟ್ಟು, ದಲಿತ ಸಮುದಾಯಗಳ ಜಾತಿಗಳಲ್ಲಿ ಅನೇಕ ಗೊಂದಲಗಳಿವೆ ಎಂದರು.

ಪ್ರಮುಖವಾಗಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸಮುದಾಯಗಳು ಎಡವೇ ಬಲವೇ ಎಂಬ ಗೊಂದಲ ಪರಿಹರಿಸಬೇಕಾಗಿದೆ ಎಂದರು.

ಪ್ರತಿ ಜಾತಿಗಳ ಸಮೀಕ್ಷೆಯನ್ನು ಸಮರ್ಪಕ ಜನಗಣತಿಯನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ನಡೆಸದೆ ಒಳ ಮೀಸಲಾತಿ ಜಾರಿಗೆ ತರುವುದರಿಂದ 101 ಜಾತಿಗಳಲ್ಲಿ ಗೊಂದಲಕ್ಕೆ ಕಾರಣವಾಗಲಿದೆ ಹಾಗೂ 16 ವರ್ಷದ ಹಳೆಯ 2011ರ ದತ್ತಾಂಶದ ಮೇಲೆ ವರ್ಗೀಕರಣ ಮಾಡುವುದು ಕಾನೂನು ರೀತಿಯಲ್ಲಿ ಸಮಂಜಸವಲ್ಲ ಎಂದರು.

ಅಲೆಮಾರಿ ಬುಡಕಟ್ಟುಗಳ ಲಕ್ಷಾಂತರ ಸಮುದಾಯಗಳು ಈ ಸಮೀಕ್ಷೆಗೆ ಸೇರ್ಪಡೆಗೊಂಡಿರುವುದೇ ಇಲ್ಲ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಾಂಗಣ ಸರ್ಕಾರ ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಜಾತಿಗಳ ಸಮೀಕ್ಷೆ ನಡೆಸುತ್ತಿರುವುದು ಗೊಂದಲ ನಿವಾರಣೆಗೆ ಪೂರಕ ಬೆಳವಣಿಗೆ ಆಗಿದೆ ಎಂದರು.

ಹೀಗಾಗಿ ಏಕ ಸದಸ್ಯ ಆಯೋಗಕ್ಕೆ ಹೆಚ್ಚಿನ ಸಮಯದ ಅಗತ್ಯ ಹಾಗೂ ಆರ್ಥಿಕ ವೆಚ್ಚದ ಅಗತ್ಯ ಸಹ ಇದೆ. ಸಮೀಕ್ಷೆಯನ್ನು ಹೆಚ್ಚು ತಡವಾಗುವುದರಿಂದಲೂ ಸರ್ಕಾರದ ನೇಮಕಾತಿಗಳಿಗೆ, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ತೊಂದರೆ ಆಗಲಿದೆ. ಇವೆಲ್ಲ ದೃಷ್ಟಿಯಿಂದಲೂ ತಡವಾದರೂ ಸಹ ಶಾಶ್ವತವಾಗಿ ಒಳ ವರ್ಗೀಕರಣ ಸಮಸ್ಯೆಯನ್ನು ಪರಿಹರಿಸುವು ಅತ್ಯಂತ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

Leave a Reply