ಬೆಂಗಳೂರು: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಹಾಗೂ ತಾಂಡ ಅಭಿವೃದ್ಧಿ ನಿಗಮದ ವತಿಯಿಂದ ಪ್ರದೇಶ ಬಂಜಾರ ಸೇವಾ ಸಂಘ ನಗರದ ವಸಂತ ನಗರದ ಅಂಬೇಡ್ಕರ್ ಭವನದ ಹಿಂದೆ ಕಟ್ಟಿರುವ ಬಂಜಾರ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಮಾಜಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಕೆಎಂಎಫ್ ಅಧ್ಯಕ್ಷ ಭೀಮನಾಯಕ್, ಪ್ರಕಾಶ್ರಾಥೋಡ್, ಮಾಜಿ ಸಚಿವರಾದ ಬಿ.ಟಿ ಲಲಿತಾನಾಯಕ್, ಕೆ.ಶಿವಮೂರ್ತಿ, ಸಂಘದ ಕಾರ್ಯದರ್ಶಿ ಹೆಚ್.ಬಿ ಸಿದ್ಯಾನಾಯಕ್, ಬಂಜಾರ ಸಾಂಸ್ಕೃತಿಕ ಚಿಂತಕ ಡಾ.ಎ.ಆರ್ ಗೋವಿಂದಸ್ವಾಮಿ ಸಮುದಾಯದ ಮುಖಂಡರು, ಚಿಂತಕರು, ಕಲಾವಿದರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಜಾರ ಸಂಘದ ಬೇಡಿಕೆ ಮುಖ್ಯಮಂತ್ರಿಯವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮುದಾಯಕ್ಕೆಈ ಹಿಂದೆ ಅನೇಕ ಸವಲತ್ತುಗಳನ್ನು ನಮ್ಮ ಸರ್ಕಾರ ನೀಡಿದೆ. ಅದರಲ್ಲಿ ಸುರಗುಂಡನಕೊಪ್ಪಕ್ಕೆ ಜಮೀನು ಇತರೆ ಸೌಲಭ್ಯ ನೀಡಿದ್ದೇವೆ. ಪ್ರಸ್ತುತ ವಸತಿ ಶಾಲೆ/ಕಾಲೇಜು ನೀಡುವುದಾಗಿ ತಿಳಿಸಿದರು ಮತ್ತು ಬಂಜಾರ ಭವನದ ಬಾಕಿ ಕಾಮಗಾರಿಗಾಗಿ ರೂ. 5 ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಬಾಕಿ ಇರುವ ತಾಂಡಗಳನ್ನು ಸಂಪೂರ್ಣ ಕಂದಾಯ ಗ್ರಾಮಗಳಾಗಿ ಮಾಡುವುದಾಗಿ ಭರವಸೆ ನೀಡಿದರು.

ಡಿ.ಕೆ ಶಿವಕುಮಾರ್ ಮಾತನಾಡಿ, ಸಮುದಾಯದ ಯಾವುದೇ ಬೇಡಿಕೆಯನ್ನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಈಡೇರಿಸುವುದಾಗಿ ತಿಳಿಸಿದರು.
ಡಾ ಹೆಚ್.ಸಿ ಮಹದೇವಪ್ಪ ಮಾತನಾಡಿ, ಬಂಜಾರ ಸಮುದಾಯ ನನ್ನ ಸಮುದಾಯವಾಗಿದೆ. ಇವರ ಬೇಡಿಕೆ ಈಡೇರಿಸುವುದು ನನ್ನ ಕರ್ತವ್ಯ ಎಂದರು.




