ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಪ್ರತಿಮೆ ವಿರೂಪ ಖಂಡಿಸಿ ಪ್ರತಿಭಟನೆ

2 years ago

ಬೆಂಗಳೂರು: ಗಿರಿನಗರ, ವೀರಭದ್ರನಗರ ವೃತ್ತದಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಪ್ರತಿಮೆಯನ್ನು ಯಾರೋ ಕಿಡಿಗೇಡಿಗಳು, ವಿಕೃತ ಮನಸ್ಸಿನವರು ಪ್ರತಿಮೆ ಧ್ವಂಸ ಮಾಡಿ ವಿರೂಪಗೊಳಿಸಿದ್ದಾರೆ. ಇಂತಹ ಕೃತ್ಯ ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರು ನಗರ ಘಟಕದಿಂದ ಬೃಹತ್ ಪ್ರತಿಟನೆಯನ್ನು ಕೃತ್ಯ ನಡೆದ ಸ್ಥಳದ ಮುಂಭಾಗದಲ್ಲಿ ನಡೆಸಲಾಯಿತು.

ಮಾಜಿ ಉಪ ಮೇಯರ್ ಬಿ.ಎಸ್.ಪುಟ್ಟರಾಜು, ವೀರಶೈವ ಸಮುದಾಯದ ಮುಖಂಡ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ ಹೆಚ್.ಆರ್.ಮಲ್ಲಿಕಾರ್ಜುನ್, ಅಖಿಲ ಭಾರತ ವೀರಶೈವ ಮಹಸಭಾ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಆರ್. ನವೀನ್ ಕುಮಾರ್, ಉಪಾಧ್ಯಕ್ಷರಾದ ಗುರುಮೂರ್ತಿ ಎಂ., ವಿಜಯ್ ಕುಮಾರ್ ಪಿ., ಸ್ವರ್ಣ ಗೌರಿ ಹೆಚ್ ಆರ್., ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬಿ ಎಂ., ಕೋಶಾಧ್ಯಕ್ಷ ವಿಜಯಕುಮಾರ್ ಎಂ ಗುಡದಿನ್ನಿ ,
ಕಾರ್ಯದರ್ಶಿಗಳಾದ ಮಂಜುನಾಥ್ ಎಸ್., ಕೆ ಸಿ ಅಶೋಕ್, ಕುಶಾಲ ಜಿ ಎಸ್ ವೀರಶೈವ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತುಮಕೂರು ಸಿದ್ದಗಂಗಾ ಮಠದ ಶ್ರೀ  ಶಿವಕುಮಾರ ಮಹಾಸ್ವಾಮೀಜಿರವರು ಜಾತಿ, ಮತ ಮತ್ತು ಪಂಥ ಭೇದವಿಲ್ಲದೇ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ನೀಡಿದರು, ಅವರ ನಿಸ್ವಾರ್ಥ ಸೇವೆಯನ್ನ ನೋಡಿದ ಭಕ್ತರೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ನೀಡಿದರು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಅಶಾಂತಿ ಮೂಡಬೇಕು ಎಂದು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ, ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದರು.

ವಿಶ್ವದ ಮಹಾನ್ ಸಂತ ಎಂಬ ಖ್ಯಾತಿ ಪಾತ್ರರಾಗಿರುವ ಶಿವಕುಮಾರ ಮಹಾಸ್ವಾಮೀಜಿರವರ ಪ್ರತಿಮೆಯನ್ನು ಹೊಡೆದು, ವಿರೂಪಗೊಳಿಸಿದ ಕಿಡಿಗೇಡಿಯನ್ನ ಬಂಧಿಸಿರುವ ಪೊಲೀಸ್ ಇಲಾಖೆಗೆ ಅಭನಂದನೆಗಳು. ಶಿವಕುಮಾರ ಮಹಾಸ್ವಾಮೀಜಿರವರ ಪ್ರತಿಮೆಗೆ ಸೂಕ್ತಬಂದೋಬಸ್ತು ಒದಗಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಪ್ರತಿಭಟನಾ ನಿರತರಾದ ವೀರಶೈವ ಸಮುದಾಯದ ಮುಖಂಡರುಗಳನ್ನು ಬಂಧಿಸಿ, ಬಿಡುಗಡೆ ಮಾಡಿದರು.

Leave a Reply