ಬೆಂಗಳೂರು: ಗುತ್ತಿಗೆ ಕಾರ್ಯಾದೇಶ ನೀಡಲು ಬರೋಬರಿ 40 ಲಕ್ಷ ಲಂಚ ಸ್ವೀರಿಸುತ್ತಿದ್ದ ವೇಳೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಇದೀಗ ಶಾಸಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್ ಮಾಡಾಳು ಬಂಧನದ ಬೆನ್ನಲ್ಲೇ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಅವರು ಘಟನೆ ನಡೆಯುತ್ತಿದ್ದಂತೆ ಕೆಎಸ್ ಅಂಡ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ತಲೆಮರೆಸಿಕೊಂಡಿರುವ ಮಾಡಾಳು ವಿರೂಪಾಕ್ಷಪ್ಪ ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ಮೂರು ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ.
ದಾವಣಗೆರೆಯ ಚನ್ನೇಶಪುರ ಗ್ರಾಮದಲ್ಲಿರುವ ಶಾಸಕರ ನಿವಾಸ, ಮಾವಿನಹೊಳೆ ಬಳಿ ಇರುವ ಮಾಡಾಳು ಕುಟುಂಬದ ಕ್ರಷರ್ ಕಚೇರಿ, ಮಾವಿನಕಟ್ಟೆ ಗ್ರಾಮದ ಬಳಿ ಇರುವ ತೋಟದ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಾಡಾಳು ವಿರೂಪಾಕ್ಷಪ್ಪ ಅವರ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.
ಪುತ್ರನ ಬಂಧನ ಲೋಕಾಯುಕ್ತ ದಾಳಿ ವೇಳೆ 8.10 ಕೋಟಿ ನಗದು ಪತ್ತೆಯಾದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಪ್ರಕರಣದಲ್ಲಿ ಮೊದಲ ಆರೋಪಿ ಮಾಡಿ ಎಫ್ ಐಆರ್ ದಾಖಲಿಸಿರುವುದು ಸಂಕಷ್ಟಕ್ಕೆ ಸಿಲುಕಿಸಿದೆ.
ಯಾವುದೇ ಕ್ಷಣದಲ್ಲಿ ಬಂಧನದ ಭೀತಿಗೆ ಸಿಲುಕಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸಿದ್ದು ಅದರಲ್ಲಿ ಸಫಲರಾಗುವ ಸಾಧ್ಯತೆ ಕಡಿಮೆಯಾಗಿದೆ.
ಈ ನಡುವೆ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ಮಾಡಾಳ್ ನಿವಾಸದಲ್ಲಿ ಸತತ 10 ಗಂಟೆಗಳಿನಿಂದ ನಿರಂತರವಾಗಿ ಲೋಕಾಯುಕ್ತ ಪೊಲೀಸರು ನಡೆಸಿದ್ದ ದಾಳಿ ಮುಕ್ತಾಯಗೊಂಡಿದ್ದು ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.
2,800 ಗ್ರಾಂ ಚಿನ್ನ: ಮಾಡಾಳು ನಿವಾಸದಲ್ಲಿ 2,800 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಆಭರಣಗಳು, 16.5 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಲೋಕಾಯುಕ್ತ ಪೊಲೀಸರು ಚಿನ್ನ, ಬೆಳ್ಳಿ, ನಗದು ಮತ್ತು ಆಸ್ತಿ ಪತ್ರಗಳ ಪಟ್ಟಿ ಮಾಡಿದ್ದು ಇದಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪತ್ನಿ ಲೀಲಾವತಿಯವರಿಂದ ಸಹಿ ಪಡೆದಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳು ಪ್ರಶಾಂತ್ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಲಂಚ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, ಬಿಜೆಪಿ ಶಾಸಕರಿಗೆ ಈಗ ಬಂಧನ ಭೀತಿ ಎದುರಾಗಿದೆ.
ಶ್ರೇಯಸ್ ಕಶ್ಯಪ್ ಅವರು ನೀಡಿದ್ದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಮಾಡಾಳು ವಿರೂಪಾಕ್ಷಪ್ಪ ಎ1 (ಮೊದಲ ಆರೋಪಿ) ಆಗಿದ್ದು, ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಎ2 (2ನೇ ಆರೋಪಿ), ಕೆಎಸ್ಡಿಎಲ್ ಅಕೌಂಟೆಂಟ್ ಸುರೇಂದ್ರ ಎ3, ಮಾಡಾಳು ಪ್ರಶಾಂತ್ ಸಂಬಂಧಿ ಸಿದ್ದೇಶ್ ಎ4, ಅರೋಮಾ ಕಂಪನಿ ಸಿಬ್ಬಂದಿ ಆಲ್ಬರ್ಟ್ ನಿಕೋಲಾ ಎ5, ಅರೋಮಾ ಕಂಪನಿ ಸಿಬ್ಬಂದಿ ಗಂಗಾಧರ ಎ6 ಆಗಿದ್ದಾರೆ.
ಸದ್ಯ ಮಾಡಾಳು ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ಮೂರು ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ. ಚನ್ನೇಶಪುರ ಗ್ರಾಮದಲ್ಲಿರುವ ಶಾಸಕರ ನಿವಾಸ, ಮಾವಿನಹೊಳೆ ಬಳಿ ಇರುವ ಮಾಡಾಳು ಕುಟುಂಬದ ಕ್ರಷರ್ ಕಚೇರಿ, ಮಾವಿನಕಟ್ಟೆ ಗ್ರಾಮದ ಬಳಿ ಇರುವ ತೋಟದ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.




