ಬೆಂಗಳೂರು: ದೇಶದ ಮೋಸ್ಟ್ ವಾಂಟೆಂಡ್ ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್ನ ಇಬ್ಬರು ಸಹಚರರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಲೆಮರಸಿಕೊಂಡಿದ್ದರು. ಇವರ ಬಗ್ಗೆ ಗಮನಹರಿಸಬೇಕಾದ ಪೊಲೀಸರು ಯಡವಟ್ಟು ಮಾಡಿಕೊಂಡ ಪರಿಣಾಮ ಅವರು ಕೆನಡಾಕ್ಕೆ ಪರಾರಿಯಾಗಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಲಾರೆನ್ಸ್ ಬಿಷ್ಣೋಯ್ ನ ಸಹಚರರಾದ ಮಂಜೋತ್ ಸಿಂಗ್ ಮತ್ತು ಸಾಹಿಲ್ ಚೌಹಾಣ್ ಹೆಣ್ಣೂರಿನ ಬಳಿ ವಾಸವಾಗಿದ್ದು, ಇಲ್ಲಿಂದಲೇ ಮಧ್ಯವರ್ತಿ ನೆರವಿನಿಂದ ಪಾಸ್ಪೋರ್ಟ್ ಮಾಡಿಸಿಕೊಂಡು ಕೆನಡಾಕ್ಕೆ ಪರಾರಿಯಾಗಿದ್ದಾರೆ ಎಂಬ ಸಂಗತಿ ಬಹಿರಂಗವಾಗಿದೆ.
ಹರಿಯಾಣ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವೆಡೆ ನಡೆದ ಕೊಲೆ, ಸುಲಿಗೆ, ದರೋಡೆಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಗಳಲ್ಲಿ ಜಾಮೀನು ಪೆಡದುಕೊಂಡು ಹೊರಬಂದಿದ್ದ ಆರೋಪಿಗಳು, 2024ರಲ್ಲಿ ಬೆಂಗಳೂರಿಗೆ ಬಂದು ಹೆಣ್ಣೂರಿನಲ್ಲಿ ನೆಲೆಸಿದ್ದರು.
ಮಂಜೋತ್ ಸಿಂಗ್ ಮತ್ತು ಸಾಹಿಲ್ ಚೌಹಾಣ್ ಇಬ್ಬರು ತಮ್ಮ ಹೆಸರಿನ ಒಂದೆರಡು ಅಕ್ಷರಗಳನ್ನಷ್ಟೇ ಬದಲಾಯಿಸಿಕೊಂಡು ಹೆಣ್ಣೂರು ಠಾಣೆ ವ್ಯಾಪ್ತಿ ಸರಾಯಿ ಪಾಳ್ಯದಲ್ಲಿ ಮಧ್ಯವರ್ತಿಯೊಬ್ಬನ ಮೂಲಕ ಇಲ್ಲದ ವಿಳಾಸ ನೀಡಿ ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ. ಪಾಸ್ಪೋರ್ಟ್ ಪರಿಶೀಲನೆಗೆ ಬಂದ ಇಬ್ಬರು ಪೊಲೀಸ್ ಪೇದೆಗಳು ಯಾವುದನ್ನೂ ಕೂಲಂಕಷವಾಗಿ ಪರಿಶೀಲಿಸದೆ ಹಣ ಪಡೆದುಕೊಂಡು ಇಬ್ಬರ ವಿಳಾಸ ಸರಿಯಾಗಿದೆ ಎಂಬ ವರದಿ ನೀಡಿದ್ದಾರೆ. ಅದರಂತೆ ಇಬ್ಬರಿಗೂ ಪಾಸ್ ಪೋರ್ಟ್ ಸಿಕ್ಕಿದ್ದು ಅದನ್ನು ಬಳಸಿಕೊಂಡು ಅವರು ಕೆನಡಾಕ್ಕೆ ಪರಾರಿಯಾಗಿದ್ದಾರೆ.
ಮತ್ತೂಂದೆಡೆ ಜಾಮೀನು ಪಡೆದುಕೊಂಡಿದ್ದ ಆರೋಪಿಗಳು ಹರಿಯಾಣದ ಸ್ಥಳೀಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಎಟಿಎಸ್ ಅಧಿಕಾರಿಗಳು ಇಬ್ಬರಿಗಾಗಿ ಶೋಧ ನಡೆಸಿದಾಗ ಇಬ್ಬರು ಕೆನಡಾಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಅವರು ಬೆಂಗಳೂರಿನ ವಿಳಾಸ ನೀಡಿ ಪಾಸ್ ಪೋರ್ಟ್ ಮಾಡಿಸಿಕೊಂಡು ಹೋಗಿರುವುದು ಗೊತ್ತಾಗಿ, ಇಲ್ಲಿಗೆ ಬಂದ ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿದ್ದಾರೆ. ಆಗ ಮಧ್ಯವರ್ತಿ ಮೂಲಕ ನಕಲಿ ವಿಳಾಸ ನೀಡಿ ಪಾಸ್ಪೋರ್ಟ್ ಪಡೆದುಕೊಂಡಿರುವುದು ಪತ್ತೆಯಾಗಿದೆ. ನಂತರ ಮಧ್ಯವರ್ತಿ ಅಮಿನ್ ಉಸ್ಮಾನ್ ಸೇಠ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ನಕಲಿ ವಿಳಾಸ ನೀಡಿ ಪಾಸ್ ಪೋರ್ಟ್ ಮಾಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




