ಬುದ್ಧನ ಶಾಂತಿ, ಸುಖ ಮತ್ತು ಧರ್ಮ ಪಾಲನೆ ಹೆಚ್ಚು ಪ್ರಸ್ತುತ ಎಂದು ಜನ ಭಾವಿಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

1 year ago

ಕಲಬುರ್ಗಿ: ದೇಶ ಈಗ ಅತ್ಯಂತ ಸಂಕಷ್ಟದಲ್ಲಿದೆ. ಯುದ್ಧ ಬೇಕೋ ಅಥವಾ ಬುದ್ಧ ಬೇಕೋ ಎನ್ನುವ ಹಂತದಲ್ಲಿದ್ದು, ಬುದ್ಧನ ಶಾಂತಿ, ಸುಖ ಮತ್ತು ಧರ್ಮ ಪಾಲನೆ ಹೆಚ್ಚು ಪ್ರಸ್ತುತ ಎಂದು ಜನರು ಭಾವಿಸುತ್ತಿದ್ದಾರೆ ಎಂದು‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಿದ್ದಾರ್ಥ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆಯ ಪ್ರಯುಕ್ತವಾಗಿ  ನಡೆದ ಬುದ್ಧ ವಂದನೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದುಃಖ ನಿವಾರಣೆ, ಶಾಂತಿ ಸಹಬಾಳ್ವೆ ಬಾಳುವುದು ಬುದ್ಧ ವಂದನೆಯಲ್ಲಿ ಹೇಳಿದ್ದಾರೆ. ಇಡೀ ದೇಶ ಕಷ್ಟ, ದುಃಖದಲ್ಲಿದೆ. ಜನರಿಗೆ ಯುದ್ಧ ಬೇಕೋ, ಬುದ್ಧ ಬೇಕೋ ಪ್ರಶ್ನೆ ನಮ್ಮ ಮುಂದಿದೆ. ಯಾರೂ ಯುದ್ಧ ಬಯಸಲ್ಲ, ಶಾಂತಿ ಇರಬೇಕು. ಬುದ್ಧ ತತ್ವದಲ್ಲಿ ನಡೆಯಬೇಕು ಎನ್ನುವುದು ಜನರ ಆಶಯವೂ ಆಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಇಡೀ ಜಗತ್ತು ಯುದ್ಧ ಬೇಡ, ಬುದ್ದನ ತತ್ವವನ್ನು ಪಾಲಿಸಲು ಮುಂದಾಗಬೇಕು ಎನ್ನುವ ಅಪೇಕ್ಷೆಯಲ್ಲಿದೆ. ಆದರೂ, ಉಕ್ರೇನ್, ಭಾರತ- ಪಾಕ್ ಆಗಲಿ ಸಣ್ಣ ಪುಟ್ಟ ಯುದ್ಧ ನಡೆದಿವೆ. ಯುದ್ಧ ಯಾವತ್ತಿಗಿದ್ದರೂ ಸಕಲ ಜೀವಗಳಿಗೂ ಹಾನಿಕಾರಕ. ‌ಮನುಷ್ಯ ಜೀವಕ್ಕೂ ದೊಡ್ಡ ಹಾನಿಕಾರಕ. ಇದು ಎಲ್ಲರಿಗೂ ಗೊತ್ತಿದೆ. ಕೆಲವೊಮ್ಮೆ ಅನಿವಾರ್ಯ ಇದ್ದಾಗ, ದೇಶ ಉಳಿಸಿಕೊಳ್ಳಲು ಯುದ್ಧ ಮುಖ್ಯವಾಗುತ್ತದೆ ಎಂದರು

ಸ್ವಾಭಿಮಾನಕ್ಕಾಗಿ ದೇಶದ ಜನತೆಯ ಭದ್ರತೆ, ಹಕ್ಕು, ಸಂವಿಧಾನ, ಧರ್ಮ ಇವುಗಳ ರಕ್ಷಣೆಗಾಗಿ ಯುದ್ಧ ಮಾಡಬೇಕಾದ ಅನಿವಾರ್ಯ ಎದುರಾಗುತ್ತದೆ. ಅಂತಹದೇ ಒಂದು ಅನಿವಾರ್ಯತೆ ಈಗ ಎದುರಾಗಿತ್ತು ಎಂದರು.

ಆದರೆ ಕೆಲವರು ಪ್ರಚಾರಕ್ಕಾಗಿ, ಲಾಭಕ್ಕಾಗಿ, ಹೆಸರು ಮಾಡಲು ಯುದ್ಧವನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.

ಈ ಹಿಂದೆಯೂ ದೇಶದ ಮೇಲೆ ಅನೇಕ ಸಲ ದಾಳಿಯಾದವು. ನಾವು ಶಕ್ತಿಶಾಲಿಯಾಗಿ ಎದುರಿಸಿದ್ದೇವೆ. ಪಾಕ್ ದಾಳಿ ಮಾಡಿದಾಗ ಮೂರು ಬಾರಿ ಪಾಠ ಕಲಿಸಿದ್ದೇವೆ. ಆದರೂ ಪಾಕಿಸ್ತಾನ ತನ್ನ ಹಳೆಯ ಚಾಳಿ ಬಿಡುತ್ತಿಲ್ಲ. ಇನ್ನೂ ಭಾರತಕ್ಕೆ ತೊಂದರೆ ಕೊಡುವ ಪ್ರಯತ್ನ ನಡೆದಿದೆ. ಅದನ್ನು ಎದುರಿಸುವ ಶಕ್ತಿ ನಮ್ಮ ಸೈನಿಕರಲ್ಲಿ ಇದೆ ಎಂದರು.

ಪಾಕಿಸ್ತಾನದ ವಿರುದ್ಧ ಭಾರತ ಇಂದಿಗೂ ಸೋಲು ಕಂಡಿಲ್ಲ.‌ ಹೀಗಾಗಿ ಸೈನಿಕರಿಗೆ ಧನ್ಯವಾದ ಹೇಳುತ್ತೇನೆ. ಪಹಲ್ಗಾಮ್ ನಲ್ಲಿ ಜೀವ ತೆತ್ತ ಭಾರತ ದೇಶವಾಸಿಗಳು ಹಾಗೂ ಯುದ್ಧದಲ್ಲಿ ಬಲಿಯಾದ ನಮ್ಮ ಸೈನಿಕರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಅವರ ಕುಟುಂಬಗಳಿಗೆ ನಾನು ಸಾಂತ್ವನವನ್ನು ಹೇಳುತ್ತೇನೆ ಎಂದರು.

Leave a Reply