ಒತ್ತುವರಿಯಾಗಿದ್ದ 34,000 ಎಕರೆ ಪೈಕಿ 15,413 ಎಕರೆ ತೆರವುಗೊಳಿಸಲಾಗಿದೆ: ರಾಮಲಿಂಗಾರೆಡ್ಡಿ

1 year ago

ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34 ಸಾವಿರ ದೇವಸ್ಥಾನಗಳಿಗೆ ಸೇರಿದ ಸುಮಾರು 34 ಸಾವಿರ ಎಕರೆ ಒತ್ತುವರಿಯಾಗಿದ್ದು ಈ ಸಂಬಂಧ 15,413 ಎಕರೆ ಸ್ಥಳವನ್ನು ತೆರವುಗೊಳಿಸಲಾಗಿದೆ. ಇನ್ನುಳಿದ ಜಾಗವನ್ನ ಇನ್ನೊಂದು ವರ್ಷದಲ್ಲಿ ಸರ್ವೇ ಕಾರ್ಯ ಮುಗಿಸಿ ತೆರವಿಗೆ ಕ್ರಮಕೈಗೊಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ಸೇರಿದ ಆಸ್ತಿಗಳ ಅನಧಿಕೃತವಾಗಿ ಬೇರೆಯವರ ಹೆಸರಿನಲ್ಲಿ ಆಸ್ತಿ ಒತ್ತುವರಿಯಾಗಿದ್ದು, ಈ ಸಂಬಂಧ ಭೂಕಬಳಿಕೆ ನ್ಯಾಯಲಯ ಸೇರಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಅಬ್ದುಲ್ ಜಬ್ಬರ್ ಪ್ರಶ್ನೆಗೆ ಅವರು ಉತ್ತರಿಸಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳ ಜಾಗದ ರಕ್ಷಣೆ ಹಾಗೂ ಒತ್ತುವರಿಯಾಗಿದ್ದ 36 ಸಾವಿರ ಎಕರೆ ಒತ್ತುವರಿ ಪೈಕಿ ಕಳೆದ ವರ್ಷ 15,413 ಎಕರೆ ಜಮೀನು ಇಂಡೀಕರಣ ಮಾಡಲಾಗಿದೆ. ಇನ್ನುಳಿದ 20 ಸಾವಿರ ಎಕರೆ ಜಾಗವನ್ನ ಇನ್ನೊಂದು ವರ್ಷದಲ್ಲಿ ಸರ್ವೆಕಾರ್ಯ ಮುಗಿಸಿ ತೆರವುಗೊಳಿಸಲಾಗುವುದು ಎಂದರು. 

ಮುಜರಾಯಿ ಇಲಾಖೆಗೆ ಸೇರಿದ ಜಮೀನುಗಳನ್ನ ಸಂರಕ್ಷಿಸಲು ಹಾಗೂ ಸರ್ವೇ ಕಾರ್ಯ ಮುಗಿಸಲು ತಿಂಗಳಾವಾರು ಗುರಿ ನಿಗದಿಪಡಿಸಲಾಗಿದೆ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳ ನಿರ್ವಹಣ ಕುರಿತಂತೆ  ಆಯುಕ್ತಾಲಯ ಹಂತದ ಹಿರಿಯ ಅಧಿಕಾರಿಯನ್ನ ಎಸ್ಟೇಟ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ನೊಂದು ವರ್ಷದೊಳಗೆ ಒತ್ತುವರಿಯಾಗಿರುವ ಇಲಾಖೆಯ ಎಲ್ಲಾ ಜಾಗವನ್ನ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು. 

ಇನ್ನು ಬಿಜೆಪಿಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡುವ ಉದ್ದೇಶ ಹೊಂದಿದ್ದು, ಈಗಾಗಲೇ 4ಸಾವಿರ ಲ್ಯಾಪ್ಟಾಪ್ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

2024-25 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಲ್ಯಾಪ್ಟಾಪ್ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿಸುವ ಛಾವಡಿಗಳು ಕಂದಾಯ ಇಲಾಖೆಯ ಸುಪರ್ದಿಗೆ ಸೇರಿರುತ್ತವೆ. ಈ ಛಾವಡಿಗಳು ಶಿಥಿಲಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳ ಪುನರ್ ನಿರ್ಮಾಣ ಮಾಡಲು ಪರಿಶೀಲಿಸಲಾಗುವುದು ಎಂದರು.

Leave a Reply