15 ಸಾವಿರ ಎಕರೆ ಜಮೀನನ್ನು ದೇವಾಲಯಗಳ ಹೆಸರಿಗೆ ಪಹಣಿ ದಾಖಲಿಸಲಾಗಿದೆ: ರಾಮಲಿಂಗಾರೆಡ್ಡಿ

1 year ago

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ನೂರಾರು ದೇವಾಲಯಗಳ ಇನಾಂ ಜಮೀನು ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಿ ದೇವಾಲಯದ ಹೆಸರಿಗೆ ಪಹಣಿ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ ಟಿ ರವಿ ಅವರ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ 34 ಸಾವಿರ ಮುಜರಾಯಿ ದೇವಾಲಯಗಳಿದ್ದು, ಈಗಾಗಲೇ 15 ಸಾವಿರ ಎಕರೆ ಜಮೀನನ್ನು ದೇವಾಲಯಗಳ ಹೆಸರಿಗೆ ಪಹಣಿ ದಾಖಲಿಸಲಾಗಿದೆ ಎಂದರು.

ಜೆಡಿಎಸ್‌‍ ನ ಟಿ.ಎನ್‌.ಜವರಾಯಿಗೌಡ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಧಾರ್ಮಿಕ ದತ್ತಿ ಇಲಾಖೆಗಳು ಹೊಂದಿರುವ ಚಿರಾಸ್ತಿಗಳನ್ನು ಸಂಬಂಧಿಸಿದ ದೇವರ ಹೆಸರಿಗೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ದೇವಾಲಯದ ಹೆಸರನ್ನು ಮ್ಯುಟೇಷನ್‌ ಮತ್ತು ಆರ್‌ಟಿಸಿಯಲ್ಲಿ ನಮೂದಿಸುವಾಗ ದೇವಸ್ಥಾನದ ಹೆಸರು ಹಾಗೂ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಸರ್ಕಾರ ಎಂದು ನಮೂದಿಸಲು ಆದೇಶಿಸಿರುವುದಾಗಿ ತಿಳಿಸಿದರು.

ದೇವಾಲಯದ ಆಸ್ತಿಗಳ ಸರ್ವೇ ಕಾರ್ಯ ಕೈಗೊಂಡು ಜಮೀನುಗಳನ್ನು ದೇವಾಲಯಗಳ ಹೆಸರಿಗೆ ದಾಖಲಿಸುವ ಕಾರ್ಯ ಜಾರಿಯಲ್ಲಿದೆ. ಒಮ್ಮೆ ದೇವಸ್ಥಾನದ ಭೂಮಿ ಎಂದು ಪರಿಗಣಿಸಿದ ನಂತರ ಯಾವುದೇ ಕಾಲದಲ್ಲೂ ದೇವಸ್ಥಾನದ ಭೂಮಿಯೇ ಆಗಿರುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Leave a Reply