ಧರ್ಮಸ್ಥಳದ ಪ್ರಕರಣದಲ್ಲಿ ತನಿಖೆ ವಿಳಂಬವಾಗುತ್ತಿದೆ ಎಂಬುದು ಸರಿಯಲ್ಲ: ಡಾ.ಜಿ.ಪರಮೇಶ್ವರ್ 

7 months ago

ಬೆಂಗಳೂರು: ಧರ್ಮಸ್ಥಳದ ಪ್ರಕರಣದಲ್ಲಿ ತನಿಖೆ ವಿಳಂಬವಾಗುತ್ತಿದೆ ಎಂಬುದು ಸರಿಯಲ್ಲ. ಷಡ್ಯಂತ್ರ ಮಾಡಿದವರನ್ನು ಬಂಧಿಸಲು ಕಾನೂನಿನ ತೊಡಕುಗಳಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ವಿಚಾರಗಳಲ್ಲಿ ಎಫ್‌ಎಸ್‌‍ಎಲ್‌ ವರದಿಗಳು ಬಾಕಿ ಇವೆ. ಎಸ್‌‍ಐಟಿ ಅಧಿಕಾರಿಗಳು ತಮ ಪಾಲಿನ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವರೆಗೂ ಸಿಕ್ಕಿರುವ ಕೆಲ ಅಂಶಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಮೊದಲು ಸಿಕ್ಕಿರುವ ಅಂಶಗಳನ್ನು ಕ್ರೊಡೀಕರಿಸಿದ್ದಾರೆ. ಶೀಘ್ರದಲ್ಲೇ ತನಿಖೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ ಎಂದರು.

ಈ ನಡುವೆ ಸಿಕ್ಕವರೆಲ್ಲಾ ಅರ್ಜಿ ಕೊಡುತ್ತಿದ್ದಾರೆ. ಅಲ್ಲಿ ಮೂಳೆಗಳಿವೆ. ಇಲ್ಲಿ ಮೂಳೆಗಳಿವೆ ಎಂದು ಹೇಳುತ್ತಿದ್ದಾರೆ. ಇಂತಹ ವಿಚಾರಗಳಿಗೆ ಕೊನೆಯಾಡಬೇಕಿದೆ. ಮಹೇಶ್‌ ತಿಮರೋಡಿ ಗಡಿಪಾರು ಪ್ರಕರಣವನ್ನು ನ್ಯಾಯಾಲದಲ್ಲಿ ಪ್ರಶ್ನಿಸಲಾಗಿದೆ. ಅಲ್ಲಿನ ತೀರ್ಪನ್ನು ಕಾಯುತ್ತಿದ್ದೇವೆ. ಎಲ್ಲವನ್ನೂ ಕಾನೂನಿನ ಪ್ರಕಾರವೇ ಬಂಧನ ಸೇರಿದಂತೆ ಎಲ್ಲಾ ಪ್ರಕ್ರಿಯಗಳನ್ನು ನಡೆಸಲಾಗುತ್ತದೆ. ಎಸ್‌‍ಐಟಿಗೆ ಸರ್ಕಾರ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ ಎಂದರು.

ತನಿಖೆಯ ಹಂತದಲ್ಲಿ ಇಂತಿಷ್ಟೇ ಕಾಲಮಿತಿ ಎಂದು ನಿಗದಿಪಡಿಸಲು ಸಾಧ್ಯವಿಲ್ಲ. ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಪ್ರಮುಖ ಮಾಹಿತಿಗಳ ಅಗತ್ಯವಿರುತ್ತದೆ. ಎಫ್‌ಎಸ್‌‍ಎಲ್‌ನ ವರದಿ ಅಂತಿಮಗೊಳ್ಳಬೇಕು. ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಗೊಂಡಿರುವ ವಿಚಾರವನ್ನು ಎಸ್‌‍ಐಟಿ ಅಧಿಕಾರಿಗಳು ಪರಿಗಣಿಸಿ ತಮ್ಮ ವರದಿಯಲ್ಲಿ ಉಲ್ಲೇಖಿಸಬಹುದು ಎಂದರು.

Leave a Reply