ಅಡುಗೆ ಅನಿಲ ಸಂಪರ್ಕಕ್ಕೆ ಆಧಾರ್ ಜೋಡಣೆಗೆ ಕೊನೆ ದಿನಾಂಕ ನಿಗದಿ ಇಲ್ಲ

2 years ago

ಸುಳ್ಳು ಸಂದೇಶ, ತಪ್ಪು ಮಾಹಿತಿಯನ್ನು ಗ್ರಾಹಕರು ನಂಬಬಾರದು

ಧಾರವಾಡ: ಗೃಹಬಳಕೆ ಅನಿಲ ಸಂಪರ್ಕ ಹೊಂದಿರುವವರು ತಮ್ಮ ಆಧಾರ್ ಬಯೋಮೆಟ್ರಿಕ್ ನೀಡಿ, ಕೆವೈಸಿ ಮಾಡಿಸಿಕೊಳ್ಳಲು ಯಾವುದೇ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿರುವುದಿಲ್ಲ ಮತ್ತು ಇಂತಹ ತಪ್ಪು ಮಾಹಿತಿ ಅಥವಾ ಸುಳ್ಳು ಸಂದೇಶಗಳನ್ನು ಗ್ರಾಹಕರು ನಂಬಬಾರದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ತಿಳಿಸಿದ್ದಾರೆ.

ಕೆಲವು ಸಮೂಹ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುಳ್ಳು ಸಂದೇಶದಿಂದ ಗ್ರಾಹಕರು ಜಿಲ್ಲೆಯಾದ್ಯಂತ ಗ್ಯಾಸ್ ಏಜೆನ್ಸಿಗಳ ಮುಂದೆ ಕೆವೈಸಿ ಮಾಡಿಸಲು ಸಾಲುಗಟ್ಟಿ ನಿಲುತ್ತಿರುವ ಕುರಿತು ವರದಿಯಾಗುತ್ತಿದೆ ಎಂದಿದ್ದಾರೆ.

ಗೃಹಬಳಕೆ ಅನಿಲ ಸಂಪರ್ಕ ಹೊಂದಿರುವವರು ಕೆವೈಸಿ ಮಾಡಿಸಲು ಡಿಸೆಂಬರ 31 ಕೊನೆಯ ದಿನಾಂಕವಲ್ಲ ಮತ್ತು ಸಬ್ಸಿಡಿಗಾಗಿ ಗ್ರಾಹಕರು ನಿಗದಿತ ದಿನಾಂಕದೊಳಗೆ ಕೆವೈಸಿ ಮಾಡಿಸಿಕೊಳ್ಳಬೇಕೆಂಬುವುದು ತಪ್ಪು ಮಾಹಿತಿಯಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕರು ಯಾವುದೇ ರೀತಿಯ ವಾಟ್ಸ್ಪ್ ಮೆಸೆಜ್ ಹಾಗೂ ವದಂತಿಗಳನ್ನು ನಂಬಬಾರದು ಮತ್ತು ಅನಗತ್ಯವಾಗಿ ಗೊಂದಲಗಳಿಗೆ ಒಳಗಾಗಬಾರದು. ಗ್ರಾಹಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಬಯೋಮೆಟ್ರಿಕ್ ನೀಡಬಹುದಾಗಿದೆ. ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವುದು ಬೇಡವೆಂದು ಅಡುಗೆ ಅನಿಲ ಸಂಪರ್ಕ ಹೊಂದಿದ ಗ್ರಾಹಕರಿಗೆ ಅವರು ತಿಳಿಸಿದ್ದಾರೆ.

Leave a Reply