ಸಿನಿಮಾ ಕಥೆಯನ್ನು ಮೀರಿಸಬಲ್ಲ ಮರ್ಡರ್ ಮಿಸ್ಟರಿ

2 years ago

ಹಾಸನ: ಇದು ಯಾವುದೇ ಸಿನಿಮಾ ಕಥೆಯನ್ನು ಮೀರಿಸಬಲ್ಲ ಮರ್ಡರ್ ಮಿಸ್ಟರಿ. ವಿಮೆ ಹಣ ಲಪಟಾಯಿಸಲು ಗಂಡ ಹೆಂಡತಿ ಸಕ್ಕತ್ ಪ್ಲಾನ್ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ.

ಆಗಸ್ಟ್ 12ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗೊಲ್ಲರಹೊಸಳ್ಳಿ ಗೇಟ್‌ ಬಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಜರು ಮಾಡಿದ್ದರು.

ಅದೇ ಸ್ಥಳದಲ್ಲಿ ಪಂಕ್ಚರ್‌ ಆಗಿದ್ದ ಕಾರು ಹಾಗೂ ಒಂದು ಲಾರಿ ಸಿಕ್ಕಿದ್ದವು. ಮೇಲ್ನೋಟಕ್ಕೆ ಪಂಕ್ಚರ್‌ ಆಗಿದ್ದ ಕಾರಿನ ಟೈರ್‌ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಮೃತಪಟ್ಟಿರುವಂತೆ ಕಾಣಿಸುತ್ತಿತ್ತು. ಮೃತ ವ್ಯಕ್ತಿಯ ಗುರುತು ಪತ್ತೆಯಾಗದೆ ಅದನ್ನು ಅಪರಿಚಿತ ವ್ಯಕ್ತಿ ಎಂದು ಪರಿಗಣಿಸಿ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಗಂಡಸಿ ಠಾಣೆ ಪೊಲೀಸರು ಗುರುತು ಪತ್ತೆಗೆ ಮುಂದಾಗಿದ್ದರು.

ಈ ನಡುವೆ ಆಗಸ್ಟ್13 ರಂದು ಹಾಸನ ಜಿಲ್ಲಾಸ್ಪತ್ರೆಗೆ ಬಂದ ಹೊಸಕೋಟೆಯ  ಶಿಲ್ಪರಾಣಿ ಎಂಬ ಮಹಿಳೆ ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಗುರುತಿಸಿದ್ದಳು. ಪೊಲೀಸರು ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಹಸ್ತಾಂತರಿಸಿದ್ದರು. ಮೃತ ದೇಹ ಕೊಂಡೊಯ್ದಿದ್ದ ಆಕೆ ಅಂದೇ ಹೊಸಕೋಟೆ ತಾಲ್ಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಳು.

ಆಸ್ಪತ್ರೆಯಲ್ಲಿ ಆಕೆಯ ನಡವಳಿಕೆ ನಂತರ ಅಂತ್ಯಸಂಸ್ಕಾರ ಸಮಯದಲ್ಲಿ ಆಕೆ ನಡೆದುಕೊಂಡ ರೀತಿಯನ್ನು ಗಮನಿಸಿದ ಪೊಲೀಸರಿಗೆ ಸಣ್ಣ ಅನುಮಾನ ಕಾಡಿತು. ಅದನ್ನೇ ಪ್ರಧಾನವಾಗಿಟ್ಟುಕೊಂಡ ಪೊಲೀಸರು ತನಿಖೆ ಮುಂದುವರಿಸಿದರು.

ಇದಕ್ಕೆ ಪೂರಕವೆಂಬಂತೆ, ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪ್ರಕರಣದ ಬಗ್ಗೆ ಮತ್ತಷ್ಟು ಅನುಮಾನಗೊಂಡು ತನಿಖೆ ತೀವ್ರಗೊಳಿಸಿದ್ದರು. ಈ ನಡುವೆ, ಶಿಲ್ಪರಾಣಿಯ ಪತಿ ಮುನಿಸ್ವಾಮಿಗೌಡ ಮರೆಯಲ್ಲಿ ನಿಂತು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಗಮನಿಸಿದ್ದಾನೆ. ಕಸಿವಿಸಿಯಿಂದ ಒದ್ದಾಡಿದ ಆತ ತಡೆಯಲಾಗದೆ ತನ್ನ ಸಂಬಂಧಿಯಾದ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಮುಂದೆ ಹಾಜರಾಗಿ ಎಲ್ಲ ಘಟನೆಯನ್ನು ವಿವರಿಸಿದ್ದಾನೆ.

ಇದಾದ ನಂತರ ಪೊಲೀಸರು ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಸ್ವಾಮಿಗೌಡ ಹಾಗೂ ಶಿಲ್ಪರಾಣಿಯನ್ನೂ ಬಂಧಿಸಿದ್ದಾರೆ.

ಹಾಗಾದರೆ ಮೃತ ವ್ಯಕ್ತಿ ಯಾರು ಎನ್ನುತ್ತೀರಾ ಅದೇ ನಿಜವಾದ ಕತೆ. ಬಂಧಿತ ಮುನಿಸ್ವಾಮಿ ಗೌಡ ಹೊಸಕೋಟೆಯಲ್ಲಿ ಟೈರ್‌ ಮಾರಾಟ ಮಳಿಗೆ ಹೊಂದಿದ್ದಾರೆ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ಮುನಿಸ್ವಾಮಿಗೌಡ ಸಾಲದಲ್ಲಿ ಮುಳುಗಿ ಹೋಗಿದ್ದ. ಇದರಿಂದ ಪಾರಾಗಲು ದಾರಿ ಕಾಣದೆ ಒದ್ದಾಡುತ್ತಿದ್ದ. ಆತ ತನ್ನ ಮರಣಾನಂತರ ದೊರೆಯುವ ಜೀವವಿಮೆ ಹಣವನ್ನು ಬದುಕಿದ್ದಾಗಲೇ ಲಪಟಾಯಿಸಲು ಪತ್ನಿ ಜತೆಗೂಡಿ ಕುತಂತ್ರ ಹೆಣೆದಿದ್ದ. 

ಅದರಂತೆ ಭಿಕ್ಷುಕನೊಬ್ಬನನ್ನು ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು, ಮುನಿಸ್ವಾಮಿಗೌಡ ತನ್ನೊಂದಿಗೆ ಕಾರಿನಲ್ಲಿ ಭಿಕ್ಷುಕನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ್ದ. ಮಾರ್ಗಮಧ್ಯೆ ಗೊಲ್ಲರ ಹೊಸಳ್ಳಿ ಗೇಟ್‌ ಬಳಿ ಕಾರಿನ ಚಕ್ರ ಪಂಕ್ಚರ್‌ ಆಗಿದ್ದು, ಚಕ್ರ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದ. ಅದರಂತೆ ಆತ ಪಂಕ್ಚರ್‌ ಆದ ಚಕ್ರ ಬಿಚ್ಚಲು ಕುಳಿತಿದ್ದಾಗ ಆತನ ಕುತ್ತಿಗೆಗೆ ಚೈನ್‌ ಹಾಕಿ ಎಳೆದು ರಸ್ತೆಗೆ ಬೀಳಿಸಿದ್ದ. ಆಗ ಆತನ ಸಂಚಿನಂತೆ ಹಿಂಬಾಲಿಸಿಕೊಂಡು ಬಂದಿದ್ದ ಲಾರಿ ಚಾಲಕ ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ ಕೊಲೆಗೈದಿದ್ದ. ನಂತರ ಲಾರಿ, ಕಾರುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ಮುನಿಸ್ವಾಮಿಗೌಡ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು.

ಇದಾದ ನಂತರ ಪೂರ್ವ ಯೋಜನೆಯಂತೆ ಶಿಲ್ಪರಾಣಿ ತನ್ನ ಪತಿ ಎಂದು ಹೇಳಲಾದ ಭಿಕ್ಷುಕನ ಮೃತ ದೇಹ ಪಡೆದು ಸಂಸ್ಕಾರ ಮಾಡಿ ಜೀವ ವಿಮೆ ಹಣ ಪಡೆಯಲು ಪ್ರಯತ್ನ ಆರಂಭಿಸಿದ್ದರು. ಇದರ ನಡುವೆ ತನ್ನ ಅಸಲಿ ಗಂಡ ಮುನಿಸ್ವಾಮಿ ಗೌಡ ಪಾಪ ಪ್ರಜ್ಞೆಯಿಂದ ತಪ್ಪು ಒಪ್ಪಿಕೊಂಡ ಪರಿಣಾಮ ಇದೀಗ ಇಬ್ಬರು ಜೈಲು ಪಾಲಾಗಿ ಕಂಬಿ ಎಣಿಸುತ್ತಿದ್ದಾರೆ.

Leave a Reply