ಬೆಂಗಳೂರು: ಪ್ರತಿ ವರ್ಷ ಗಣತಂತ್ರ ದಿನದಂದು ದೆಹಲಿಯ ರಾಜ್ ಪಥ್ ನಲ್ಲಿ ನಡೆಯುವ ಪರೇಡ್ ವೇಳೆ ರಾಜ್ಯಗಳ ಸಾಧನೆ ಮತ್ತು ಪರಂಪರೆ ತಿಳಿಸುವ ಸ್ತಬ್ಧ ಚಿತ್ರಗಳ ಆಕರ್ಷಕ ಮೆರವಣಿಗೆ ನಡೆಯುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿವಹಿಸಿ ಸಿದ್ಧಪಡಿಸಿದ್ದ ಬ್ರಾಂಡ್ ಬೆಂಗಳೂರಿನ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಪರೇಡ್ ನಲ್ಲಿ ಭಾಗವಹಿಸಲು ವಾರ್ತಾ ಇಲಾಖೆ ವಿಶೇಷ ಆಸಕ್ತಿ ವಹಿಸಿ ಬೆಂಗಳೂರಿನ ಸಾಧನೆ ಮತ್ತು ಪರಂಪರೆಯನ್ನು ಬಿಂಬಿಸುವ ಬ್ರಾಂಡ್ ಬೆಂಗಳೂರು ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಸ್ತಬ್ಧಚಿತ್ರದಲ್ಲಿ ಭಾಗವಹಿಸಲು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರದ ನಡೆ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಾರಿ ರಾಜ್ಯ ಸರ್ಕಾರ ತನ್ನ ಸ್ತಬ್ಧ ಚಿತ್ರದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ದೇವತೆ ಅಣ್ಣಮ್ಮ ದೇವಿಯ ಪ್ರತಿಕೃತಿಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಬದಲಾಗಿ ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಜ್ಯದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಕಳೆದ ವರ್ಷ ಇದೇ ರೀತಿ ಸ್ತಬ್ಧ ಚಿತ್ರ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು. ಚುನಾವಣಾ ವರ್ಷವಾಗಿದ್ದರಿಂದಾಗಿ ಅದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಮುಜುಗರ ಎದುರಾದಾಗ ಪ್ರಮುಖ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ವಿಶೇಷ ಅನುಮತಿ ಪಡೆಯುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ರಾಜ್ಯದ ಪ್ರತಿಕೃತಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದರು.
ಕಳೆದ ವರ್ಷ ಚುನಾವಣೆಯ ಕಾರಣಕ್ಕೆ ವಿಶೇಷ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಈ ಬಾರಿ ಮತ್ತೆ ರೊಟೇಷನ್ ನೆಪ ಹೇಳಿ ಅನುಮತಿಯನ್ನು ತಳ್ಳಿ ಹಾಕಿದೆ. ವಾಸ್ತವಾಂಶ ಏನೇ ಇದ್ದರೂ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡದೇ ಇರುವುದು ಕನ್ನಡ ವಿರೋಧಿ ಧೋರಣೆ ಎಂದು ಬಿಂಬಿಸಲಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.




