ನೆರಳು ಮಾತನಾಡುವ ಹೊತ್ತು ಕವನ ಸಂಕಲನಕ್ಕೆ ಎರಡು ದಶಕದ ನೆನಪು

2 years ago

2004 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಕೃತಿಯ ಧನಸಹಾಯ ಪಡೆದು ನನ್ನ #ನೆರಳುಮಾತನಾಡುವಹೊತ್ತು ಮೊದಲ ಕವನ ಸಂಕಲನ ಪ್ರಕಟವಾಯ್ತು. ಮಲ್ಲೇಪುರಂ ಜಿ. ವೆಂಕಟೇಶ್ ಆಗ ಪ್ರಾಧೀಕಾರದ ಅಧ್ಯಕ್ಷರಾಗಿದ್ದರು. ನನಗೆ ಪ್ರಕಟಿಸೋ ದೈರ್ಯ ಇರಲಿಲ್ಲ ಹಾಗಾಗಿ ಹಸ್ತಪ್ರತಿಯನ್ನು ಪ್ರಾಧೀಕಾರಕ್ಕೆ ಕಳಿಸಿರಲಿಲ್ಲ. ಕನ್ನಡವಿವಿಯ ದ್ರಾವಿಡ ಅಧ್ಯಯನ ವಿಭಾಗದಲ್ಲಿದ್ದ  ಮಲ್ಲೇಪುರಂ ಸರ್ ‘ಹೇಯ್ ಹಸ್ತಪ್ರತಿ ಕೊಡ್ಲಾ..’ ಅಂತ ಗದರಿಸಿ ಅವರೆ ಇಸ್ಕೊಂಡೋಗಿದ್ರು.

ನಾನ್ನೂರು ಕೊಟ್ಟೂರು ಪಕ್ಕದ ಜೋಳದಕೂಡ್ಲಿಗಿ ಆದ ಕಾರಣ..’ದೇವರ ಹೆಣ’ ಕತೆ ಓದಿ ಬೆಕ್ಕಸಬೆರಗಾದ ಕಾರಣ ಕುಂಬಾರ ವೀರಭದ್ರಪ್ಪ ಅವರ ಬಗ್ಗೆ ಅಪಾರ ಗೌರವವಿತ್ತು. ಈ ಕಾರಣಕ್ಕೆ ಆಗ #ಕುಂವಿ ಅವರಿಂದಲೇ ಮುನ್ನುಡಿ ಬರೆಸಬೇಕೆಂಬ ಆಸೆಯಿತ್ತು. ಅವರ ಮನೆಗೋಗಿ ಕೇಳಿಕೊಂಡಾಗ, ನನ್ನ ಬೇಡಿಕೆಯನ್ನು ನಯವಾಗಿ ನಿರಾಕರಿಸಿದ್ದರು. ಆಗ ಅವರು ನನ್ನನ್ನು ನೋಡಿದ ನೋಟ..’ನಿನ್ನಂತವರಿಗೆಲ್ಲ ನಾನು ಮುನ್ನುಡಿ ಬರೀಬೇಕಾ?’ ಅನ್ನೋ ತರಹದ ಜಮೀನ್ದಾರಿಕೆಯ ಗತ್ತು ಇತ್ತು. ಆಗ ನಾನು ಯಾಕಾದ್ರೂ ಕೇಳಿದ್ನೋ..ಎಂತಹ ಘೋರ ಅಪರಾಧ ಮಾಡಿದ್ನಲ್ಲಾ ಅನ್ಕಂಡು  ಹೆದರಿಕೊಂಡಿದ್ದೆ. ಬಹುದಿನಗಳ ಕಾಲ ಕುಂವಿ ಯವರನ್ನು ನೋಡಲು ಭಯ ಪಡುತ್ತಿದ್ದೆ. ಅದೇ ಮೊದಲು, ಅದೇ ಕೊನೆ ಮತ್ತೆಂದೂ ಅವರ ಮನೆಕಡೆ ತಲೆಹಾಕಲಿಲ್ಲ. ಆ ದೃಷ್ಯ ಇಂದಿಗೂ ಕಣ್ಣ ಮುಂದಿದೆ.

ಹೀಗಾಗಿ ಹಿರಿಯರಿಂದ ಮುನ್ನುಡಿ ಬರೆಸೋದೆ ಬೇಡಾಂತ ಬೇಸರವಾಗಿ, ಉಷಾರಾಣಿ, ನಿರಂಜನ್  ಅವರೊಡನೆ ಚರ್ಚಿಸಿ ಆಗ ಹೊಸತಲೆಮಾರಿನ ಪ್ರಖರ  ಬರಹಗಾರರಾಗಿದ್ದ
ಆನಂದ ಋಗ್ವೇದಿ ಅವರಿಂದ ಮುನ್ನುಡಿ, ಬಿ.ಪೀರ್ ಭಾಷಾ ಅವರಿಂದ ಬೆನ್ನುಡಿ ಬರೆಸಿದ್ದೆ. ಮಂಜುನಾಥ ಕಲ್ಲೇದೇವರ್ ಅನ್ನೋರು ಮುಖಪುಟ ಮಾಡಿದ್ರು.(ಈಗ ಎಲ್ಲಿದಾರೋ ಸಂಪರ್ಕವಿಲ್ಲ) ಡಾ.ಎಂ.ಬೈರೇಗೌಡ್ರು ತಮ್ಮ ಮುದ್ದುಶ್ರೀ ಪ್ರಕಾಶನದಿಂದ ಪ್ರಕಟಿಸಿದ್ದರು. ಇದೆಲ್ಲ ಆಗಿನ ನಾವುನಮ್ಮಲ್ಲಿ ಟೀಂ.

ಹೊಸಪೇಟೆ ತಾಲೂಕು ಕಸಾಪ ದಿಂದ ನನ್ನ ಮತ್ತು ಜಾಜಿ‌ದೇವೇಂದ್ರಪ್ಪ ಅವರ #ಬಾನಬೆಡಗು ಕವನ ಸಂಕಲನಗಳು ಹೊಸಪೇಟೆಯ ರೋಟರಿ ಕ್ಲಬ್ಬಲ್ಲಿ ಬಿಡುಗಡೆ ಆಗಿದ್ದವು. ಆಗಿನ ಕಸಾಪ ಅಧ್ಯಕ್ಷರು ಡಾ.ಕೆ.ರವೀಂದ್ರನಾಥ ಸರ್ ಪ್ರೀತಿಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು.

ಇಂತಪ್ಪ ಮೊದಲ ತೊದಲುನುಡಿಗಳಂತಹ ತಾಜಾ ಕವಿತೆಗಳ ಗುಚ್ಛವಿದು. ಆಗ ವೆಂಕಟರಮಣಗೌಡರ #ಹಂಗಾಮ ಪತ್ರಿಕೆಲಿ ‘ದೇಸಿ ಘಮಲು’ ಅಂತ ಪುಟ್ಟ ಟಿಪ್ಪಣಿ ಬರೆದಿದ್ದರು. ಸುಧಾ ಪತ್ರಿಕೇಲೂ ಪುಟ್ಟ ಪರಿಚಯ ಬಂದಿತ್ತು. ನನ್ನ ಬಳಿ ಇರೋ ಒಂದೇ ಒಂದು ಪ್ರತಿ ಮುಖಪುಟ ಕೊಳಕಾಗಿದೆ.. ಇಷ್ಟು ಕ್ಲಾರಿಟಿ ಇರಲಿಲ್ಲ. ಮಂಗಾಪುರದ ಗೆಳೆಯ ರುದ್ರೇಶಗೆ ಕೊಟ್ಟಿದ್ದ ಪ್ರತಿಯನ್ನು ಅವರ ತಮ್ಮ ವೀರೇಶ್ ವಾಟ್ಸಪ್ ನಲ್ಲಿ ಕಳಿಸಿದ್ರು.. ಹಾಗಾಗಿ ಇಲ್ಲಿ ಹಂಚ್ಕೊಂಡೆ.

ಅಂದ್ಹಾಗೆ ಪ್ರಕಟವಾಗಿ 20 ವರ್ಷ ಆಯ್ತು…樂

– ಡಾ. ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

Leave a Reply