ಅರ್ಹರು ತಪ್ಪದೇ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಿ: ಡಾ. ನಾಗಲಕ್ಷ್ಮಿ ಚೌಧರಿ

1 year ago

ಬಳ್ಳಾರಿ: 18 ವರ್ಷ ತುಂಬಿದ ಯುವ ಸಮೂಹವು ತಪ್ಪದೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು, ಮತದಾನ ಮಾಡಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಜಿಲ್ಲಾ ಪಂಚಾಯತ್, ಬಳ್ಳಾರಿ ತಾಲ್ಲೂಕು ಪಂಚಾಯತ್, ಸಂಗನಕಲ್ಲು ಗ್ರಾಮಪಂಚಾಯತ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮತದಾನ ಮಿಂಚಿನ ನೋಂದಣಿ ಅಭಿಯಾನ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

ಸುಸ್ಥಿರ ಅಭಿವೃದ್ಧಿಗಾಗಿ ಮತ ಚಲಾಯಿಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಅವಕಾಶ ಸಂವಿಧಾನ ಕಲ್ಪಿಸಿದ್ದು, ಮತದಾನದಿಂದ ಅಭಿವೃದ್ಧಿಯ ನಿರ್ಧಾರ ನಮ್ಮ ಕೈಯಲ್ಲಿದೆ ಎಂದರು.

ಸಮ-ಸಮಾಜ ನಿರ್ಮಿಸಲು ಸಮಾನತೆ ಬಹುಮುಖ್ಯ. ಮಹಿಳಾ ಸಬಲೀಕರಣಕ್ಕಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ತಪ್ಪದೇ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಮಹಿಳೆಯರಿಗೆ ತೊಂದರೆಯಾದಲ್ಲಿ 112, ಮಕ್ಕಳಿಗೆ ದೌರ್ಜನ್ಯವಾದಲ್ಲಿ 1098, ಆನ್‌ಲೈನ್‌ನಲ್ಲಿ ವಂಚಿತರಾದರೆ ಸೈಬರ್ ಕ್ರೈಂ 1930 ಸಹಾಯವಾಣಿಗೆ ಕರೆಮಾಡಿ ಮಾಹಿತಿ ತಿಳಿಸಿ ರಕ್ಷಣೆಯ ಮಾರ್ಗ ಕಂಡುಕೊಳ್ಳಬಹುದು ಎಂದರು.

ಇದೇ ವೇಳೆ ಮತದಾನ ಮಿಂಚಿನ ನೋಂದಣಿ ಅಭಿಯಾನದ ಜಾಥಾವು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿ ತೆರಳಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್.ಕೆ.ಹೆಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ರಮೇಶ್ ಬಾಬು, ತಹಶೀಲ್ದಾರ ಗುರುರಾಜ ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಾಲಿಕೆಯ ಸದಸ್ಯರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು.

Leave a Reply