ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಜಮೀನು ಮರು ಸ್ವಾಧೀನ

10 months ago

ಬೆಂಗಳೂರು: ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ವಿವಿಧ ವ್ಯಕ್ತಿಗಳು ಕಬಳಿಸಿದ್ದ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಜಮೀನು ಮರು ಸ್ವಾಧೀನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಲಾಖೆ  ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಮೇರೆಗೆ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ, ಕಾಡುಗೋಡಿ ಪ್ಲಾಂಟೇಷನ್ ನ  ಸರ್ವೆ ನಂ.1ರಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ  ಜೆ.ಸಿ.ಬಿ.ಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಬೆಂಗಳೂರು ನಗರ  ಅರಣ್ಯ ಇಲಾಖೆ ಅಧಿಕಾರಿಗಳ  ತಂಡ ಕಾಡುಗೋಡಿಯ ಪ್ಲಾಂಟೇಷನ್ ನ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿ, ಮರು ವಶಕ್ಕೆ ಪಡೆದು, ಗಡಿ ಗುರುತಿಸಿದೆ.

ಆ ನಂತರ ವಶಕ್ಕೆ ಪಡೆದ ಭೂಮಿಯಲ್ಲಿ ಸ್ಥಳೀಯ ಪ್ರಭೇದದ ಸಸಿಗಳನ್ನು ನಟ್ಟು ಇದು ಅರಣ್ಯ ಇಲಾಖೆಯ ಜಮೀನು ಎಂದು ನಾಮಫಲಕ ಹಾಕಿದೆ. ವಶಪಡಿಸಿಕೊಳ್ಳಲಾದ ಅರಣ್ಯ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು  4 ಸಾವಿರ ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಕಾಡುಗೋಡಿ ಅರಣ್ಯ ಪ್ರದೇಶ ಕುರಿತಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು,  ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದ್ದು, ಹಸಿರು ಹೊದಿಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಶ್ವಾಸತಾಣಗಳ ಸಂರಕ್ಷಣೆ ಮಾಡಬೇಕು, ನಿಯಮಾನುಸಾರ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದರು.

248 ಎಕರೆ  ಒತ್ತುವರಿ ತೆರವು: ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 2 ವರ್ಷದಲ್ಲಿ ಬೆಂಗಳೂರಿನಲ್ಲಿ ಒಟ್ಟು 128 ಎಕರೆ ಅರಣ್ಯ ಭೂಮಿ ಒತ್ತವರಿ ತೆರವುಗೊಳಿಸಲಾಗಿದ್ದು,  ಈ 120 ಎಕರೆ ಸೇರಿದರೆ, ಒಟ್ಟು 248 ಎಕರೆ ಆಗಲಿದ್ದು, ಇದರ ಮಾರುಕಟ್ಟೆ ಮೌಲ್ಯ 8 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ.

Leave a Reply