ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿದ ಟೀಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಮಹಿಳೆಯರ ಕುರಿತು ತಾವು ಮಾಡಿದ ಟೀಕೆಗೆ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಇವರ ವಿರುದ್ಧ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ನಿಂತಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಾಲ ಮಾಡುತ್ತಿದ್ದಾರೆ. ಸಾಲದ ಹೊರೆ ನಾಡಿನ ಜನರ ಮೇಲೆ ಹೊರಿಸುತ್ತಿದ್ದಾರೆ. ತಾಯಂದಿರಿಗೆ 2 ಸಾವಿರ ರೂ. ನೀಡಿ ಅವರ ಯಜಮಾನರ ಜೇಬಿನಿಂದ ಪಿಕ್ಪ್ಯಾಕೇಟ್ ಮಾಡಿ ಐದಾರು ಸಾವಿರ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತಾಯಂದಿರು ಎಚ್ಚರಿಕೆಯಿಂದಿರಬೇಕು. ಗ್ಯಾರಂಟಿಗೆ ಮರುಳಾಗಿ ದಾರಿ ತಪ್ಪಬಾರದು ಎಂದು ಹೇಳಿದ್ದೇನೆಯೇ ಹೊರತು, ಅಗೌರವದಿಂದಲ್ಲ. ನಾನು ಬಳಸಿರುವ ಶಬ್ದದಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ತಾವು ಮಹಿಳೆಯರ ಕುರಿತು ಎಲ್ಲಿಯೂ ಅವಮಾನಕರ ಪದಗಳನ್ನು ಬಳಸಿಲ್ಲ. ತಾಯಂದಿರು ಎಂಬ ಗೌರವಸೂಚಕ ಪದವನ್ನು ಬಳಸಿಯೇ ಮಾತನಾಡಿದ್ದೇನೆ. ದಾರಿ ತಪ್ಪಿದ್ದಾರೆ ಎಂಬುದು ಅಶ್ಲೀಲ ಪದವಲ್ಲ. ಮನೆಯಲ್ಲಿ ಮಕ್ಕಳಿಗೆ ದಾರಿ ತಪ್ಪಬೇಡಿ ಎಂದು ಹೇಳುವುದಿಲ್ಲವೆ? ಅದು ಹೇಗೆ ತಪ್ಪಾಗುತ್ತದೆ ಎಂದರು.
ನಾನು ದಾರಿ ತಪ್ಪಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ಹೌದು ದಾರಿ ತಪ್ಪಿರುವುದನ್ನು ವಿಧಾನಸಭೆಯಲ್ಲಿ ನಾನೇ ಹೇಳಿದ್ದೇನೆ. ನಂತರ ತಪ್ಪನ್ನು ತಿದ್ದಿಕೊಂಡು ಮುನ್ನಡೆದಿದ್ದೇನೆ. ನನ್ನ ಪತ್ನಿಯೇ ನನ್ನನ್ನು ತಿದ್ದಿದ್ದಾಳೆ ಎಂದು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದರು.
ಇತ್ತೀಚೆಗೆ ಗೋ ಬ್ಯಾಕ್ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಏನಾದರೂ ವಿಷಯ ಸಿಕ್ಕಿದ ತಕ್ಷಣ ಗೋ ಬ್ಯಾಕ್ ಎಂದು ಪ್ರತಿಭಟನೆ ನಡೆಸುತ್ತಾರೆ. ತಪ್ಪು ಮಾಡದೇ ಇರುವವರು ನಿಮ್ಮ ಗೋ ಬ್ಯಾಕ್ಗೆ ಹೆದರಿಕೊಂಡು ಕೂರುತ್ತಾರಾ ಎಂದರು.
ನಾನು ಕಾಂಗ್ರೆಸ್ನವರಿಗೆ ಸವಾಲಾಗಿ ಪರಿಣಮಿಸಿದ್ದೇನೆ. ಅದಕ್ಕಾಗಿ ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆ. ಬಿಸಿಲಿನಿಂದ ತಾಪಮಾನ ಜಾಸ್ತಿ ಇದೆ. ಈಗ ಪ್ರತಿಭಟನೆ ನಡೆಸುವ ತೊಂದರೆ ತೆಗೆದುಕೊಳ್ಳಬೇಡಿ ಎಂದು ಮಹಿಳಾ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡುತ್ತೇನೆ ಎಂದ ಅವರು, ಮಹಿಳೆಯರ ಬಗ್ಗೆ ಕಾಂಗ್ರೆಸ್ ಯಾವ್ಯಾವ ನಾಯಕರು ಏನೆಲ್ಲಾ ಹೇಳಿದ್ದಾರೆ ಎನ್ನುವುದು ತಮಗೆ ಗೊತ್ತಿಲ್ಲವೆ ಎಂದರು.
ಕಾಂಗ್ರೆಸ್ನವರು ಮಹಿಳೆಯರಿಗೆ ದೇಶದಲ್ಲಿ ಅತ್ಯಂತ ಗೌರವ ನೀಡುವ ಮಹಾನುಭಾವರಲ್ಲವೆ? ಲೀಕ್ ಮಾಡುವುದಕ್ಕಾಗಿ ಹೇಮಮಾಲಿನಿ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಕಂಗನಾ ರಣಾವತ್ಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕರು ಏನು ಪ್ರತಿಕ್ರಿಯಿಸಿದ್ದಾರೆ? ಹೆಣ್ಣು ಮಕ್ಕಳಿಗೆ ದರ ನಿಗದಿ ಮಾಡಿದ್ದಾರೆ? ಈ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ಹೇಳುತ್ತಾರೆ ಹೇಳಪ್ಪಾ ಶಿವಕುಮಾರ್ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ನ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಏನು ಹೇಳಿದ್ದರು? ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ ಎಂದು ಹೇಳಿದ್ದರಲ್ಲವೆ? ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ನಿಮ್ಮಿಂದ ನಾನು ಕಲಿಯಬೇಕೆ? ಮಹಿಳೆಯರು ಅಡುಗೆ ಮನೆಯಲ್ಲಿರಲಿ ಎಂದು ಶ್ಯಾಮನೂರು ಶಿವಶಂಕರಪ್ಪ ಹೇಳಿದ್ದರಲ್ಲವೆ? ಎಂದು ಕೇಳಿದರು.
ಜನರ ಮನಸನ್ನು ಪರಿವರ್ತಿಸಲು ಈ ವಿಷಯ ಬಳಸಿಕೊಳ್ಳಲು ಹೊರಟಿದ್ದೀರಿ. ಆಸ್ತಿಯ ದುರಾಸೆಗೆ 30 ವರ್ಷಗಳಲ್ಲಿ ಎಷ್ಟು ಕುಟುಂಬಗಳಿಗೆ ತೊಂದರೆ ಕೊಟ್ಟಿದ್ದೀರಿ ಎಂಬುದು ಗೊತ್ತಿದೆ. ಧಮ್ಕಿ ಹಾಕಿಕೊಂಡು ರಾಜಕೀಯ ಮಾಡುವವರು ನನಗೆ ಬುದ್ಧಿ ಹೇಳುವ ಮಟ್ಟಕ್ಕೆ ಇದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹೇಳಿಕೆಗಳಿಂದ ಇವರಿಗೆ ಕಣ್ಣೀರು ಬಂದಿದೆಯಂತೆ. ಕೆಲವು ಹೆಣ್ಣು ಮಕ್ಕಳನ್ನು ಅಪಹರಿಸಿ ಜಮೀನು ಬರೆಸಿಕೊಂಡಿದ್ದಾರೆ. ಆಗ ಕಣ್ಣೀರು ಬರಲಿಲ್ಲ. ಶಿವಕುಮಾರ್ಗೆ ಬಹಳ ನೋವಾಗಿದೆ. ಕಣ್ಣೀರು ಹಾಕಬೇಡಪ್ಪಾ. ಕುಮಾರಸ್ವಾಮಿ ಮಾಡಬಾರದ ಅಪರಾಧ ಮಾಡಿದ್ದಾನೆ ಎಂದು ನಿನ್ನ ಮನಸ್ಸಿನಲ್ಲಿದ್ದರೆ ದುಃಖಪಡಬೇಡ. ಜೀವನದಲ್ಲಿ ಎಂದೂ ದುಃಖಪಟ್ಟವನಲ್ಲ ನೀನು. ಏನೇನೂ ನಡೆಸಿದ್ದೀಯ ಎಂಬುದು ಗೊತ್ತಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ಕುಮಾರಸ್ವಾಮಿ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಹೋರಾಟ ತೀವ್ರಗೊಳಿಸಿದೆ. ಜಿಲ್ಲಾಮಟ್ಟದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿ ಜಿಲ್ಲಾಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.



