ಅಕ್ಟೋಬರ್ 21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪ್ರದಾನ

4 years ago

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ʻಚಾವುಂಡರಾಯ ದತ್ತಿʼ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಹಾಗೂ ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ ೨೧ ಶುಕ್ರವಾರ ಸಂಜೆ ೪.೩೦ಕ್ಕೆ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ವಹಿಸಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹಾಗೂ ವಿಶ್ರಾಂತ ಲೋಕಾಯುಕ್ತ ಸಂತೋಷ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ನಿವೃತ್ತ ಪ್ರಾಧ್ಯಾಪಕ ಹಾಗೂ ವಿಶ್ರಾಂತ ಕುಲ ಸಚಿವ ಪ್ರೊ. ಶಾಂತಿನಾಥ ದಿಬ್ಬದ ಅವರು ʻಚಾವುಂಡರಾಯ ದತ್ತಿʼ ಪ್ರಶಸ್ತಿಗೆ, ವಿಜಯವಾಣಿ ದಿನಪತ್ರಿಕೆಯ ಸಂಪಾದಕರಾದ ಕೆ.ಎನ್.ಚನ್ನೇಗೌಡ ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿಯನ್ನು ಮಹಾರಾಷ್ಟ್ರ ರಾಜ್ಯದ ಗಡಿ ಭಾಗವಾದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಪಿಠಾಧ್ಯಕ್ಷ ಶ್ರೀ ನಿರಂಜನ ಪ್ರಣವ ಸ್ವರೂಪಿ ಬಸವಲಿಂಗ ಮಹಾಸ್ವಾಮಿಗಳು, ಕೋಲಾರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಂಕರಪ್ಪ ಮತ್ತು ಕೊಪ್ಪಳದ ರಂಗನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಕೆ. ಇಮಾಮಸಾಬ ಅವರಿಗೆ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾವುಂಡರಾಯ ಪ್ರಶಸ್ತಿ
ಶ್ರವಣಬೆಳಗೊಳ ಶ್ರೀಮಠದ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಂಗರಸರ ಮಹಾಮಂತ್ರಿ ಚಾವುಂಡರಾಯನ ಹೆಸರಿನಲ್ಲಿ ೫ ಲಕ್ಷ ರೂ.ಗಳ ದತ್ತಿಯನ್ನು ಸ್ಥಾಪಿಸಿದ್ದಾರೆ. ವಿಂಧ್ಯಗಿರಿಯಲ್ಲಿ ಜಗತ್ತಿನ ವಿಸ್ಮಯಗಳಲ್ಲಿ ಒಂದಾದ ಬಾಹುಬಲಿಯ ೫೭.೫ ಅಡಿಯ ಏಕಶಿಲಾ ಮೂರ್ತಿಯನ್ನು ನಿರ್ಮಿಸಿರುವ ಚಾವುಂಡರಾಯನ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ದತ್ತಿ ಪ್ರಶಸ್ತಿಯು ರೂ. ೩೦ ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.

ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡದಲ್ಲಿ ಕೃತಿ ರಚನೆ ಮಾಡಿರುವ ಲೇಖಕರನ್ನು, ಪ್ರಾಚೀನ ಜೈನ ಗ್ರಂಥಗಳನ್ನು ಸಂಪಾದನೆ ಮಾಡಿರುವ ಸಂಪಾದಕರನ್ನು, ಅಹಿಂಸೆ, ಸದಾಚಾರ, ನೈತಿಕ ಉತ್ಥಾನಗಳನ್ನು ಪ್ರೇರೇಪಿಸುವ ಸೃಜನಾತ್ಮಕ ಕೃತಿಗಳನ್ನು ರಚಿಸಿರುವ ಸಾಹಿತಿಗಳನ್ನು ಹಾಗೂ ಜೈನ ಸಾಹಿತ್ಯ ಪರಿಚಾರಿಕೆ, ಪ್ರಚಾರ ಹಾಗೂ ಪೋಷಣೆ ಮಾಡಿದ ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ಪ್ರೊ. ಶಾಂತಿನಾಥ ದಿಬ್ಬದ
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಒಟ್ಟು ೩೨ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಬೇರೆಬೇರೆ ಪಠ್ಯಪುಸ್ತಕ ಸಮಿತಿ, ನೇಮಕ ಸಮಿತಿಗಳಂಥ ಕನ್ನಡ ಸಮಿತಿಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ, ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದ ಕಿಟ್ಟಪ್ಪಗೌಡರು ರೈತ ಚಳವಳಿ, ಗೋಕಾಕ್ ಚಳವಳಿ ಮುಂತಾದ ಜನಪರ ಚಳವಳಿಗಳಲ್ಲಿ ಭಾಗವಹಿಸಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನದಿಂದ ೨ ಲಕ್ಷ ರೂಪಾಯಿಗಳ ಇಡುಗಂಟನ್ನು ನಾಗಡಿಕೆರೆ ಕಿಟ್ಟಪ್ಪಗೌಡ ಹಾಗೂ ಅವರ ಪತ್ನಿ ರುಕ್ಮಿಣಿ ಅವರ ಹೆಸರಿನಲ್ಲಿ ಸ್ಥಾಪಿಸಿದ್ದಾರೆ. ಇದರ ಬಡ್ಡಿ ಹಣದಿಂದ ೧೦ ಸಾವಿರ ರೂಪಾಯಿಗಳ ನಗದು ಪ್ರಶಸ್ತಿಯನ್ನು ಯಾವ ಆಮಿಷಗಳಿಗೂ ಒಳಗಾಗದೆ ಪ್ರಾಮಾಣಿಕವಾಗಿ ವಿಮರ್ಶಿಸಿ, ಸರ್ಕಾರದ, ರಾಜಕಾರಣಿಗಳ, ಸರ್ಕಾರಿ ನೌಕರರ, ಸಮಾಜದ ನ್ಯೂನ್ಯತೆಗಳನ್ನು ಎತ್ತಿ ಹಿಡಿದು ತೋರಿಸುವ ನಿರ್ಭೀತ ಹಿರಿಯ ಪತ್ರಕರ್ತರೊಬ್ಬರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂಬುದು ದತ್ತಿ ದಾನಿಗಳ ಆಶಯವಾಗಿರುತ್ತದೆ.

ಕೆ.ಎನ್. ಚನ್ನೇಗೌಡ
`ವಿಜಯವಾಣಿ’ ಕನ್ನಡ ದಿನ ಪತ್ರಿಕೆ ಸಂಪಾದಕ ಕೆ.ಎನ್. ಚನ್ನೇಗೌಡ ಅವರು ೨೦೨೧ನೆಯ ಸಾಲಿನ ನಾಗಡಿಕೆರೆ-ಕಿಟ್ಟಪ್ಪ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ೨೫ ವರ್ಷಗಳಿಂದಲೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅನೇಕ ದಿನಪತ್ರಿಕೆಗಳಲ್ಲಿ ಚಿಂತನಾ ಬರಹಗಳು, ರಾಜಕೀಯ ವಿಶ್ಲೇಷಣೆಯ ಜೊತೆಗೆ ಪ್ರಧಾನ ಲೇಖನಗಳನ್ನು ಸಹ ಬರೆದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಾದ ಹೊಸದಿಗಂತ, ಉಷಾಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ಭಿಡೆಯಿಂದ ನಿರ್ವಹಿಸಿದ್ದಾರೆ. ೨೦೧೨ರಲ್ಲಿ ಆರಂಭವಾದ ವಿಜಯವಾಣಿ ಕನ್ನಡ ದಿನ ಪತ್ರಿಕೆಯಲ್ಲಿ ಆರಂಭಿಕ ದಿನದಿಂದ ಸೇವೆ ಸಲ್ಲಿಸುತ್ತಾ ಇದೀಗ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಯುವ ಬರಹಗಾರರು, ಲೇಖಕರು, ಪತ್ರಕರ್ತರಿಗೆ ಮಾದರಿಯಾಗಿ ಪ್ರೋತ್ಸಾಹ ನೀಡುತ್ತಾ ಅತ್ಯಂತ ಕ್ರಿಯಾಶೀಲರಾಗಿ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ೨೦೨೧ನೆಯ ಸಾಲಿನ ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕನ್ನಡ ಕಾಯಕ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಅವರು ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ `ಕನ್ನಡ ಕಾಯಕ ಪ್ರಶಸ್ತಿ’ ಎಂಬ ಹೆಸರಿನಲ್ಲಿ ದತ್ತಿಯೊಂದನ್ನು ಸ್ಥಾಪಿಸಿದ್ದಾರೆ. ನಾಡು-ನುಡಿ, ನೆಲ-ಜಲ ಕುರಿತ / ಕನ್ನಡಪರ ಹೋರಾಟಗಾರರಿಗೆ ಹಾಗೂ ರಂಗಭೂಮಿ / ಸಂಗೀತ ಕ್ಷೇತ್ರದಲ್ಲಿ ದುಡಿದ ಮೂರು ಮಹನೀಯರಿಗೆ ಪ್ರಶಸ್ತಿ ನೀಡಬೇಕೆಂಬುದು ದತ್ತಿ ದಾನಿಗಳ ಆಶಯ. ತಲಾ ರೂ. ೧೦ ಸಾವಿರ ನಗದು, ಸ್ಮರಣಿಕೆ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕೃತರನ್ನು ಗೌರವಿಸಲಾಗುವುದು.

ಪರಮಪೂಜ್ಯ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು
ಕನ್ನಡಪರ ಹೋರಾಟಗಾರರು ಹಾಗೂ ಕರ್ನಾಟಕ ಗಡಿ ಭಾಗದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಪೀಠಾಧ್ಯಕ್ಷರು ಕನ್ನಡ ಸೇವೆಗಾಗಿ `ಗಡಿನಾಡು ಶರಣ ಸಾಹಿತ್ಯ’ ಸ್ಥಾಪಿಸಿದರು. ಅನೇಕ ಮಹನೀಯರ ಮಾರ್ಗದರ್ಶನದಲ್ಲಿ ನಿರಂತರ ಕನ್ನಡ ಸೇವೆ ಮಾಡುತ್ತಾ ಕನ್ನಡ ನಾಡು-ನುಡಿ, ನೆಲ-ಜಲಕ್ಕಾಗಿ ಕನ್ನಡಪರ ಹೋರಾಟಗಳನ್ನು ಕೈಗೊಂಡಿರುವ ಶ್ರೀಗಳಿಗೆ `ಕನ್ನಡ ಕಾಯಕ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

ಡಾ. ಆರ್. ಶಂಕರಪ್ಪ
ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ., ಪದವಿ ಪಡೆದು ಪ್ರಸ್ತುತ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ೨೯೧ ಲೇಖನಗಳು, ವಿವಿಧ ವೃತ್ತ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ, ೨೫ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಒಟ್ಟು ೨೪ ಪುಸ್ತಕಗಳು, ೧೦ ರಾಜ್ಯ ಮಟ್ಟದ, ೨೫ ರಾಷ್ಟ್ರ ಮಟ್ಟದ, ೨೦ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡಿಸಿ, ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕನ್ನಡ ನಾಡು-ನುಡಿ, ನೆಲ-ಜಲ ಕೃತಿ ರಚಿಸಿದ ಮಹನೀಯರಿಗೆ `ಕನ್ನಡ ಕಾಯಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ

ಕೆ. ಇಮಾಮಸಾಬ
ರಂಗ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಕೆ. ಇಮಾಮ ಸಾಬ, ಕೊಪ್ಪಳ ಇವರು ೧೧-೫-೧೯೭೮ ರಿಂದ ೧೯೮೩ ರವರೆಗೆ ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಪ್ರಮೀಳಾದೇವಿ, ಗಿರಿಜಾ ಕಲ್ಯಾಣ, ದಕ್ಷಬ್ರಹ್ಮ, ಶ್ರೀ ರಾಮಾಂಜನೇಯ ಯುದ್ಧ ಮುಂತಾದ ೨೨೫ಕ್ಕೂ ಹೆಚ್ಚು ದೊಡ್ಡಾಟಗಳಲ್ಲಿ ಸಂಗೀತ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ `ಕನ್ನಡ ಕಾಯಕ ಪ್ರಶಸ್ತಿ’ನೀಡಿ ಗೌರವಿಸಲಾಗುತ್ತಿದೆ.

Leave a Reply