ಬೆಂಗಳೂರು: ಕರ್ನಾಟಕ ಸರ್ಕಾರದ ದಕ್ಷ ಆದಾಯ ಕ್ರೂಢೀಕರಣದ ಹೊರತಾಗಿಯೂ ದಿನನಿತ್ಯ ಎದುರಾಗುತ್ತಿರುವ ಸವಾಲುಗಳನ್ನು ನಿಭಾಯಿಸಲು ಸಂಪನ್ಮೂಲದ ಕೊರತೆ ಕಂಡುಬರುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದ್ದ 16ನೇ ಹಣಕಾಸು ಆಯೋಗದ ಮುಂದಿರುವ ಆರ್ಥಿಕ ಒಕ್ಕೂಟದ ಸವಾಲುಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದ ಅವರು, ಹದಿನಾರನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಸಮರ್ಪಕ ಆದಾಯ ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ಹಿಂದೆ 14ನೇ ಹಣಕಾಸು ಆಯೋಗದಲ್ಲಿ 4.713, ಹದಿನೈದನೇ ಹಣಕಾಸು ಆಯೋಗದಲ್ಲಿ 3.647 ತೆರಿಗೆ ಪಾಲು ಕಡಿತಗೊಂಡಿತ್ತು. 1.066 ಕಡಿತದ ಪರಿಣಾಮ ರಾಜ್ಯ ಸರ್ಕಾರ ಆದಾಯದ ಅಂತರ ತೀವ್ರಗೊಂಡಿತ್ತು. ತಲಾ ಆದಾಯ ಹೆಚ್ಚಿರುವ ರಾಜ್ಯಗಳ ಪೈಕಿ ಕಡಿಮೆ ಅಂತರದ ಹಂಚಿಕೆ ಕರ್ನಾಟಕಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ ಎಂದರು.
16ನೇ ಹಣಕಾಸು ಆಯೋಗ ಆರ್ಥಿಕ ಹೊಂದಾಣಿಕೆಯ ವೇಳೆ ತಲಾ ಆದಾಯ ಮತ್ತು ಸಂಪನ್ಮೂಲ ದಕ್ಷತೆಯನ್ನು ಗಮನಿಸಬೇಕಿದೆ. ದೇಶದಲ್ಲೇ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಮರು ಪಾವತಿಯ ಪ್ರಮಾಣ ತೀರ ದುರ್ಬಲವಾಗಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಕರ್ನಾಟಕದಲ್ಲಿ ನಗರೀಕರಣದ ಪ್ರಮಾಣ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇತರೆ ಸೌಲಭ್ಯಗಳು ಕೂಡ ಹಣಕಾಸಿನ ನೆರವನ್ನು ಹೆಚ್ಚು ಬಯಸುತ್ತಿದೆ. ಸ್ವಂತ ಸಂಪನ್ಮೂಲ ದಕ್ಷತೆಯ ಹೊರತಾಗಿಯೂ ಸವಾಲುಗಳನ್ನು ನಿಭಾಯಿಸಲು ಲಭ್ಯವಿರುವ ಆರ್ಥಿಕ ಮಿತಿ ಸಾಲುತ್ತಿಲ್ಲ. ಮುಂದಿನ 2032ರ ವೇಳೆಗೆ ಕರ್ನಾಟಕ ಒಂದು ಶತಕೋಟಿ ಡಾಲರ್ ನಿವ್ವಳ್ಳ ಆಂತರಿಕ ಉತ್ಪನ್ನ ಪ್ರಮಾಣ (ಜಿಎಸ್ಡಿಪಿ) ಗುರಿಯತ್ತ ಹೆಜ್ಜೆ ಹಾಕಿದೆ ಎಂದರು.
ಮಾನವ ಸಂಪನ್ಮೂಲ ಸೂಚ್ಯಂಕದಲ್ಲೂ ಸಾಕಷ್ಟು ಏರಿಳಿತಗಳಿವೆ. ಬೆಂಗಳೂರು ನಗರ 0.738 ಪ್ರಮಾಣದಲ್ಲಿದೆ. ಯಾದಗಿರಿ 0.538, ಕಲಬುರಗಿ 0.539, ರಾಯಚೂರು 0.562 ಸ್ಥಾನದಲ್ಲಿದೆ. ತಲಾ ಆದಾಯದಲ್ಲಿ ಬೆಂಗಳೂರು 6,21,131 ರೂ.ಗಳನ್ನು ಹೊಂದಿದ್ದರೆ ಕಲಬುರಗಿ 1,24,998 ರೂ. ಪ್ರಮಾಣದಲ್ಲಿದೆ. ಈ ಅಂಶಗಳನ್ನು ಆಧರಿಸಿ ಹಣಕಾಸು ಆಯೋಗದಲ್ಲಿ ಸಂಪನ್ಮೂಲ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದರು.
16ನೇ ಹಣಕಾಸು ಆಯೋಗ ರಚನೆಯ ಸಂದರ್ಭದಲ್ಲಿ ಈ ವಿಚಾರ ಸಂಕಿರಣ ನಡೆಯುತ್ತಿರುವುದು ಶ್ಲಾಘನೀಯ. ರಾಜ್ಯ ಸರ್ಕಾರ ಹಣಕಾಸು ಆಯೋಗದ ಮುಂದೆ ತನ್ನ ಪ್ರಾತಿನಿಧ್ಯವನ್ನು ಪ್ರತಿಪಾದಿಸಲು ಅಗತ್ಯವಾದ ಸಲಹೆ ಮತ್ತು ಶಿಫಾರಸ್ಸುಗಳನ್ನು ತಜ್ಞರಿಂದ ನಿರೀಕ್ಷಿಸಲಾಗುತ್ತಿದೆ ಎಂದರು.



