20 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಬಂದ್

1 year ago

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಕಾಮಗಾರಿ ಆರಂಭಕ್ಕೆ ಅನುಮತಿ ಮತ್ತು ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ಆಗ್ರಹ ಮತ್ತು ಎಂಇಎಸ್ ನಿಷೇಧ ಸೇರಿದಂತೆ 20 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 22ರಂದು ವಿವಿಧ ಕನ್ನಡಪರ ದಲಿತ ಹಾಗೂ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6:00 ವರೆಗೆ ಬಂದ್ ಆಚರಿಸಲು ಕರೆ ನೀಡಲಾಗಿದೆ. ಈ ವೇಳೆ ಆರೋಗ್ಯ ತುರ್ತುಸೇವೆ, ಆಂಬುಲೆನ್ಸ್, ಹಾಲು, ತರಕಾರಿ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳಿಗೆ ಬಂದ್ ಇರಲಿದೆ ಎಂದು ಪ್ರಕಟಿಸಲಾಗಿದೆ.

ಬಂದ್ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು, ಸರ್ಕಾರ ಪೊಲೀಸ್ ಮೂಲಕ ಬಂದ್ ಮಾಡದಂತೆ ತಡೆಯುತ್ತಿದೆ. ಇದಕ್ಕೆ ಸೊಪ್ಪು ಹಾಕದೆ ರಾಜ್ಯದ ಜನತೆ ಬಂದ್ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ ಎಂದರು.

ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳು ಸೇರಿದಂತೆ ಹಲವು ಕರ್ನಾಟಕದ ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಇವುಗಳಿಗೆ ನೆರವು ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ ಎಂದರು.

ರಾಜ್ಯ ಸರ್ಕಾರ ಗಡಿ ಜಿಲ್ಲೆಗಳನ್ನು ಕಡೆಗಣಿಸಿದೆ. ಇಲ್ಲಿನ ಕನ್ನಡ ಶಾಲೆಗಳಲ್ಲಿ ಶಿಕ್ಷಕರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗುತ್ತಿದ್ದಾರೆ. ಮಹಾರಾಷ್ಟ್ರದ  ಗಡಿ ಜಿಲ್ಲೆಗಳಲ್ಲಿ ಎಂಇಎಸ್ ಪುಂಡಾಟಿಕೆ ನಡೆಸುತ್ತಿದ್ದು, ಇದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಬಂದ್ ಗೆ ನೈತಿಕ ಬೆಂಬಲ ವ್ಯಕ್ತಪಡಿಸಿರುವ ಹೋಟೆಲ್ ಗಳ ಮಾಲೀಕರ ಸಂಘ ನಾಳೆ ಬೆಳಗ್ಗೆಯಿಂದ ಎಂದಿನಂತೆ ಕಾರ್ಯನಿರ್ವಹಿಸಲು ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಅನೇಕ ಮಂದಿ ಊಟ ಉಪಚಾರಕ್ಕೆ ಹೋಟೆಲ್ ಗಳ ಮೇಲೆ ಅವಲಂಬಿತರಾಗಿದ್ದಾರೆ. ನಾವು ಬಂದ್ ಮಾಡಿದರೆ ಇವರಿಗೆಲ್ಲಾ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಂದಿನಂತೆ ಹೋಟೆಲ್ ಗಳು ತೆರೆದಿರುತ್ತವೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.

ಕನ್ನಡ ಚಿತ್ರರಂಗ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ. ಆದರೆ ಚಿತ್ರೀಕರಣ ಚಟುವಟಿಕೆಗಳು ಎಂದಿನಂತೆ ಇರಲಿವೆ. ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಮಾತ್ರ ರದ್ದು ಪಡಿಸಲಾಗುವುದು ಎಂದು ಪ್ರಕಟಿಸಿದೆ. ಇನ್ನು ಬೆಂಗಳೂರಿನ ಆಟೋ ಚಾಲಕರು ಕೆಎಸ್ಆರ್ಟಿಸಿ ವಾಹನ ಚಾಲಕರ ಸಂಘ ಖಾಸಗಿ ಬಸ್ಸುಗಳ ಸಂಘ ಬಂದ್ ಕರೆಗೆ ಬೆಂಬಲಿಸಿವೆ.

Leave a Reply