ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ನಾವು ಯಾರೂ ದುರ್ಬಳಕೆ ಮಾಡಿಕೊಂಡಿಲ್ಲ. ಹಾಗೇನಾದರೂ ಮಾಡಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸವಾಲೆಸೆದಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಯಾರೂ ಕೂಡ ಮುಖ್ಯಮಂತ್ರಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಾಜಣ್ಣ, ನಾನು ಯಾರಿದಂಲೂ ಶಿಸ್ತಿನ ಪಾಠ ಕಲಿಯಬೇಕಿಲ್ಲ. 50 ವರ್ಷ ರಾಜಕಾರಣ ಮಾಡಿದವನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಂಡಿಲ್ಲ. ನಾನು ಅವರ ಹೆಸರು ದುರ್ಬಳಕೆ ಮಾಡಿಕೊಂಡು ಸದಾಶಿವ ನಗರ, ಡಾಲರ್ಸ್ ಕಾಲೋನಿಯಲ್ಲಿ ಎರಡೆರಡುಮನೆ ಕಟ್ಟಿದೀನಾ? ಅವರ ಹೆಸರು ದರ್ಬಳಕೆ ಮಾಡಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದರು.
ಪಕ್ಷದಲ್ಲಿ ನಾನು ಹಲವು ವರ್ಷ ದುಡಿದಿದ್ದೇನೆ. ಯಾರಿಂದಲೂ ಶಿಸ್ತಿನ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪಪರಿಣಾಮ ಬೀರುವ ರೀತಿ ಮಾತನಾಡಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಡಿಕೆ ಶಿವಕುಮಾರ್ ಹೇಳಿಕೆ ಅಷ್ಟೆ. ಎಚ್ಚರಿಕೆ ಅಲ್ಲ ಇಲ್ಲಿ ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ. ಎಚ್ಚರಿಕೆ ಎಲ್ಲಾ ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರೇ ಹೈಕಮಾಂಡ್ ಮತ್ತು ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಯಾರೂ ಅಂತಹ ಕೆಲಸ ಮಾಡುತ್ತಿಲ್ಲ ಎಂದರು.
ನನಗೂ ಡಿ.ಕೆ. ಶಿವಕುಮಾರ್ಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರಭೇದ ಇರಬಹುದು ಅಷ್ಟೆ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣವೆಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೇವೆ. ವಿಚಾರಭೇದ ಅಷ್ಟೆ. ವೈಯುಕ್ತಿಕ ಏನೂ ಇಲ್ಲ. ಅವರನ್ನು ಒಂದು ದಿನ ಊಟಕ್ಕೆ ಮನೆಗೆ ಕರೆಯುತ್ತೇನೆ ಎಂದರು.
ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ನೀಡಿರುವ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ನಮಗೆ ಎಚ್ಚರಿಕೆ ನೀಡಲು ಜಿ.ಸಿ. ಚಂದ್ರಶೇಖರ್ ಯಾರು? ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ ಅವರಿಗೇನು ಎರಡು ಕೊಂಬು ಇದೆಯೇ? ಶಿಶುಪಾಲ ಕೃಷ್ಣ ಪುರಾಣ ಇದೆಲ್ಲಾ ನಾನು ನಂಬಲ್ಲ. ಪುರಾಣ ಎಲ್ಲ ಕಟ್ಟು ಕಥೆ. ಅವರೇ ಶಿಶುಪಾಲ ಎಂದರು.
ರಾಜ್ಯಸಭೆ, ವಿಧಾನಪರಿಷತ್ ಗೆ ಕಳುಹಿಸುವಂತವರು ಪಕ್ಷಕ್ಕೆ ಮತ ತಂದು ಕೊಡುವಂತಿರಬೇಕು. ಇಂಥವರು ಪಕ್ಷಕ್ಕೆ ಹೊರೆ. ಅವರ ಹಿನ್ನಲೆ ಏನು? ಪಾಲಿಕೆ ಚುನಾವಣೆಯಲ್ಲಿ ಅವರಿಗೆ ಎಷ್ಟು ಮತ ಬಂದಿದೆ? ಪಾಲಿಕೆ ಚುನಾವಣೆಯಲ್ಲಿ 258 ಮತ ಪಡೆದಿದ್ದರು. ಅವರೆಲ್ಲ ನಮಗೆ ಹೇಳುವುದು ಬೇಡ ಎಂದು ತಿರುಗೇಟು ನೀಡಿದರು.
ಸಚಿವ ಸಂಪುಟ ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಹೇಳಿದಾಗ ಪುನರ್ ರಚನೆ ಆಗುತ್ತದೆ. ಸಚಿವರ ರಿಪೋರ್ಟ್ ಕಾರ್ಡ್ ಮೌಲ್ಯಮಾಪನ ಮಾಡಲಿ ಎಂದರು.
ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು. ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದರು.
ಪೂರ್ಣಾವಧಿ, ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈಕಮಾಂಡ್ ತೀರ್ಮಾನ. ಸಿಎಲ್ಪಿ ಸಭೆಯಲ್ಲೇ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು. ಅವರು ಒಪ್ಪಿದ ಮೇಲೆ ಆಯಿತಲ್ಲವೇ ಎಂದರು.
ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕಿತ್ತೊ ಅದನ್ನು ಹೇಳಿದ್ದೇನೆ. ಎಲ್ಲವನ್ನೂ ಬಹಿರಂಗ ಮಾಡಲು ಆಗಲ್ಲ. ಸಮಾವೇಶ ಯಾರ ವಿರುದ್ಧ ನಾವು ಮಾಡುತ್ತಿಲ್ಲ. ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಸಮಯ ಸಂದರ್ಭ ಬಂದಾಗ ಸಮಾವೇಶ ಮಾಡುತ್ತೇವೆ. ಸಮಾವೇಶ ದಿನಾಂಕ ಇನ್ನೂ ನಿರ್ಧಾರ ಆಗಿಲ್ಲ. ರಾಹುಲ್ ಗಾಂಧಿ ಹಾಗೂ ಖರ್ಗೆಯವರನ್ನು ಕರೆದು ಸಮಾವೇಶ ಮಾಡುತ್ತೇವೆ. ಶೋಷಿತ ವರ್ಗಗಳ ಸಂಘಟನೆಗಾಗಿ ಸಮಾವೇಶ ಮಾಡುತ್ತೇವೆ. ಇದು ಯಾರ ವಿರುದ್ಧ ಕೂಡ ಅಲ್ಲ ಎಂದರು.
ಇನ್ನು ಸಚಿವ ರಾಜಣ್ಣ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಡಿಸಿಎಂ ಡಿ ಕೆ ಶಿವಕುಮಾರ್ ನೀರಾಕರಿಸಿದ್ದಾರೆ. ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದ ನಂತರ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದ ಬಳಿಕ ಸಹಕಾರ ಸಚಿವರ ಹೇಳಿಕೆಗೆ ಉತ್ತರ ನೀಡುತ್ತೇನೆ ಎಂದರು.




