ನೆನ್ನೆ 26-08-25 ರಂದು ಶಾಸಕರ ಭವನದಲ್ಲಿ ಹೊರಾಟಗಾರ ಎ.ಎಸ್ ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ನಾಡಿನ ಪ.ಜಾತಿ, ಪ.ಪಂಗಡ ಹಾಗೂ ಅಲೆಮಾರಿ ಸಮುದಾಯಗಳ ಮುಖಂಡರು ಹಲವಾರು ಪ್ರಗತಿ ಪರ ಚಿಂತಕರು, ಸಾಹಿತಿಗಳ ಸಮಾಲೋಚನಾ ಸಭೆ ನಡೆಯಿತು. ಜನಪರ ಚಳುವಳಿಗಳ ಸಂಗಾತಿ ಹುಲಿಕುಂಟೆ ಮೂರ್ತಿ ಅವರ ತಮಟೆ ಮೀಡಿಯಾ ಆಯೋಜಿಸಿದ್ದ ಈ ಸಭೆ ಅಲೆಮಾರಿ ಸಮುದಾಯಗಳ ಪರವಾದ ಒಳಮೀಸಲಾತಿ ಜಾರಿಯ ಪರವಾಗಿ ಕೆಲವು ಮಹತ್ತರ ನಿರ್ಣಯಗಳನ್ನು ಕೈಗೊಂಡಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮೂವತ್ತೈದು ವರುಷಗಳ ಒಳ ಮೀಸಲಾತಿಯ ಸತತ ಹೋರಾಟಕ್ಕೆ ಇತ್ತೀಚೆಗೆ ಜಸ್ಟೀಸ್ ನಾಗಮೋನದಾಸ್ ಸಮಿತಿಯ ವರದಿ ಜಾರಿ ಆಗಿದೆ. ಎ.ಬಿ.ಸಿ ಎಂಬ ಶ್ರೇಣಿಗಳ ಅಡಿಯಲ್ಲಿ 6:6: 5 ರ ಅನುಪಾತದಲ್ಲಿ ಪ.ಜಾತಿ., ಪ.ಪಂಗಡದ ಜಾತಿಗಳ ಹೋರಾಟಕ್ಕೆ ನ್ಯಾಯ ದೊರೆತಿದೆ ಎಂಬ ಘಳಿಗೆಯಲ್ಲೆ ಊರಲ್ಲಿ ತಲೆಗೊಂದು ಸೂರಿಲ್ಲದೆ, ಗೆಯ್ದು ಉಣ್ಣಲು ಅಂಗೈ ಅಗಲ ಭೂಮಿಯ ಒಡೆತನವಿಲ್ಲದೆ, ಕಾಡಿನಲ್ಲಿದ್ದರೆ ಕಾಡಿನ ನಾಶಕ್ಕೆ ಇವರು ಕಾರಣ ಅಂತ ಆಧುನಿಕತೆಯ ಹೆಸರಲ್ಲಿ ಒಕ್ಕಲೆಬ್ಬಿಸಿಕೊಂಡು, ನಡೆಯುವ ಎಲ್ಲ ಕಳ್ಳತನಗಳಿಗೂ ವಾರಸುದಾರಿಕೆಯ ಪಟ್ಟ ಕಟ್ಟಿಸಿಕೊಂಡು, ಶಿಕ್ಷೆ ಅನುಭವಿಸಿಕೊಂಡು, ಊರೂರು ಭಿಕ್ಷೆ ಬೇಡಿಕೊಂಡು, ಹಗಲು ವೇಷಗಾರರು, ಹಂದಿಜೋಗಿಗಳು, ದಕ್ಕಲರು, ಮ್ಯಾಸಬೇಡರು, ಬುಡುಬುಡಿಕೆ, ದೊಂಬಿದಾಸ, ಗೊರವ, ಶಿಳ್ಳೆಖ್ಯಾತ, ಹಕ್ಕಿಪಿಕ್ಕಿ, ಇರುಳಿಗ ಹೀಗೆ ನೂರಾರು ಅಲೆಮಾರಿ ಸಮುದಾಯಗಳು ಶೈಕ್ಷಣಿಕ, ಔದ್ಯೋಗಿಕ ಅವಕಾಶಗಳಿಂದ ವಂಚಿರಾಗಿದ್ದಾರೆ.
ಇಂತಹ ಶಿಕ್ಷಣ, ಸಂಘಟನೆ, ಹೋರಾಟಗಳಿಂದ ದೂರವೇ ಉಳಿದ ಅಲೆಮಾರಿಗಳನ್ನು ಈಗಾಗಲೆ ಇವರಿಗಿಂತ ಜನಸಂಖ್ಯೆ ಹಾಗೂ ಸಾಮಾಜಿಕ, ಆರ್ಥಿಕವಾಗಿ ಮುಂದುವರಿದಿರುವ ಬೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳಿರವ ಗ್ರೂಪ್ ‘ಸಿ’ ಗುಂಪಿಗೆ ಅಲೆಮಾರಿಗಳನ್ನು ಸೇರಿಸಿರುವುದು ಅವೈಜ್ಞಾನಿಕವಾಗಿದೆ .
ಪಿ.ಯು.ಸಿ ವರೆಗೂ ಶಿಕ್ಷಣ ಮುಗಿಸಿರುವವರ ಪ್ರಮಾಣವೇ ಇವರಲ್ಲಿ ಶೇ 6.64 % ರಷ್ಟಿರುವಾಗ ಇವರು ಈ ಗುಂಪಿನ ಇತರೆ ಉಲ್ಲೇಖಿತ ಜಾತಿಗಳೊಂದಿಗೆ ಸ್ಪರ್ದಿಸಿ ಶಿಕ್ಷಣ, ಉದ್ಯೋಗ ಪಡೆಯಲು ಸಾಧ್ಯವೆ ?
ಪಕ್ಕದ ಆಂದ್ರ, ತೆಲಂಗಾಣ, ತಮಿಳುನಾಡುಗಳಲ್ಲಿ ಎರಡೂವರೆ ಮೂರು ಲಕ್ಷ ಇರುವ ಅಲೆಮಾರಿಗಳಿಗೆ ರೋಸ್ಟರ್ ಬಿಂದುವನ್ನು ಹೊಂದಿಸಿ ಒಳಮೀಸಲಾತಿ ಜಾರಿ ಆಗಿರುವಾಗ ನಮ್ಮಲ್ಲಿ ಐದು ಲಕ್ಷದ ಇಪ್ಪತ್ತು ಸಾವಿರ ಅಲೆಮಾರಿಗಳಿಗೆ ರೋಸ್ಟರ್ ಬಿಂದುವನ್ನು ಹೊಂದಿಸಿ ಅವರ ಜನಸಂಖ್ಯೆಗೆ ಅನುಗುಣವಾಗಿ ಕೇವಲ ಶೇ 1% ಒಳಮೀಸಲಾತಿ ಜಾರಿ ಗೊಳಿಸಲು ಸಾಧ್ಯವಾಗಲಿಲ್ಲವೆ ?
ಅಲೆಮಾರಿಗಳು ಇನ್ನು ಎಷ್ಟು ಕಾಲ ಭಿಕ್ಷೆ ಬೇಡುತ್ತಾ ಬದುಕಬೇಕು? ಅವರ ಮಕ್ಕಳ ಭವಿಷ್ಯದ ಕಥೆಯೇನು ? ಸಾಮಾಜಿಕ ನ್ಯಾಯದ ಮುಂಚೂಣಿಯಲ್ಲಿದ್ದು ಅಹಿಂದ ಪರ ಧ್ವನಿ ಮೊಳಗಿಸುವ ಮಾನ್ಯ ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟ ಈ ಅಲೆಮಾರಿಗಳ ಬದುಕಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ವರದಿಯನ್ನು ಮರುಪರಿಶೀಲಿಸಬೇಕು.
ಜಸ್ಟೀಸ್ ನಾಗಮೋಹನ ದಾಸರು ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಶಿಫಾರಸ್ಸು ಮಾಡಿರುವ ಶೇ ೧% ರಷ್ಟು ಮೀಸಲಾತಿಯನ್ನು ಜಾರಿ ಮಾಡುವುದರ ಮೂಲಕ ಅವರ ದೀರ್ಘಕಾಲದ ಪರಿಶ್ರಮ ಹಾಗೂ ಅವರು ಬಯಸುವ ಸಾಮಾಜಿಕ ನ್ಯಾಯದ ಹಂಬಲ ಮತ್ತು ನಂಬಿಕೆಗೂ ಗೌರವ ಪ್ರಾಪ್ತವಾಗುವಂತೆ ಮಾಡಬೇಕು. ಆಗ ಅಲೆಮಾರಿ ಸಮೂದಾಯಗಳಿಗೂ ನ್ಯಾಯ ದೊರಕಿದಂತಾಗುತ್ತದೆ. ನಾವೆಲ್ಲರೂ ಈ ನಿರ್ಗತಿಕ ಅಲೆಮಾರಿಗಳ ಹೋರಾಟಕ್ಕೆ ಬೆಂಬಲ ಸೂಚಿಸಬೇಕು.
– ಪ್ರೊ.ಟಿ.ಯಲ್ಲಪ್ಪ, ಪ್ರಾಧ್ಯಾಪಕರು




