ರಾಜ್ಯದಲ್ಲಿನ್ನು ಗೋಬಿ ಮಂಚೂರಿ ನಿಷೇಧ

2 years ago

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಗೋಬಿ ಮಂಚೂರಿ ಸೇರಿದಂತೆ ಯಾವುದೇ ರೀತಿಯ ಮಂಚೂರಿಗಳು ತಿನ್ನಲು ಸಿಗುವುದಿಲ್ಲ.ಅಷ್ಟೇ ಅಲ್ಲ ಮಂಚೂರಿ ಮಸಾಲೆ ಬಳಸಿ ಮಾಡುವ ಕಬಾಬ್ ಕೂಡ ಸಿಗುವುದಿಲ್ಲ.

ನೆರೆಯ ತಮಿಳುನಾಡು, ಪುದುಚೆರಿಯಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಇವುಗಳ ಮಾರಾಟ ನಿಷೇಧಿಸಿದ ನಂತರ ರಾಜ್ಯದಲ್ಲಿ ಆರೋಗ್ಯ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಕಾಟನ್ ಕ್ಯಾಂಡಿ, ಮಂಚೂರಿ ಮಸಾಲ ಬಳಸಿ ತಯಾರಿಸಿದ ಕಬಾಬ್, ಗೋಬಿ ಮಂಚೂರಿಯನ್ನು ಗುಣಮಟ್ಟ ಪರೀಕ್ಷೆಗೆ ರವಾನಿಸಲಾಗಿತ್ತು.

ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ ನೂರಕ್ಕೂ ಅಧಿಕ ಬಗೆಯ ಗೋಬಿ ಮಂಚೂರಿಗಳಲ್ಲಿ ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಸನ್ಸೆಟ್ ಎಲ್ಲೋ ಮತ್ತು ಥರ್ಟಜೈನ್ ಪತ್ತೆಯಾಗಿದೆ. ಇದು ಮನುಷ್ಯರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ನಿರ್ಧರಿಸಿದೆ.

ಇತ್ತೀಚೆಗೆ ರಾಜ್ಯದಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ)ಯನ್ನೂ ನಿಷೇಧಿಸಲಾಗಿತ್ತು.ಇದರ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತೆ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಸರಕಾರ ಮುಂದಾಗಿದೆ.

ಆರೋಗ್ಯ ಇಲಾಖೆ ಎಲ್ಲ ಜಿಲ್ಲೆಗಳಿಂದ ಮಾದರಿ ಸಂಗ್ರಹಿಸಿ ಟೆಸ್ಟ್ಗೆ ಕಳುಹಿಸಲು ಸೂಚನೆ ನೀಡಿತ್ತು. ಅದರಂತೆ ರಾಜ್ಯದ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿಗಳು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾಗಿ ತಿಳಿದುಬಂದಿದೆ.

ನೂರಕ್ಕೂ ಹೆಚ್ಚಿನ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ, ರಾಸಾಯನಿಕ ಅಂಶಗಳನ್ನು ಗೋಬಿ ಮಂಚೂರಿಗಳಲ್ಲಿ ಬಳಸದಂತೆ ಸೂಚಿಸುವ ಸಾಧ್ಯತೆ ಇದೆ. ಕೃತಕ ಬಣ್ಣ ಬೆರೆಸುವುದಕ್ಕೂ ಅವಕಾಶವಿರುವುದಿಲ್ಲ.

ಗೋಬಿ ಮಂಚೂರಿ ಮಾದರಿಯಲ್ಲಿಯೇ ಚಿಕನ್ ಕಬಾಬ್ ಸಿದ್ಧಪಡಿಸಲಾಗುತ್ತಿದ್ದು, ಕಬಾಬ್ನ ರುಚಿ ಹೆಚ್ಚಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೂಡಲೇ ಈ ಮಾದರಿಯ ಕಬಾಬ್ ಅನ್ನು ನಿಷೇಧಿಸಬೇಕೆಂದು ಆಹಾರ ತಜ್ಞರು ಮತ್ತು ವೈದ್ಯರು ಒತ್ತಾಯಿಸಿದ್ದಾರೆ.

ಕಬಾಬ್ ಹಸಿರು ಹಾಗೂ ಕೆಂಪು ಬಣ್ಣದಲ್ಲಿ ದೊರಕುತ್ತದೆ. ಕಬಾಬ್ಗೆ ಕೆಮಿಕಲ್ ಬಳಸಿ ಬಣ್ಣ ಬದಲಾಯಿಸಲಾಗುತ್ತದೆ. ಹೀಗಾಗಿ ಕಬಾಬ್ ನಿಷೇಧಿಸ ಬೇಕು ಎನ್ನಲಾಗುತ್ತಿದೆ.

Leave a Reply