ಹೊರರಾಜ್ಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

1 year ago

ಬೆಂಗಳೂರು: ಚಲಿಸುತ್ತಿದ್ದ ಬೈಕ್ ಅಡ್ಡಗಟ್ಟಿ ಸವಾರನ ಮೇಲೆ ಹಲ್ಲೆ ನಡೆಸಿ ಆತನ ತಂಗಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನುಷ ಕೃತ್ಯ ಮಹದೇವಪುರದಲ್ಲಿ ನಡೆದಿದ್ದು, ರಾಜಧಾನಿಯ ಜನತೆ ಬೆಚ್ಚಿಬೀಳುವಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆ ಗ್ಯಾಂಗ್ ರೇಪ್ ನಡೆದಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ.

ಕೆ ಆರ್ ಪುರಂ ರೈಲ್ವೇ ನಿಲ್ದಾಣದಿಂದ ನಿನ್ನೆ ಮಧ್ಯರಾತ್ರಿ ಅಣ್ಣನೊಂದಿಗೆ ಮಹದೇವಪುರದ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ಬಿಹಾರ ಮೂಲದ ಯುವತಿಯನ್ನು ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಅಪಹರಿಸಲು ಮುಂದಾಗಿದ್ದಾರೆ. ಪ್ರತಿರೋಧ ತೋರಿದ ಅಣ್ಣನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಎಳೆದೊಯ್ದು ಮೃಗೀಯ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಯುವತಿಯು ರಕ್ಷಣೆಗಾಗಿ ಬೊಬ್ಬೆ ಹಾಕಿದಾಗ ಸ್ಥಳೀಯರು ಧಾವಿಸಿ ಒಬ್ಬನನ್ನು ಧರ್ಮದೇಟು ಕೊಟ್ಟು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರು ಹಿಡಿದು ಕೊಟ್ಟ ಆರೋಪಿ ಕೃತ್ಯ ನಡೆಸಿದ ಮತ್ತೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅವರಲ್ಲಿ ಒಬ್ಬನನ್ನು ಆಸಿಫ್ ಎಂದು ಗುರುತಿಸಲಾಗಿದೆ.

ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ ಆರ್ ಪುರಂ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಳು. ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ, ಬೆಂಗಳೂರಿಗೆ ಬರುವ ಬಗ್ಗೆ ತಿಳಿಸಿದ್ದಳು. ಅಣ್ಣನ ಸೂಚನೆ ಮೇರೆಗೆ ಕೆ ಆರ್ ಪುರಂ ನಲ್ಲಿ ಇಳಿದಿದ್ದ ಯುವತಿ, ಬಳಿಕ ಅಣ್ಣನ ಜೊತೆ ಊಟಕ್ಕಾಗಿ ಮಹದೇವಪುರ ಕಡೆಗೆ ತೆರಳುತ್ತಿದ್ದಳು.

ಈ ವೇಳೆ ಇಬ್ಬರು ಅಪರಿಚಿತರು ಬೈಕ್ ಅಡ್ಡಗಟ್ಟಿ ಅಣ್ಣನ ಮೇಲೆ ಹಲ್ಲೆ ಮಾಡಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ. 

ಹಲ್ಲೆಯಿಂದ ಗಾಯಗೊಂಡಿರುವ ಅಣ್ಣನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಂದಲೂ ಘಟನೆಯ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply