ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರತಿಷ್ಠಾನ ರಚನೆ

4 days ago

ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರತಿಷ್ಠಾನ ರಚನೆ

ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ

ಬೆಂಗಳೂರು: ಪಂಪ ಮಹಾಕವಿಯು ಕನ್ನಡ ಸಾಹಿತ್ಯದಲ್ಲಿ ಆದಿಕವಿ ಎಂದು ಪ್ರಸಿದ್ಧನಾಗಿರುವುದಷ್ಟೇ ಅಲ್ಲದೆ, ಮೊಟ್ಟ ಮೊದಲ ಬಾರಿಗೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕನ್ನಡದ ಕವಿ ಎಂಬುದು ದಾಖಲೆಯ ವಿಷಯವಾಗಿದೆ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪವಾಣಿ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದೆ. ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ಕರ್ಣನ ಪಾತ್ರವನ್ನು ಕುಲಪದ್ಧತಿಯ ಪ್ರತಿರೋಧದ ರೂಪಕವಾಗಿ ಬಳಸಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊದಲ ಮನ್ನಣೆ ಪಂಪ ಮಹಾಕವಿಗೆ ಸಲ್ಲುತ್ತದೆ.

ಇಂದಿಗೂ ಪ್ರಸ್ತುತವಾಗಿರುವ ಪಂಪ ಮಹಾಕವಿಯ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನವನ್ನು ಸ್ಥಾಪಿಸಿ, ಜಾತ್ಯತೀತ, ದ್ವೇಷಾತೀತ ಹಾಗೂ ಸೃಜನಶೀಲ ಸ್ವಾತಂತ್ರ್ಯದ ವಿಷಯಗಳನ್ನೊಳಗೊಂಡಂತೆ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದಾಗಿದ್ದು, ಪಂಪ ಮಹಾಕವಿ ಸ್ಮಾರಕವನ್ನು ನಿರ್ಮಿಸಿ, ಅಣ್ಣಿಗೇರಿಯಲ್ಲಿರುವ ಪಂಪ ಭವನವನ್ನು ಉನ್ನತೀಕರಿಸಿ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಬಹುದಾಗಿರುವುದರಿಂದ ಮೊದಲು ಅಣ್ಣೀಗೇರಿಯಲ್ಲಿ ಆದಿಕವಿ ಪಂಪ ಪ್ರತಿಷ್ಠಾನ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ತೀರ್ಮಾನಿಸಿ, ಆದೇಶ ಹೊರಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಕೋರಿರುವ ಹಿನ್ನಲೆಯಲ್ಲಿ ಕನ್ನಡದ ಆದಿಕವಿ ಎಂದೇ ಪ್ರಸಿದ್ಧವಾಗಿರುವ ಪಂಪ ಮಹಾಕವಿ ಹೆಸರಿನಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರತಿಷ್ಠಾನವನ್ನು ರಚಿಸಿ, ಆದೇಶಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದಾರೆ.

ಈ ವಿಷಯ ಕುರಿತು ಹಿರಿಯ ಬಂಡಾಯ ಸಾಹಿತಿ ಪ್ರೊ ಬರಗೂರು ರಾಮಚಂದ್ರಪ್ಪ ಕೆಲವು ದಿನಗಳ ಹಿಂದೆ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಅವರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಪಂಪನ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಿ ಆದೇಶಿಸಿದೆ.

Leave a Reply