ಬೆಂಗಳೂರು: ಮಾದಕ ವಸ್ತುಗಳ ಮಾರಾಟ ಸರಬರಾಜು ಸೇವನೆ ವಿರುದ್ಧ ಭರ್ಜರಿ ಕಾರ್ಯಾಚರಣೆ ಕೈಗೊಂಡಿರುವ ಪೂರ್ವ ವಿಭಾಗದ ಪೊಲೀಸರು ಚಾಕೊಲೇಟ್ ಕವರ್ ಗಳಲ್ಲಿ ಸುತ್ತಿ ಮಾರಾಟ ಮಾಡುತ್ತಿದ್ದ 2.10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ನಾಲ್ವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 2.10 ಕೋಟಿ ಮೌಲ್ಯದ 6 ಕೆಜಿ ಚರಸ್ 1.1 ಕೆ.ಜಿ ಎಂಡಿಎಂಎಯನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ದೇವರಜೀವನಹಳ್ಳಿಯ ಮುಖ್ಯರಸ್ತೆಯ ಆಟದ ಮೈದಾನ ಬಳಿ ದಾಳಿ ಮಾಡಿ ನೇಪಾಳದ ಆಕಾಶ್ ಎಂಬಾತನಿಂದ ಮಾದಕ ವಸ್ತು ಚರಸ್ನ್ನು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದ ಮುನಿವೀರಪ್ಪ ಬ್ಲಾಕ್ ನ ಮೊಹಮ್ಮದ್ ಸೂಫೀಯಾನ್(26) ನನ್ನು ಬಂಧಿಸಿ 1,39,50,000/-ರೂ ಬೆಲೆ ಬಾಳುವ ಒಟ್ಟು 4 ಕೆಜಿ 500 ಗ್ರಾಂ ತೂಕದ ಚರಸ್ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಆರೋಪಿಯು ವಿಚಾರಣೆಯಲ್ಲಿ ಚರಸ್ ನೇಪಾಳದಿಂದ ಖರೀದಿಸಿ ತಂದು ಯಾರಿಗೂ ತಿಳಿಯದಂತೆ ವಿವಿಧ ಕಂಪನಿಯ ಚಾಕಲೇಟ್ ಕವರ್ ಗಳಲ್ಲಿಟ್ಟು ನಗರ ಪ್ರತಿಷ್ಠಿತ ಸ್ಕೂಲ್, ಕಾಲೇಜ್ ವಿದ್ಯಾರ್ಥಿಗಳಿಗೆ ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಾಗೂ ಉದ್ಯಮಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣಗಳಿಸುತ್ತಿರುವುದು ಪತ್ತೆಯಾಗಿದೆ.
ಕಳೆದ ಡಿ.15 ರಂದು ದೇವರಜೀವನಹಳ್ಳಿಯ ಶ್ಯಾಂಪುರ ಮುಖ್ಯರಸ್ತೆಯ ರೈಲ್ವೇ ಗೇಟ್ ಬಳಿ ದಾಳಿ ಮಾಡಿ ಕೇರಳದಿಂದ ಮಾದಕ ವಸ್ತು ಚೆರಸ್ನ್ನು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದ ಪೆಡ್ಲರ್ ನನ್ನು ಬಂಧಿಸಿ 70 ಲಕ್ಷ ಮೌಲ್ಯದ 2 ಕೆ.ಜಿ ಚರಸ್ ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ವಿಚಾರಣೆಯಲ್ಲಿ ಗೋವಿಂದಪುರದ ಬರ್ಕತ್ ಜೊತೆ ಸೇರಿಕೊಂಡು ಮಾದಕವಸ್ತು ಚರಸ್ ಗಿರಾಕಿಗಳಿಗೆ, ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆಮಾರಾಟ ಮಾಡಿ ಸುಲಭವಾಗಿ ಹಣಗಳಿಸುತ್ತಿರುವುದಾಗಿ ತಿಳಿಸಿರುತ್ತಾನೆ.
ಮೋದಿ ಮುಖ್ಯ ರಸ್ತೆಯ ಉರ್ದು ಸ್ಕೂಲ್ ಬಳಿ ದಾಳಿ ಮಾಡಿ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಿ 60,60 ಲಕ್ಷ ಮೌಲ್ಯದ 1ಕೆ.ಜಿ 10 ಗ್ರಾಂ ಎಮ್.ಡಿ.ಎಮ್.ಎ ವಶಪಡಿಸಿಕೊಂಡು ಆರೋಪಿಯ ವಿಚಾರಣೆ ನಡೆಸಿದಾಗ ಮಾದಕ ವಸ್ತುಗಳನ್ನು ಈ ಹಿಂದೆ ಡಿ.ಜೆ.ಹಳ್ಳಿ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಜೀರಿಯಾ ದೇಶದ ಪ್ರಜೆ ಕೇಲ್ವಿನ್ ಜೇಮ್ಸ್ ಮುಖಾಂತರ ಡ್ರಗ್ಸ್ ಖರೀದಿಸಿ ತನ್ನ ಸಹಚರರರೊಂದಿಗೆ ಸೇರಿ ತನಗೆ ಪರಿಚಯಸ್ಥ ಗಿರಾಕಿಗಳಿಗೆ ಪ್ರತಿಷ್ಠಿತ ಸ್ಕೂಲ್, ಕಾಲೇಜ್ ಬಳಿ ಹೋಗಿ ವಿದ್ಯಾರ್ಥಿಗಳಿಗೆ ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಾಗೂ ಉದ್ಯಮಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸುಲಭವಾಗಿ ಹಣಗಳಿಸುತ್ತಿರುವುದಾಗಿ ತಿಳಿಸಿರುತ್ತಾನೆ.
ನಂತರ ಸದರಿ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿ, ಕೇಲ್ವಿನ್ ಜೇಮ್ಸ್ ಹಾಗೂ ಇತರರ ಮಾಹಿತಿಯನ್ನು ಕಲೆ ಹಾಕಿದ್ದು ಅವರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ,ಡಿಸಿಪಿ ಡಾ.ಭೀಮಾಶಂಕರ ಗುಳೇದ್ ಅವರಿದ್ದರು.




